ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ ?: ಮೋದಿಗೆ ಧ್ವಜ ಸತ್ಯಾಗ್ರಹ ಸಮಿತಿಯ 10 ಪ್ರಶ್ನೆ

Prasthutha|

ಮೈಸೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗೆ ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಕಾಳಚನ್ನೇಗೌಡ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

- Advertisement -

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಕಾಳಚನ್ನೇಗೌಡ, ಹರ್ ಘರ್ ತಿರಂಗಾ ಅಭಿಯಾನವನ್ನು ಟೀಕಿಸಿದರು. ಅಲ್ಲದೆ ಅಭಿಯಾನದ ಕುರಿತು ಕೆಲವು ಪ್ರಶ್ನೆಗಳಿಗೆ  ಪ್ರಧಾನಿ ಮೋದಿ ಉತ್ತರಿಸುವಂತೆ ಅವರು ಆಗ್ರಹಿಸಿದ್ದಾರೆ.

ಅವರು ಹಾಕಿರುವ ಹತ್ತು ಪ್ರಶ್ನೆಗಳು ಹೀಗಿವೆ.

- Advertisement -

1.ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ?

2.ಸರಕಾರಿ ಕಚೇರಿಗಳ ಮೂಲಕ, ಬ್ಯಾಂಕು, ಮುನಿಸಿಪಾಲಿಟಿ ಅಥವಾ ಇತರೆ ಸ್ವಾಯತ್ತ ಸಂಸ್ಥೆಗಳ ಮೂಲಕ, ವಿದೇಶಿವಸ್ತ್ರ ಹಾಗೂ ಸಿಂಥೆಟಿಕ್ ವಸ್ತ್ರದಿಂದ ತಯಾರಾದ ಧ್ವಜಗಳನ್ನೇಕೆ ಬಲವಂತದಿಂದ ಮಾರಾಟ ಮಾಡಿಸುತ್ತಿದ್ದೀರಿ?

3.ಅವು ಅಲ್ಲಲ್ಲಿ ಹರಿದಿದೆ, ಹಾಳಾಗಿವೆ, ಅಳತೆ ತಪ್ಪಿವೆ, ಆಕಾರ ತಪ್ಪಿವೆ, ಅಶೋಕಚಕ್ರವು ಎತ್ತೆತ್ತಲೋ ಹೊರಳಿದೆ, ಚಕ್ರದ ಕೀಲುಗಳ ಸಂಖ್ಯೆ ಏರುಪೇರಾಗಿವೆ ಎಂಬ ಸಂಗತಿಯು ತಮ್ಮ ಗಮನಕ್ಕೆ ಬಂದಿಲ್ಲವೆ? ಇಂತಹ ಬಾವುಟಗಳ ಭ್ರಷ್ಟ ಉತ್ಪಾದಕರನ್ನು ಶಿಕ್ಷಿಸುವ ಬದಲು ಭ್ರಷ್ಟಗೊಂಡ ಬಾವುಟಗಳನ್ನೇ ಅಧಿಕೃತವಾಗಿ ಮಾರಾಟ ಮಾಡುವುದು ಭ್ರಷ್ಟಾಚಾರವಲ್ಲವೆ?

4.ನಮ್ಮ ಧ್ವಜ ಅಹಿಂಸೆಯ ದ್ಯೋತಕವಾದದ್ದು. ಶಾಂತಿಪ್ರಿಯ ಅಶೋಕನ ಲಾಂಛನ ಹಾಗೂ ಅಹಿಂಸಾತ್ಮಕ ಖಾದಿಬಟ್ಟೆಗಳು ಅದರಲ್ಲಿ ಅಂತರ್ಗತವಾಗಿವೆ. ಹೀಗಿರುವಾಗ, ಸ್ವಾತಂತ್ರ್ಯದ ಅಮೃತಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಯುದ್ಧಭೂಮಿಯೊಂದರಿಂದ ಉದ್ಘಾಟಿಸಿ, ಭಾರತವು ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?

5.ಸಿಂಥೆಟಿಕ್ ಬಾವುಟಗಳ ಉತ್ಪಾದನೆ, ಆಯತ, ವಿತರಣೆಗೆಂದು ತಮ್ಮ ಸರಕಾರವು ಎಷ್ಟು ಪ್ರಮಾಣದ ತೆರಿಗೆ ಹಣವನ್ನು ಖರ್ಚು ಮಾಡಿದೆ? ಇತ್ತ ಖಾದಿ ಹಾಗೂ ಗ್ರಾಮೋದ್ಯೋಗದ ಉತ್ಪಾದನೆ, ಆಯಾತ, ವಿತರಣೆಯನ್ನೇ ಹೆಚ್ಚುಕಡಿಮೆ ಸ್ಥಗಿತಗೊಳಿಸಿರುವ ತಮ್ಮ ಸರಕಾರವು ಇದೇ ಹಣವನ್ನು ಗ್ರಾಮೋದ್ಯೋಗದ ಪುನಶ್ಚೇತನಕ್ಕಾಗಿ ಖರ್ಚು ಮಾಡಬಹುದಿತ್ತಲ್ಲವೇ? ಬಡವರ ಪರವಾದ ಕಾರ್ಯಕ್ರಮವಲ್ಲವೇ ಸ್ವದೇಶಿ?

6.ಭಾರತದ ರಾಷ್ಟ್ರಧ್ವಜವು ಚೀನಾದಿಂದ ನಿರ್ಮಾಣಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ದಿ ನಿಜವೇ?

7.ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಮಳೆಯಿರಲಿ, ಬಿಸಿಲಿರಲಿ, ಹಗಲಿರಲಿ, ರಾತ್ರಿಯಿರಲಿ, ಧ್ವಜವು ಹರಿದಿರಲಿ, ಮಲಿನವಾಗಿರಲಿ, ಕಂಬಕ್ಕೆ ಜೋತು ಬಿದ್ದಿರಬೇಕು ಎಂದು ಧ್ವಜ ನಿಯಮವನ್ನು ತಾವು ತಿದ್ದಿರುವುದು ಸರಿಯೇ?

8.ಹರ್-ಘರ್-ತಿರಂಗ ಎಂಬುದು, ವಿದೇಶಿಯರೇ ದೇಶಬಿಟ್ಟು ತೊಲಗಿ ಎಂಬ ಸ್ವದೇಶಿ ಚಳುವಳಿಯ ಕೂಗಾಗಿತ್ತು. ಪವಿತ್ರ ಆರ್ಥಿಕತೆ ಹಾಗೂ ಸ್ವದೇಶಿ ಉತ್ದಾದನೆಗಳನ್ನು ಕಡೆಗಣಿಸಿರುವ ತಮ್ಮ ಸರಕಾರವು ಹರ್-ಘರ್-ತಿರಂಗ ಎಂದು ಕೂಗುವುದು ವಿಪರ್ಯಾಸವಲ್ಲವೆ?

9.ಸರಕಾರದ ಅಧೀನದಲ್ಲಿರುವ ಖಾದಿ ಸಂಸ್ಥೆಯು ಶುದ್ಧ ಖಾದಿ ಬಾವುಟವನ್ನು ಸಾಮಾನ್ಯರ ಕೈಗೆಟುಕದಂತಹ, ಅತಿ ದುಬಾರಿ ಬೆಲೆಗೆ ಮಾರುತ್ತಿರುವುದು ಸರಿಯೆ?

10.ಕಲೆ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ಅಕಾಡೆಮಿಗಳು ಸರಕಾರದ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿ ಕಲಾವಿದರುಗಳ ಮೇಲೆ ಬಲವಂತ ಹೇರುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Join Whatsapp