ಉಡುಪಿಯಿಂದ ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದ್ಯೋ ಗೊತ್ತಿಲ್ಲ : ಮುತಾಲಿಕ್

Prasthutha|

ಮೈಸೂರು: ಉಡುಪಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

- Advertisement -

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಪ್ರಕರಣದ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಕೈವಾಡವಿದೆ. ಆದ್ರೆ ಈ ಬಗ್ಗೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲೇ ಪ್ರಕರಣ ದಾರಿ ತಪ್ಪಿಸುವ ಕೆಲಸ ಆಗಿತ್ತು ಎಂದು ದೂರಿದ್ದಾರೆ.

ಘಟನೆ ನಡೆಯದೇ ಇದ್ದಿದ್ದರೆ ಮಕ್ಕಳಿಂದ ಏಕೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ? ಪತ್ರ ಬರೆದುಕೊಟ್ಟಿದ್ದಾರೆ ಅಂದ ಮೇಲೆ ತಪ್ಪು ಮಾಡಿದ್ದಾರೆ ಅಂತಾ ಅಲ್ವಾ? ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಸಹ ಆ ರೀತಿ ಹೇಳಬಾರದಿತ್ತು. ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದೆಯೋ ಗೊತ್ತಿಲ್ಲ. ಎಲ್ಲವೂ ಸಮಗ್ರವಾಗಿ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

- Advertisement -

ಇದೇ ವೇಳೆ ಜ್ಞಾನವಾಪಿ ಮಸೀದಿ ವಿಚಾರವಾಗಿ ಮಾತನಾಡಿ, ದೇಶದ ಮುಸ್ಲಿಮರು ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ಧಟತನದ ವರ್ತನೆ ತೋರಬಾರದು. ಕಾಶಿ ವಿಶ್ವನಾಥ ದೇಗುಲವನ್ನ ಹಿಂದೂಗಳಿಗೆ ಬಿಟ್ಟುಕೊಡಬೇಕು. 1992ರ ಡಿಸೆಂಬರ್ 6ರಲ್ಲಿ ನಡೆದ ಘಟನೆ ಮರುಕಳಿಸುವಂತೆ ಮಾಡಬೇಡಿ. ಹಿಂದೂಗಳನ್ನ ಕೆರಳಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಸ್ಲಿಂ ಸಂಘಟನೆಗಳು ಹದ್ದುಮೀರಿ ವರ್ತಿಸುತ್ತಿವೆ. ದೇಶದ ಮುಸ್ಲಿಮರು ಬಾಬರ್‌ನನ್ನ ಅನುಸರಿಸುತ್ತಿದ್ದಾರೆ. ಪ್ರಪಂಚದಲ್ಲಿ ಎಲ್ಲಾದರೂ ಜ್ಞಾನವಾಪಿ ಹೆಸರಿನ ಮಸೀದಿ ಇದೆಯಾ? ಅದು ದೇವಸ್ಥಾನ ಎನ್ನಲು ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಮುಸ್ಲಿಮರು ಸೌಜನ್ಯದಿಂದ ಬಿಟ್ಟು ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

Join Whatsapp