ವಿಜಯಪುರ: ಶಿರವಸ್ತ್ರ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಣೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Prasthutha|

ವಿಜಯಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ವಿಧ್ಯಾರ್ಥಿನಿಯರು ಧರಿಸುವ ಶಿರವಸ್ತ್ರದ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದ್ದವು.
ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಷಯಕುಮಾರ ಅಜಮನಿ, ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿದ್ದಕ್ಕಾಗಿ ಶಾಲಾ ಕಾಲೇಜುಗಳಿಗೆ ಪ್ರವೇಶ ವಿಲ್ಲವೆಂದು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಮುಸ್ಲಿಂ ಹೆಣ್ಣುಮಕ್ಕಳ ಉಡುಗೆ ತೊಡುಗೆಗಳ ಕಾರಣ ಮುಂದಿಟ್ಟುಕೊಂಡು ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿರುವುದು ಪ್ರಜ್ಞಾವಂತ ನಾಗರಿಕರು ಖಂಡಿಸಬೇಕು. ಸಮವಸ್ತ್ರದ ಮೂಲಕ ಸಮಾನತೆ ಹೇಳಲು ಹೊರಟಿರುವವರಿಗೆ ಜಾತಿ ಹೆಸರಲ್ಲಿ ನಿತ್ಯ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಅಸ್ಪೃಶ್ಯತೆ, ಅಸಮಾನತೆಯನ್ನು ಕೊನೆಗಾಣಿಸಲು ಈ ಕ್ಷಣಕ್ಕೂ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಿರವಸ್ತ್ರ ಎಂದರೆ ಅಂದರೆ ಹೆಚ್ಚಿನವರು ಬುರ್ಖಾ ಎಂದು ತಪ್ಪು ತಿಳಿದು ಕೊಂಡಿದ್ದಾರೆ. ಹಿಜಾಬ್ (ಶಿರವಸ್ತ್ರ) ಎಂದರೆ ಕೂದಲು ಕಾಣದ ಹಾಗೆ ತಲೆಯ ಮೇಲೆ ಹಾಕುವ ವಸ್ತ್ರ (ದುಪ್ಪಟ್ಟ). ಅದನ್ನು ಶಾಲಾ ಕಾಲೇಜುಗಳ ಸಮವಸ್ತ್ರದಲ್ಲಿರುವ ಶಾಲನ್ನೇ ಹಿಜಾಬ್ ಆಗಿ ಉಪಯೋಗಿಸುತ್ತಾರೆ. ಕೋಮುವಾದಿ ಮತ್ತು ಮಹಿಳಾ ವಿರೋಧಿ ಮನಸ್ಥಿತಿ ಇರುವವರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರುವುದನ್ನು ತಡೆಯಲು, ಅನಗತ್ಯವಾಗಿ ಶಾಲಾ ಕಾಲೇಜುಗಳಲ್ಲಿ ಷಡ್ಯಂತ್ರ ರೂಪಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ಹಲವು ಪ್ರಜ್ಞಾವಂತರು ಖಂಡಿಸುತ್ತಿದ್ದಾರೆ ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯದಿಂದ ನಮ್ಮ ನಾಡಿಗೆ ಕೆಟ್ಟ ಹೆಸರು ಬರುತ್ತಿದೆ. ಹಲವು ವರ್ಷಗಳಿಂದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ ಮತ್ತು ಬಂದಿದ್ದಾರೆ. ಎಂದೂ ಇಲ್ಲದ ಈ ವಿರೋಧ ಈಗ ಏಕೆ? ಎಂದು ಎಂದು ಅಕ್ಷಯಕುಮಾರ ಅಜಮನಿ ಪ್ರಶ್ನಿಸಿದರು.
ಇಂತಹ ಕೃತ್ಯಗಳಿಂದ ನಾಡಿನ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕೋಮುವಾದಿ ವ್ಯಕ್ತಿಗಳು ಯಾರೇ ಇರಲಿ ಅವರ ವಿರುದ್ಧ ಮುಖ್ಯಮಂತ್ರಿಗಳು ಕಾನೂನಾತ್ಮಕ ಕ್ರಮ ತೆಗೆದುಕೊಂಡು, ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಡಬೇಕು. ಎರಡು ವರ್ಷಗಳ ಕೋವಿಡ್ ಲಾಕ್ ಡೌನ್ ದಿಂದಾಗಿ ದೇಶದೆಲ್ಲೆಡೆ ನಾಗರಿಕರ ಆರ್ಥಿಕ ಪರಿಸ್ಥಿತಿಯೂ ತೀವ್ರವಾಗಿ ಹದಗೆಟ್ಟ ಹೋಗಿದೆ. ತಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ಹಲವು ಪಾಲಕರು ಮತ್ತು ವಿದ್ಯಾರ್ಥಿಗಳು ವಿವಿಧ ಬ್ಯಾಂಕ್ ಗಳ ಮೂಲಕ ಶೈಕ್ಷಣಿಕ ಸಾಲವನ್ನು ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ, ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಪಡೆದ ಶೈಕ್ಷಣಿಕ ಸಾಲವನ್ನು ಕಟ್ಟಲು ಆಗದೆ ಹಲವು ಪಾಲಕರು ಮತ್ತು ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ಪಾಲಕರ, ವಿದ್ಯಾರ್ಥಿಗಳ ನೆರವಿಗೆ ಸರ್ಕಾರ ನಿಲ್ಲಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಅಕ್ಷಯಕುಮಾರ ಹೇಳಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನ ನಗರ ಘಟಕದ ಸಂಚಾಲಕ ಆನಂದ ಮುದುರ, ಮುಖಂಡರಾದ ಸೈಯದ ತಾಲಿಬ, ಯಮನೂರಿ ಸಿಂದಗೇರಿ,ದರ್ಶನ,ರುತಿಕೇಶ್, ಶಿವರಾಮ್, ಅಬೂಬ ಅಕ್ಕರ, ಮುಜಮಿಲ್ಲ, ಅಶ್ರಫ್, ಗೌಶ್ ಪಟೇಲ್, ಲೋಕೇಶ್, ಅನ್ನನ, ಉಮೇಶ್, ಅಜಿಜ್ ಆಶಿಫ್ ಅಲ್ಲದೇ ವಿವಿಧ ಸಂಘನೆಯ ಮುಖಂಡರು ಪ್ರತಿಭಟನೆ ಭಾಗವಹಿಸಿದ್ದರು.

Join Whatsapp