ಸಂಸದರ ವಿರುದ್ಧ ಹೊರಡಿಸಿರುವ ಸರ್ವಾಧಿಕಾರಶಾಹಿ ಆದೇಶ ಹಿಂಪಡೆಯಿರಿ: ಸಿಪಿಐಎಂ ಪಾಲಿಟ್ ಬ್ಯುರೊ

Prasthutha|

ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಸಂಸತ್ತಿನ ಸದಸ್ಯರು ಯಾವುದೇ ಪ್ರತಿಭಟನಾ ಕಾರ್ಯಗಳನ್ನು ನಡೆಸುವಂತಿಲ್ಲ ಎಂಬ ಸರ್ವಾಧಿಕಾರಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐಎಂ ಪಾಲಿಟ್ ಬ್ಯೂರೋ ಆಗ್ರಹಿಸಿದೆ.

- Advertisement -

ದೇಶ ಮತ್ತು ಜನರಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಮುಂದಿಡಲು ಸಂಸದರು ಪ್ರತಿಭಟನೆಗಳನ್ನು ನಡೆಸುವುದು ವಾಡಿಕೆಯಾಗಿದೆ. ಭಾರತೀಯ ಸಂಸತ್ತು ಕಾರ್ಯನಿರ್ವಹಿಸಲು ಆರಂಭಿಸಿದಾಗಿನಿಂದ ಇದು ಅವರ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಅಸಮರ್ಥತೆಯಂತಹ ಸರ್ಕಾರದ ವಿರುದ್ಧ ಆಗಾಗ್ಗೆ ಬಳಸುವ ಪದವನ್ನೂ ಒಳಗೊಂಡಂತೆ ಅಸಂಸದೀಯ ಪದಗಳ ಪಟ್ಟಿಯನ್ನು ವಿಸ್ತರಿಸಲು ಹೊರಡಿಸಲಾದ ಹೊಸ ನಿರ್ದೇಶನದ ಜೊತೆಗೆ, ಪ್ರತಿಭಟನೆಗಳನ್ನು ನಿಷೇಧಿಸುವ ಈ ಆದೇಶವು ಸಂಸತ್ತಿನ ಮೇಲೆ, ಅದರ ಸ್ವತಂತ್ರ ಕಾರ್ಯನಿರ್ವಹಣೆ ಮತ್ತು ಸಂಸದರ ಅವಿಭಾಜ್ಯ ಹಕ್ಕುಗಳ ಮೇಲೆ ಅತ್ಯಂತ ಲಜ್ಜೆಗೆಟ್ಟ ನಿರಂಕುಶ ಪ್ರಹಾರವಾಗಿದೆ ಎಂದು ಅದು ಹೇಳಿದೆ.

ಸಂಸತ್ತಿನಲ್ಲಿ ಪ್ರತಿನಿಧಿಸಲ್ಪಟ್ಟಿರುವ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸದೆ ಕೈಗೊಂಡ ಈ ಏಕಪಕ್ಷೀಯ ನಿರ್ಧಾರವು ನಿರ್ಲಜ್ಜ ಪ್ರಜಾಪ್ರಭುತ್ವ-ವಿರೋಧಿ ಕ್ರಮವಾಗಿದೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮುನ್ನಾದಿನದಂದು ಇದನ್ನು ಮಾಡಲಾಗುತ್ತಿದೆ. ಈ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಕೇಂದ್ರ ಸರ್ಕಾರಕ್ಕೆ ಕರೆ ನೀಡಿದೆ.

Join Whatsapp