ಪುನೀತ್ ಓದಿಸುತ್ತಿದ್ದ 1500 ಮಕ್ಕಳ ಜವಾಬ್ದಾರಿ ಹೊರುವುದಾಗಿ ಘೋಷಿಸಿದ ತಮಿಳು ನಟ ವಿಶಾಲ್

Prasthutha|

ಚೆನ್ನೈ: ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಪುನೀತ್ ಅಗಲುವಿಕೆಗೆ ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಟಾಲಿವುಡ್, ಕಾಲಿವುಡ್ ನಟ ನಟಿಯರು ಸಂತಾಪ ಸೂಚಿಸಿ ವಿದಾಯ ಕೋರಿದ್ದಾರೆ. ಇನ್ನು ಅಪ್ಪು ಓದಿಸುತ್ತಿದ್ದ 1800ಕ್ಕೂ ಹೆಚ್ಚು ಮಕ್ಕಳ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ತಮಿಳು ಚಿತ್ರರಂಗದ ನಟ ವಿಶಾಲ್ ಘೋಷಣೆ ಮಾಡಿದ್ದಾರೆ. ಈ ರೀತಿಯಾದರೂ ನನ್ನ ಸ್ನೇಹಿತನಿಗೆ ನಾನು ವಿದಾಯ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

- Advertisement -

ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪುನೀತ್ ಅಕಾಲಿಕ ನಿಧನಕ್ಕೆ ಭಾವುಕರಾಗಿ ನುಡಿದರು. ನನ್ನ ಸ್ನೇಹಿತ ಸದ್ದಿಲ್ಲದೇ ಓದಿಸುತ್ತಿದ್ದ 1800ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಾನು ಹೊರುತ್ತೇನೆ ಎಂದರು. ಪುನೀತ್ ಕುಟುಂಬಸ್ಥರಿಂದ ಒಪ್ಪಿಗೆ ಪಡೆದು ಈ ಜವಾಬ್ದಾರಿಯ ಹೊಣೆಯನ್ನು ಹೊರುತ್ತೇನೆ ಎಂದು ತಿಳಿಸಿದರು. ಅಲ್ಲದೇ ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿಯನ್ನು ನಾವು ಅರಗಿಸಿಕೊಳ್ಳಬೇಕಾಗಿದೆ ಎಂದು ಭಾವುಕರಾದರು. ಈ ಕಾರ್ಯಕ್ರಮದಲ್ಲಿ ಈ ಮಾತನ್ನು ಆಡುತ್ತೇನೆ ಎಂದು ಅನಿಸಿರಲಿಲ್ಲ, ಪುನೀತ್ ಎಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದರು.

ನಟ ವಿಶಾಲ್ ಘೋಷಣೆಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ನಟ ವಿಶಾಲ್ ಅವರನ್ನು ಕೊಂಡಾಡಿದ್ದಾರೆ. ಇಷ್ಟರವರೆಗೆ ಇವರ ಸಿನೆಮಾವನ್ನು ನೋಡುತ್ತಿರಲಿಲ್ಲ, ಇನ್ನು ಮುಂದೆ ಥಿಯೇಟರ್ ಗಳಿಗೆ ಹೋಗಿ ವೀಕ್ಷಿಸುತ್ತೇವೆ ಎಂದೂ ಹೇಳಿದ್ದಾರೆ.

Join Whatsapp