ಮತದಾರರ ಮಾಹಿತಿ ಕನ್ನ ಪ್ರಕರಣದ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನಡೆಯಲಿ: ಕಾಂಗ್ರೆಸ್ 

Prasthutha|

ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣವನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ನಡೆಸುವುದು ಸೇರಿದಂತೆ ಅನೇಕ ಮನವಿಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಮಾಡಿದ್ದಾರೆ.

- Advertisement -

ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಕೆ ಆರ್ ವೃತ್ತ ಸಮೀಪದ ಅವರ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತಿತರ ನಾಯಕರು ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

•ಈ ಪ್ರಕರಣದಲ್ಲಿ ಬಿಎಲ್’ಒ ಆಗಿ ಗುರುತಿನ ಚೀಟಿ ವಿತರಣೆ ಮಾಡಿರುವ ಜಿಲ್ಲಾ ಚುನಾವಣಾಧಿಕಾರಿ, ವಿಧಾಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

- Advertisement -

•ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿರುವ ಹಾಗೂ ಸೇರ್ಪಡೆಯಾಗಿರುವ ಹೆಸರುಗಳ ಪಟ್ಟಿಯನ್ನು ಪರಿಶೀಲನೆ ನಡೆಸಬೇಕು. ಚುನಾವಣಾ ಆಯೋಗದ ನೈಜ್ಯ ಅಧಿಕಾರಿಗಳು ಇದರ ಪರಿಶೀಲನೆ ಮಾಡಬೇಕು.

•ಮತದಾರರ ಪಟ್ಟಿಯನ್ನು ಎಲ್ಲ ಪಕ್ಷಗಳಿಗೆ ನೀಡಬೇಕು. ಅಲ್ಲದೆ ಬೂತ್ ಮಟ್ಟದ ಏಜೆಂಟರ ಜತೆ ಮನೆ ಮನೆಗೆ ಹೋಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು.

•ಈ ಪ್ರಕರಣದಲ್ಲಿ ಸರಿಯಾಗಿ ದೂರು ನೀಡಿಲ್ಲ, ಎಫ್’ಐಆರ್ ದಾಖಲಿಸಿಲ್ಲ. ಈ ಪ್ರಕರಣವನ್ನು ರಾಜ್ಯ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು.

•ಸಂಸ್ಥೆಯ ಆಡಳಿತ ಮಂಡಳಿ ಅವರ ಸಂಪರ್ಕದಲ್ಲಿರುವ ಸಚಿವರು, ಅಧಿಕಾರಿಗಳನ್ನು ಬಂಧಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಮನವಿ ಸಲ್ಲಿಕೆಗೂ ಮುನ್ನ ಹಾಗೂ ಸಲ್ಲಿಕೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಸತ್ಯಾಂಶವನ್ನು ಜನತೆ ಮುಂದೆ ಇಟ್ಟಿರುವ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಕಾಂಗ್ರೆಸ್ ಪಕ್ಷದ ಹಾಗೂ ರಾಜ್ಯದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಅರಿವಾಗಿ ಬಿಜೆಪಿ ಈ ರೀತಿ ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿ ಇರುವ ಕಡೆ ಖಾಸಗಿ ಸಂಸ್ಥೆಗಳ ಮೂಲಕ ಚುನಾವಣಾ ಆಯೋಗದ ಮಾಹಿತಿ, ಪಾಸ್ ವರ್ಡ್, ಕೋಡ್ ಗಳನ್ನು ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು, ಕಾರ್ಯಕರ್ತರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರಬೇಕು. ಯಾರ ಹೆಸರು ಇರಬಾರದು ಎಂದು ಇವರು ತೀರ್ಮಾನಿಸಿದ್ದಾರೆ. ಈ ಬಾರಿ 27 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮನೆ ಮನೆಗೆ ಹೋಗಿ ಮತದಾರರ ಹೆಸರನ್ನು ಕೈಬಿಡುವ ಹಾಗೂ ಸೇರಿಸುವ ಪ್ರಕ್ರಿಯೆ ಮಾಡಿಲ್ಲ. ಮುಖ್ಯ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರೇ ಖಾಸಗಿ ಸಂಸ್ಥೆಗಳಿಗೆ ಬಿಎಲ್’ಒಗಳ ನೇಮಕ ಮಾಡುವ ಅಧಿಕಾರವಿಲ್ಲ, ಇದನ್ನು ಸರ್ಕಾರ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳೇ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಟ್ರಸ್ಟ್ ಮೂಲಕ ಸಾವಿರಾರು ಮಂದಿಗೆ ಹೇಗೆ ಬಿಎಲ್’ಒ ಆಗಿ ಗುರುತಿನ ಚೀಟಿ ನೀಡಲಾಗಿದೆ. ಇದುವರೆಗೂ ಯಾವುದೇ ಪ್ರಮುಖ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿಲ್ಲ, ಆವರ ಬಂಧನವಾಗಿಲ್ಲ. ಯಾವ ಸಚಿವರು ಇದಕ್ಕೆ ಬೆಂಬಲ ನೀಡಿ, ಇದರ ಸೂತ್ರಧಾರರಾಗಿದ್ದಾರೆಯೋ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಮೂವರು ಮಂತ್ರಿಗಳು, ಇಬ್ಬರು ಶಾಸಕರು ಚಿಲುಮೆ ಸಂಸ್ಥೆ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದರು.

ಆಯುಕ್ತರು ತಮ್ಮ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಲು ಮುಂದಾಗುತ್ತಿರುವುದು ನಾಚಿಕೆಗೇಡಿನ ವಿಚಾರ. ಈ ಪ್ರಕರಣವನ್ನು ಪ್ರಾದೇಶಿಕ ಅಧಿಕಾರಿಗಳ ತನಿಖೆಗೆ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಅಧಿಕಾರಿಗಳು ಪಾಲಿಕೆ ನಿಯಂತ್ರಣದಲ್ಲಿರುವ ಅಧಿಕಾರಿಯಾಗಿದ್ದು ಇವರಿಂದ ನ್ಯಾಯ ಹೇಗೆ ಸಿಗಲಿದೆ? ಎಂದು ಪ್ರಶ್ನಿಸಿದರು.

ಹೊಂಬಾಳೆ ಪ್ರೈ.ಲಿ ಕಂಪನಿಯಲ್ಲಿರುವವರೇ ಚಿಲುಮೆ ಸಂಸ್ಥೆಯಲ್ಲೂ ಇದ್ದಾರೆ. ಇದು 2019ರಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದೆ. ಅವರ ಕ್ಷೇತ್ರದಲ್ಲಿ ಈ ರೀತಿ ಮತದಾರರ ಮಾಹಿತಿ ಕಲೆಹಾಕಲಾಗಿದೆ. ನಾವು ಈ ಪ್ರಕರಣ ಬಯಲಿಗೆಳೆದ ಹಿನ್ನೆಲೆಯಲ್ಲಿ ನೆಪಮಾತ್ರಕ್ಕೆ ಒಂದು ಸಣ್ಣ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಸ್ಥೆ ನಿರ್ದೇಶಕರನ್ನು ಈವರೆಗೂ ಬಂಧಿಸಿಲ್ಲ. ನಿನ್ನೆ ಆ ಸಂಸ್ಥೆ ಕಚೇರಿಯಲ್ಲಿ ನೋಟು ಏಣಿಕೆ ಯಂತ್ರ ಲಭಿಸಿದೆ. ಈ ಸಂಸ್ಥೆಗೆ ದುಡ್ಡಿಲ್ಲ ಎಂದ ಮೇಲೆ ನೋಟು ಏಣಿಕೆ ಯಂತ್ರ ಯಾಕೆ? ಎಂದು ಪ್ರಶ್ನಿಸಿದರು.

ಹಿಂದೆ ಅಂಕಪಟ್ಟಿಯನ್ನು ತಯಾರಿಸುತ್ತಿದ್ದವರು ಈಗ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದಾರೆ. ನಾವು ಪೊಲೀಸ್ ಆಯುಕ್ತರಿಗೆ  ಈ ವಿಚಾರವಾಗಿ ದೂರು ನೀಡಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡೋಣ. ಪೊಲೀಸರು ಈಗ ಒಂದಿಬ್ಬರು ನಕಲಿ ಬಿಎಲ್’ಒ ಕಾರ್ಡ್ ದಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಗುರುತಿನ ಚೀಟಿ ಕೊಟ್ಟವರು, ಚೆಕ್ ನೀಡಿರುವವರ ಮೇಲೆ, ಈ ನಕಲಿ ಗುರುತಿನ ಚೀಟಿ ಪಡೆದಿರುವವರ ಮೇಲೆ ಎಫ್’ಐಆರ್ ದಾಖಲಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಈ ವಿಚಾರವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಜತೆಗೆ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಾನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದಂತೆ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ನಿಮ್ಮ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

Join Whatsapp