ರುಕ್ಸಾನಾಳ ಬಗ್ಗೆ ಚುರುಕ್ ಎನ್ನದ BJPಯವರ ಕರುಳು‌ ನೇಹಾ ವಿಚಾರದಲ್ಲಿ ಮಾತ್ರ ಯಾಕೆ ಹೆಂಗರುಳಾಗಿದೆ?: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಫಯಾಜ್ ಎಂಬ ಕ್ರಿಮಿಯಿಂದ ಹತ್ಯೆಯಾದ ನೇಹಾ ಹಾಗೂ ಪ್ರದೀಪ್ ಎಂಬ ದುರುಳನಿಂದ ಕೊಲೆಯಾದ‌ ರುಕ್ಸಾನಾ ಎರಡೂ ಹೆಣ್ಣು ಜೀವಗಳೇ ಆಗಿದ್ದಾರೆ. ಹತ್ಯೆಯಾದ ನೇಹಾ ಪ್ರಕರಣವನ್ನು ರಾಜಕೀಯಗೊಳಿಸಿ ಬೆಂಕಿ ಹಚ್ಚಲು‌ ಪ್ರಯತ್ನಿಸುತ್ತಿರುವ BJPಯವರು ರುಕ್ಸಾನಾ ಪ್ರಕರಣದಲ್ಲೂ ಇದೇ ರೀತಿ ವರ್ತಿಸಿದ್ದರೆ ಭೇಷ್ ಎನ್ನಬಹುದಿತ್ತು. ಕೊಲೆಯಾದ ರುಕ್ಸಾನಾಳ ಬಗ್ಗೆ ಚುರುಕ್ ಎನ್ನದ BJPಯವರ ಕರುಳು‌ ನೇಹಾ ವಿಚಾರದಲ್ಲಿ ಮಾತ್ರ ಯಾಕೆ ಹೆಂಗರುಳಾಗಿದೆ.? ಕೊಲೆಯಾದವರ ಹಾಗೂ ಕೊಲೆ ಮಾಡಿದವರ ಧರ್ಮ ಇದಕ್ಕೆ ಕಾರಣವಲ್ಲವೇ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಕುರಿತು ಸರಣಿ X ಪೋಸ್ಟ್ ಮಾಡಿರುವ ಅವರು, ನೇಹಾ ಪ್ರಕರಣದಲ್ಲಿ ಬಿಜೆಪಿಯವರದ್ದು‌ ಮೊಸಳೆ ಕಣ್ಣೀರೆ ಹೊರತು ಬೇರೆನೂ ಅಲ್ಲ. ನೇಹಾ‌ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನಿನ ಕುಣಿಕೆ ತೊಡಿಸಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದ ಫಯಾಜ್ ಎಂಬ ದುರುಳನಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು. ಹೆಣದ ಮೇಲೆ ರಾಜಕೀಯ ಮಾಡುವುದಲ್ಲ. ಹೀಗೆ ರಾಜಕೀಯ ಮಾಡುವುದರಿಂದ ನೊಂದ ನೇಹಾ ಕುಟುಂಬ ಇನ್ನಷ್ಟು ದುಃಖ ಹಾಗೂ ಮಾನಸಿಕ ಆಘಾತಗೊಳಗಾಗಲಿದೆ ಎಂಬ ಕನಿಷ್ಠ ಪ್ರಜ್ಞೆ ಬಿಜೆಪಿಯವರಿಗಿರಬೇಕು. ತೀರಾ ವಾಕರಿಕೆ ಬರುವಂತೆ ವರ್ತಿಸಬಾರದು ಎಂದು ಕಿಡಿಗಾರಿದ್ದಾರೆ.

ಹುಬ್ಬಳ್ಳಿಯಲ್ಲಿ ನಿನ್ನೆ ನಡೆದಿರುವ ನೇಹಾ ಹಿರೇಮಠ್‌ರ ಬರ್ಬರ ಕೊಲೆ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಅದೇ ರೀತಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯವರ ನಡೆಯೂ ಕೂಡ ಕ್ಷಮಾರ್ಹವಲ್ಲ. ನೇಹಾ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ BJPಯವರಿಗೆ ಒಂದು ಪ್ರಶ್ನೆಯಿದೆ. ಕಳೆದ ಮಾರ್ಚ್ 31 ರಂದು ಪ್ರದೀಪ್ ಎಂಬಾತ ತಾನು ಪ್ರೀತಿಸುತ್ತಿದ್ದ 22 ವರ್ಷದ ರುಕ್ಸಾನಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟು ಹಾಕಿದ್ದ. ಜೊತೆಗೆ ಆಕೆಯ ಎಳೆಯ ಮಗುವನ್ನು ಬೆಂಗಳೂರಿನ ಕೈಗಾಡಿಯೊಂದರ ಮೇಲೆ ಅನಾಥವಾಗಿ‌ ಮಲಗಿಸಿ ಹೋಗಿದ್ದ. ಈ ಬಗ್ಗೆ ಬಿಜೆಪಿಯವರು ಇಲ್ಲಿಯವರೆಗೂ ಸೊಲ್ಲೆತ್ತಿಲ್ಲ ಎಂದ ಸಚಿವರು, ಬಿಜೆಪಿಯವರ ಕಣ್ಣಿಗೆ ಈ ಪ್ರಕರಣ ಕ್ರೌರ್ಯದ ಪರಮಾವಧಿ ಎನ್ನಿಸಲಿಲ್ಲವೆ ಎಂದು ಕೇಳಿದ್ದಾರೆ.

Join Whatsapp