ಮಂಗಳೂರು | ಭಾರತವನ್ನು ಪಾಕಿಸ್ತಾನವನ್ನಾಗಿಸುವುದಕ್ಕೆ ಅವಕಾಶ ಕೊಡಲ್ಲ: ಕೆ.ಟಿ ಜಲೀಲ್

Prasthutha|

►ಸಿಪಿಐಎಂ ನಿಂದ ರಾಜ್ಯಮಟ್ಟದ ಮುಸ್ಲಿಂ ಸಮಾವೇಶ

- Advertisement -

ಮಂಗಳೂರು: ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯತೀತ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ದೇಶದ ಅಭಿವೃದ್ಧಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಯಾವುದೇ ಒಂದು ಸಮುದಾಯವನ್ನು ದೂರವಿಟ್ಟು, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವ, ಶಾಸಕ ಡಾ. ಕೆ.ಟಿ. ಜಲೀಲ್ ಹೇಳಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಾತ್ಯತೀತತೆ, ಸಬಲೀಕರಣ ಮತ್ತು ಮುನ್ನಡೆ’ ಎಂಬ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಆಯೋಜನೆ ಮಾಡಿದ ರಾಜ್ಯಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ. ಹಿಂದೂ ಧರ್ಮದ ಅಶೋಕ ಚಕ್ರವರ್ತಿ ಕಳಿಂಗ ಯುದ್ಧ ನಂತರ ಬೌಧ್ಧ ಧರ್ಮ ಪಾಲಿಸಿದರು. ಅವರು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಅವರನ್ನು ಯಾರೂ ಪ್ರಶ್ನಿಸಿಲ್ಲ. ಮುಸ್ಲಿಂ ರಾಜರು 900 ವರ್ಷಗಳ ಕಾಲ ಆಡಳಿತ ನಡೆಸಿದರು. ಒಂದು ವೇಳೆ ಅವರು ಧರ್ಮವನ್ನು ಆಡಳಿತದಲ್ಲಿ ಜೊತೆಯಾಗಿಸಿದ್ದರೆ ಇಷ್ಟೊಂದು ಧೀರ್ಘ ಕಾಲ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಬಹದ್ದೂರೂ ಶಾರನ್ನು ದೇಶದ ಬಹಸಂಖ್ಯಾತ ಹಿಂದೂಗಳು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದರು ಎಂದು ಅವರು ವಿವರಿಸಿದರು.

- Advertisement -

ಮೊಘಲರ ಆಡಳಿತ ಕೊನೆಗೊಂಡಿದ್ದು ಅವರ ಧರ್ಮದ ಕಾರಣಕ್ಕೆ ಅಲ್ಲ. ಬದಲಾಗಿ ಬ್ರಿಟೀಷರ ಕಾರಣದಿಂದಾಗಿದೆ. ಮೊಘಲರು ಸಹಿಷ್ಣುತೆಯಿಂದ ಭಾರತದಲ್ಲಿ ಆಡಳಿತ ನಡೆಸಿದ್ದಾರೆ. ದೇಶವನ್ನು 16 ವರ್ಷ ಆಡಳಿತ ಮಾಡಿದ್ದು ಯಾವುದೇ ಧರ್ಮ ಆಚರಿಸದ ಜವಾಹಲರಾರ್ ನೆಹರೂ ಆಗಿದ್ದಾರೆ. ಯಾವುದೇ ಧರ್ಮ ಆಚರಿಸದ ನೆಹರೂ ಅವರನ್ನು ಯಾರೂ ಪ್ರಶ್ನಿಸಿಲ್ಲ. ಬಾಕ್ರಾ-ನಂಗಲ್ ಉದ್ಘಾಟನೆ ಮಾಡಿದ ನೆಹರೂ ಈ ಅಣೆಕಟ್ಟನ್ನು ತೋರಿಸಿ ಇದು ‘ಭಾರತದ ದೇವಾಲಯ’ ಎಂದು ಹೇಳಿದ್ದರು. ಆದರೆ ವರ್ತಮಾನ ಕಾಲದಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ ಕಾಣುವಾಗ ಬೇಸರವಾಗುತ್ತದೆ. ವಾಜಪೇಯಿ ಆಡಳಿತ ಮಾಡಬೇಕಾದರೆ ಭಾರತ ಇಷ್ಟು ಮಟ್ಟದಲ್ಲಿ ಕೋಮು ಧ್ರುವೀಕರಣಗೊಂಡಿರಲಿಲ್ಲ. ವಾಜಪೇಯಿ ಈ ರೀತಿ ಕೋಮ ಧ್ರುವೀಕರಣ ಮಾಡಿರಲಿಲ್ಲ. ಸಹಿಷ್ಣುತೆ, ಜಾತ್ಯತೀತೆಗೆ ವಾಜಪೇಯಿ ಬದ್ಧರಾಗಿದ್ದರು. ವಾಜಪೇಯಿ ನಂತರ ಬಂದ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಒಂದು ಸರ್ಕಾರವನ್ನು ತಿರಸ್ಕಾರ ಮಾಡುತ್ತಾ ಬಂದಿದೆ” ಎಂದು ಅಭಿಪ್ರಾಯಿಸಿದರು.

“ವಿಶ್ವದಾದ್ಯಂತ ಭಾರತ ಗುರುತಿಸಿದ್ದು ಬಹುತ್ವದಿಂದಾಗಿದೆ. ಆದರೆ ಈ ಬಹುತ್ವದ ಬಗ್ಗೆ ಏನೂ ತಿಳಿದಿಲ್ಲದ ಜನರು ಭಾರತವನ್ನು ಆಡಳಿತ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ತಮ್ಮ ದೇಶದಿಂದ ದೂರ ಮಾಡಿದ ಎಲ್ಲಾ ದೇಶಗಳು ಕೂಡಾ ನಾಶವಾಗಿದೆ. ಇದಕ್ಕೆ ಜರ್ಮನ್ ಒಂದು ಉದಾಹರಣೆ. ಜರ್ಮನ್ನಲ್ಲಿ ಯಹೂದಿಗಳನ್ನು ಓಡಿಸದಿದ್ದರೆ ಜರ್ಮನ್ ವಿಶ್ವದ ಶಕ್ತಿಶಾಲಿ ದೇಶವಾಗಿರುತ್ತಿತ್ತು. ಫ್ರಾನ್ಸ್, ಸ್ಪೇನ್ನಲ್ಲಿ ಕೂಡಾ ನಡೆದಿದ್ದು ಇದುವೇ ಆಗಿದೆ. ಈ ದೇಶ ತೊರೆದು ಹೋದ ಜನರು ತಾವು ನೆಲೆ ನಿಂತ ದೇಶವನ್ನು ಅಭಿವೃದ್ಧಿ ಮಾಡಿದರು. ಹಾಗೆಯೇ ಭಾರತದಲ್ಲಿ ಯಾವುದೇ ಜನಾಂಗ, ಧರ್ಮವನ್ನು ನಿರಾಕರಿಸಿ ದೇಶ ಮುನ್ನಡೆಸಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಉದ್ಯಾನದಲ್ಲಿ ಹಲವು ಬಗೆಯ ಹೂವುಗಳಿದ್ದರೆ ಅವು ನೋಡಲು ಸುಂದರ. ಹಾಗೆಯೇ ಭಾರತದಲ್ಲಿ ಹಲವಾರು ಸಂಸ್ಕೃತಿ ಇದ್ದರೆ ಅದು ನೋಡಲು ಸುಂದರ” ಎಂದು ಜಲೀಲ್ ಹೇಳಿದರು.

“ಭಾರತವನ್ನು ಪಾಕಿಸ್ತಾನವನ್ನಾಗಿಸುವುದಕ್ಕೆ ಅವಕಾಶ ಬೇಡ”

“ನಾವು ದೇಶವನ್ನು ಪಾಕಿಸ್ತಾನವನ್ನಾಗಿ ಮಾಡಲು ಶ್ರಮಿಸಬಾರದು. ವಿಭಜನೆಯಾಗಿ ನಿರ್ಮಾಣವಾದ ಪಾಕಿಸ್ತಾನ ಎಂದಿಗೂ ಕೂಡಾ ನೆಮ್ಮದಿಯಿಂದ ಇರುವ ದೇಶವಾಗಿಲ್ಲ. ಅಲ್ಲಿ ಹಿಂಸೆ, ದಾಳಿ ತೀವ್ರ ಮಟ್ಟಕ್ಕೆ ಏರಿದೆ. ಭಾರತವನ್ನು ಪಾಕಿಸ್ತಾನದಂತಹ ರಾಷ್ಟ್ರವನ್ನಾಗಿಸಲು ನಾವು ಅವಕಾಶ ನೀಡಬಾರದು. ನಮ್ಮ ದೇಶದಲ್ಲಿ ಜಾತ್ಯತೀತಯೇ ನಮ್ಮ ಜೀವವಾಯು. ಜಾತ್ಯತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ” ಎಂದರು.

“ನರೇಂದ್ರ ಮೋದಿ ಸರ್ಕಾರದ ಧಮನಕಾರಿ ಕ್ರಮ ಅಪಾಯಕಾರಿ. ಅದನ್ನು ನಾವು ಪರಾಭವಗೊಳಿಸಬೇಕು. ಎಲ್ಲಾ ಧರ್ಮಗಳು ಬೇರೆ ಬೇರೆಯಾದರೂ ಒಂದೇ ಜಾತ್ಯತೀತ ನಂಬಿಕೆ ಹೊಂದಿದೆ. ಬೈಬಲ್, ಕುರಾನ್, ಭಗವದ್ಗೀತೆ ಒಂದೇ ಭಾವೈಕತೆಯನ್ನು ಸಾರುತ್ತದೆ. ನೂರಾರು ವರ್ಷ ಕಾಲ ಆಳಿದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದಾದರೆ ಕೇವಲ ಎಂಟು ವರ್ಷ ಆಳಿದ ಮೋದಿ ಸರ್ಕಾರವನ್ನು ಕೂಡಾ ಸೋಲಿಸಲು ನಮಗೆ ಸಾಧ್ಯವಾಗಲಿದೆ,” ಎಂದು ತಿಳಿಸಿದರು.

“ದೇಶದಲ್ಲಿ ಗೋಮಾಂಸದ ವಿಚಾರದಲ್ಲಿ ಅದೆಷ್ಟೋ ಜನರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಈ ಆರ್ಎಸ್ಎಸ್ ಹಾಗೂ ಬಿಜೆಪಿ ಎಲ್ಲಾ ಮುಸ್ಲಿಮರನ್ನು ಈ ದೇಶದಲ್ಲಿ ಇಲ್ಲವಾಗಿಸಿದರೆ ಇಲ್ಲಿ ನಡೆಯುವ ಎಲ್ಲಾ ದಾಳಿಗಳು ಮುಗಿಯುತ್ತದೆಯೇ?, ದೇಶದಲ್ಲಿ ಮುಸ್ಲಿಮರು ಇಲ್ಲವಾದರೆ, ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲಿನ ದಾಳಿಯು ಮುಂದುವರಿಯುತ್ತದೆ. ಯಾವುದೇ ಜನಾಂಗದ ಹಕ್ಕುಗಳನ್ನು ನಿರಾಕರಿಸಿ ಭಾರತ ಮುನ್ನಡೆಯಲು ಸಾಧ್ಯವಿಲ್ಲ,” ಎಂದು ತಿಳಿಸಿದರು.

“ಬಾಬರಿ ಮಸೀದಿಯನ್ನು ನಾವು ಬಿಟ್ಟುಕೊಟ್ಟರೆ ಎಲ್ಲವೂ ಅಂತ್ಯವಾಗಲಿದೆ ಎಂದು ಮುಸ್ಲಿಮರು ಭಾವಿಸಿದರು. ಹಾಗಾಗಿ ಮಸೀದಿ ಬಿಟ್ಟುಕೊಡಲು ಮಾನಸಿಕವಾಗಿ ತಯಾರಾದರು. ಆದರೆ ಅಲ್ಲಿಗೆ ಎಲ್ಲವೂ ಅಂತ್ಯವಾಗಿಲ್ಲ. ಈಗ ಅವರೀಗ ಮಥುರಾ, ನಂತರ ಬೇರೆಲೋ ಗುರಿಯಾಗಿಸುತ್ತಿದ್ದಾರೆ. ಬಾಬರಿ ಮಸೀದಿಯ ಸಮಸ್ಯೆ ಬಗೆಹರಿದರೆ ಎಲ್ಲವೂ ಮುಗಿಯುವುದಿಲ್ಲ. ವಿಶ್ವದ ಎಲ್ಲ ದೇಶಗಳು ಪ್ರಸ್ತುತ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ. ತೀವ್ರ ಸಂಪ್ರದಾಯವಾದಿ ದೇಶವಾದ ಸೌದಿ ಕೂಡಾ ಅಭಿವೃದ್ಧಿಯತ್ತ ಮುಖ ಮಾಡಿದೆ. ಎಲ್ಲಾ ಗಲ್ಪ್ ದೇಶಗಳು ಕೂಡಾ ತಮ್ಮ ಹಲವು ನೀತಿಗಳನ್ನು ಬದಲಿಸುತ್ತಿದೆ. ಆದರೆ ಭಾರತ ಈಗ ಹಿಂದುಳಿದ ರಾಷ್ಟ್ರವಾಗಲು ಮುಂದಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ದೇಶದಲ್ಲಿ ಏನು ತಿನ್ನಬೇಕು, ಏನನ್ನು ಧರಿಸಬೇಕು ಎನ್ನುವುದು ಅವರ ಸ್ವಂತ ಆಯ್ಕೆ. ಅದರ ನಡುವೆ ಪ್ರಭುತ್ವ ಯಾಕೆ ಬರಬೇಕು? ಮಹಿಳೆಯರು ತಮಗೆ ಬೇಕಾದ ಬಟ್ಟೆ ಧರಿಸುವುದು ಅವರ ಆಯ್ಕೆಯಾಗಿದೆ. ಹಿಜಾಬೋ ಇತ್ಯಾದಿ ಆಯ್ಕೆ ಮಹಿಳೆಯದ್ದು. ಅದರ ನಡುವೆ ಆಡಳಿತ ಬರಬಾರದು,” ಎಂದು ಹೇಳಿದ ಜಲೀಲ್, “ಈ ಹಿಂದೆ ಉತ್ಸವ, ಉರೂಸುಗಳ ನೆಪದಲ್ಲಿ ದೇಶದ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಎಲ್ಲರೂ ಜೊತೆಯಾಗಿ ಸೇರಲೆಂದೇ ಪೂರ್ವಜರು ಈ ಉತ್ಸವ, ಉರೂಸುಗಳನ್ನು ಆರಂಭ ಮಾಡಿರುವುದು. ವಿಶ್ವದ ಬೇರೆ ಎಲ್ಲೂ ಕೂಡಾ ಇಂತಹ ಆಚರಣೆಗಳು ಇಲ್ಲ. ಈಗ ಬೇರೆ ಧರ್ಮದ ವ್ಯಕ್ತಿ ವ್ಯಾಪಾರಕ್ಕೆ ಬರಬಾರದು ಎಂಬ ರಾಜಕೀಯ ನಡೆಸಲಾಗುತ್ತಿದೆ. ಧರ್ಮದ ವ್ಯಕ್ತಿ ವ್ಯಾಪಾರಕ್ಕೆ ಬಂದರೆ ಸಮಸ್ಯೆ ಏನು? ಯೂರೋಪ್ , ಮಧ್ಯಪ್ರಾಚ್ಯ ದೇಶಗಳು ಕೂಡಾ ಅದನ್ನೇ ಮಾಡಿದರೆ ವಿಶ್ವದ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ಎಂದು ಜಲೀಲ್ ಪ್ರಶ್ನಿಸಿದರು.

ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ರಾಜ್ಯಾಧ್ಯಕ್ಷರು, ಹಿರಿಯ ಸಾಹಿತಿ ಡಾ| ಕೆ ಷರೀಫಾ, ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು ಬಸವರಾಜು, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ್ ಶೆಟ್ಟಿ, ಸಾಹಿತಿ ಕೆ ನೀಲಾ, ರಾಜ್ಯ ಮುಖಂಡರು ಕೆ ಎಸ್ ವರಲಕ್ಷ್ಮೀ, ಅಕ್ರಂ ಪಾಶ ಬಾಗೇಪಳ್ಳಿ, ಶೇಖ್ ಷಾ ಖಾದ್ರಿ, ಖಾಸಿಂ ಸರ್ದಾರ್ ರಾಮದುರ್ಗ, ಖಾಸಿಂ ಕೊಪ್ಪಳ, ಉಪಸ್ಥಿತರಿದ್ದರು. ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

Join Whatsapp