ಯುಪಿಎಸ್’ಸಿ ಪರೀಕ್ಷೆ ದಿನವೇ ಪಿಎಸ್ ಐ ನೇಮಕಾತಿ ಪರೀಕ್ಷೆ ನಿಗದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

Prasthutha|

ಬೆಂಗಳೂರು: ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ ಸರ್ಕಾರ, ಯುಪಿಎಸ್’ಸಿ ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್ ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದೆ.


ಯುಪಿಎಸ್ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತಿದೆ. ಅದರಂತೆ, ಜೂನ್ 16ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಪಿಎಸ್ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ. ಈ ಮೂಲಕ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ. ಸೆ.22ರಂದು ನಿಗದಿಯಾಗಿರುವ ಯುಪಿಎಸ್ಸಿ ಮುಖ್ಯ ಪರೀಕ್ಷೆ, ಎಸ್ಎಸ್ಸಿ ಪರೀಕ್ಷೆ ಜೊತೆಗೆ ಪಿಎಸ್ಐ ಪರೀಕ್ಷೆಯೂ ನಡೆದರೆ ಮೂರೂ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಕಿಡಿಕಾರಿದೆ.

- Advertisement -


ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿ ಗೊಂದಲದ ಕುರಿತು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಈ ಹಿಂದೆ ಮೇಲ್ಮನೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಯುಪಿಎಸ್ಸಿ, ಎಸ್ಎಸ್ಸಿ ಹಾಗೂ ಎನ್ಟಿಎ ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಂದ ಪ್ರಕಟಿತವಾಗುವ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತಯೇ? ಎಂಬ ಪ್ರಶ್ನೆಗೆ ಇಲ್ಲ ಒಂದು ವೇಳೆ ಪರೀಕ್ಷೆಗೆ ತೊಂದರೆಯಾದರೇ ಪರೀಕ್ಷೆ ದಿನಾಂಕ ಮರು ನಿಗದಿಪಡಿಸಲಾಗುವುದು ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.


ಸದ್ಯ ಉಲ್ಟಾ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಸೆ.22ರಂದು ಪಿಎಸ್ಐ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ, ಕೂಡಲೇ, ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು, ಸಾವಿರಾರು ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪಿಎಸ್ಐ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಘಟಕ ಆಗ್ರಹಿಸಿದೆ.



Join Whatsapp