ಬಾಂಗ್ಲಾದೇಶದಲ್ಲಿ ದೇವಸ್ಥಾನಕ್ಕೆ ದಾಳಿ ನಡೆಸಿದವರನ್ನು ಹುಡುಕಿ ಶಿಕ್ಷಿಸುತ್ತೇವೆ: ಪ್ರಧಾನಿ ಶೇಖ್ ಹಸೀನಾ

Prasthutha|

ಡಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿರುವವರನ್ನು ಹುಡುಕಿ ಶಿಕ್ಷಿಸುತ್ತೇವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ದುರ್ಗಾ ಪೂಜೆ ವೇಳೆ ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ನಾಲ್ಕು ಜನರನ್ನು ಹತ್ಯೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಹಸೀನಾ ದುರ್ಗಾ ಪೂಜೆ ನಡೆಯುವ ಸ್ಥಳ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

- Advertisement -


ದೇಶದಲ್ಲಿ ಗಲಭೆಗೆ ಕಾರಣಕರ್ತರಾದ ಎಲ್ಲಾ ಆರೋಪಿಗಳನ್ನು ಹುಡುಕಿ ಶಿಕ್ಷೆ ನೀಡುತ್ತೇವೆ. ಆಗಿರುವ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲು ನಮ್ಮ ಸರ್ಕಾರ ಎಂದಿಗೂ ಸಿದ್ಧವಿಲ್ಲ. ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ನೀಡುತ್ತೇವೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ದುರ್ಗಾ ಪೂಜೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಶಿಕ್ಷೆ ನೀಡುತ್ತೇವೆ ಎಂದು ಪುನರುಚ್ಚರಿಸಿದರು.


ಕಳೆದ ದುರ್ಗಾ ಪೂಜೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಚಂದ್ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ಖಲಿ ಮತ್ತು ಕಾಕ್ಸ್ ಬಜಾರ್ ನ ಪೆಕುವಾದಲ್ಲಿ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿತ್ತು.

Join Whatsapp