ಕಲ್ಲಡ್ಕ ಭಟ್ಟನ ವಿರುದ್ಧ ಪ್ರತಿಭಟನೆಗೆ ಅನುಮತಿ ಕೇಳಿದ ಮಹಿಳೆಯರ ಮೇಲೆ ದೂರು ದಾಖಲು: WIM ಖಂಡನೆ

Prasthutha|

ಮಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ ಮಂಗಳವಾರ 3 ಗಂಟೆಗೆ ಸರಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್ ಇಲಾಖೆ ವಿನಾಕಾರಣ ಅನುಮತಿ ನಿರಾಕರಿಸಿತ್ತು. ಶಾಂತಿಯುತ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸ್ ಇಲಾಖೆ ಮಹಿಳೆಯರ ಮೇಲೆ ಸೆಕ್ಷನ್ 107ರಡಿ ಕೇಸ್ ದಾಖಲಿಸಿದೆ. ಇದನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯಾದ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ದ್ವೇಷ ಭಾಷಣದ ದೊಡ್ಡ ಇತಿಹಾಸವನ್ನೇ ಹೊಂದಿರುವ ಪ್ರಭಾಕರ್ ಭಟ್ ನನ್ನು ಬಂಧಿಸಲು ಇದುವರೆಗೆ ಧೈರ್ಯ ತೋರದ ಪೋಲೀಸ್ ಇಲಾಖೆ ಅದರ ವಿರುದ್ಧ ಪ್ರತಿಭಟಿಸಲು ಸಜ್ಜಾದ ಮಹಿಳೆಯರ ಮೇಲೆಯೇ ಕೇಸು ದಾಖಲಿಸಿರುವುದು ಅಕ್ಷಮ್ಯ. ಸಬಲೀಕರಣದ ಬಗ್ಗೆ ,ಕಾನೂನು ಸುವ್ಯವಸ್ಥೆ ಬಗ್ಗೆ, ಸಾಂವಿಧಾನಿಕ ನ್ಯಾಯದ ಬಗ್ಗೆ ಮಾತುಗಳನ್ನಾಡುವ ಸರ್ಕಾರಕ್ಕೆ ಇಂದಿನ ತನಕ ಆರೋಪಿಯೊಬ್ಬನನ್ನು ಬಂಧಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಸರಕಾರ ಬಿಜೆಪಿಯ IT ಸೆಲ್ ಗೆ ಬೆದರಿದಂತೆ ತೋರುತ್ತದೆ. ಮಾತ್ರವಲ್ಲ ಮುಂಬರುವ ಲೋಕಸಭಾ ಚುನಾವಣೆಗೆ ಮತ ಬೇಟೆಯ ಭರಾಟೆಯಲ್ಲಿ ಮೃದು ಹಿಂದುತ್ವಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನಾಯಕರನ್ನು ಬಂಧಿಸುವ ಇಚ್ಚಾಶಕ್ತಿಯನ್ನು ಹೊಂದಿಲ್ಲ ಎಂದು ಆರೋಪಿಸಿದರು.

ತನ್ನ ಚುನಾವಣಾ ರಾಜಕೀಯಕ್ಕಾಗಿ ಪ್ರಜಾಪ್ರಭುತ್ವ ಸಂವಿಧಾನ ಮತ್ತು ನ್ಯಾಯಗಳನ್ನು ಬಲಿ ನೀಡುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ನಿಲುವಾಗಿದೆ. ಇದನ್ನು ಸರಕಾರ ಹಲವು ಬಾರಿ ಸಾಬೀತುಪಡಿಸಿದೆ. ವಿಶೇಷತಃ 2013ರಲ್ಲಿ ಇದೇ ಪ್ರಭಾಕರ್ ಭಟ್ಟನ ಕೇಸ್ ಅನ್ನು ರಿ ಓಪನ್ ಮಾಡಿ ಬಂದಿಸುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಐದು ವರ್ಷದುದ್ದಕ್ಕೂ ಬಂಧಿಸಿಲ್ಲ. ಇದೀಗ ಪುನಃ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅದೇ ಸಿದ್ದರಾಮಯ್ಯ ಸರ್ಕಾರ ತನ್ನ ಹಳೆ ಚಾಳಿಯನ್ನು ಮುಂದುವರಿಸಿದೆ . ಇದರಿಂದಾಗಿ ಚುನಾವಣೆಗೆ ಮುನ್ನ ನೀಡಿದ ಭರವಸೆಗಳೆಲ್ಲವೂ ನೀರಿನ ಮೇಲಿನ ಹೋಮದಂತಾಗಿದೆ.ಈ ಮೂಲಕ ಸರಕಾರ ಮತದಾರರನ್ನು ಕೂಡ ವಂಚಿಸುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನೈಜ ಕಾಳಜಿ, ನಂಬಿಕೆ, ಪ್ರೇಮ ಇರುವುದಾದರೆ ತಕ್ಷಣ ಶಾಂತಿಯುತ ಪ್ರತಿಭಟಿಸಲು ಹೊರಟಿರುವ ಮಹಿಳೆಯರ ಮೇಲಿನ ಕೇಸ್ ನ್ನು ಹಿಂಪಡೆದು ಪ್ರತಿಭಟನೆಗೆ ಅವಕಾಶ ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಆರೋಪಿಯನ್ನು ತಕ್ಷಣ ಬಂಧಿಸಬೇಕಾಗಿದೆ ಎಂದು ವಿಮನ್ ಇಂಡಿಯಾ ಮೂವ್ಮೆಂಟ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Join Whatsapp