ಸತತ ಮೂರನೇ ದಿನ ಬಿಜೆಪಿಗೆ 8ನೇ ಅಘಾತ: ಬಿಜೆಪಿ ತೊರೆದ ಶಾಸಕ ಧರಮ್ ಸಿಂಗ್ ಸೈನಿ ಎಸ್ಪಿಗೆ ಸೇರ್ಪಡೆ

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣಾ ರಂಗ ಕಾವೇರತೊಡಗಿದ್ದು, ಸತತ ಮೂರನೇ ದಿನ ಆಡಳಿತರೂಢ ಬಿಜೆಪಿ ಪಕ್ಷದಿಂದ 8 ಶಾಸಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ. ಅಸೆಂಬ್ಲಿ ಚುನಾವಣೆ ಒಂದು ತಿಂಗಳು ಬಾಕಿಯಿರುವಾಗ ಗುರುವಾರ ಹಿಂದುಳಿದ ವರ್ಗದ ಮುಖಂಡ, ಶಾಸಕರಾದ ಮುಖೇಶ್ ವರ್ಮಾ ಮತ್ತು ಧರಮ್ ಸಿಂಗ್ ಸೈನಿ ಬಿಜೆಪಿ ತೊರೆಯುವ ಮೂಲಕ ಬಿಜೆಪಿಗೆ ಅಘಾತ ನೀಡಿದ್ದಾರೆ.

- Advertisement -

ಈ ಮಧ್ಯೆ ಮುಖೇಶ್ ವರ್ಮಾ ತಮ್ಮ ರಾಜೀನಾಮೆಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಈ ಹಿಂದೆ ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಯುಷ್, ಆಹಾರ ಭದ್ರತೆ ಮತ್ತು ಔಷಧ ಉಸ್ತುವಾರಿಯ ರಾಜ್ಯ ಖಾತೆಯ ಸಚಿವ ಧರಮ್ ಸಿಂಗ್ ಸೈನಿ ಉತ್ತರ ಪ್ರದೇಶದ ಚುನಾವಣೆಯ ಮುಂಚಿತವಾಗಿ ಬಿಜೆಪಿ ತೊರೆದ ಎಂಟನೇ ಶಾಸಕರಾಗಿದ್ದಾರೆ.

ಸಹರಾನ್ ಪುರ ನಕುಡ್ ನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸೈನಿ ಅವರು ಬಿಎಸ್ಪಿ ತೊರೆದ ಬಳಿಕ 2016 ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಕಳೆದ ಮೂರು ದಿನಗಳಲ್ಲಿ ಮೌರ್ಯ, ದಾರಾ ಸಿಂಗ್ ಚೌಹಾನ್ ಸೇರಿದಂತೆ ಬಿಜೆಪಿ ಪಕ್ಷದಿಂದ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ.

- Advertisement -

ದಲಿತರು, ಒಬಿಸಿಗಳು ಮತ್ತು ಸಮಾಜದ ದುರ್ಬಲ ವರ್ಗಗಳ ಆಕಾಂಕ್ಷೆಗಳನ್ನು ಪರಿಹರಿಸುವಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ ಮತ್ತು ಯುವಜನರ ಸಮಸ್ಯೆಗಳ ಬಗ್ಗೆ ನಿರಾಸಕ್ತಿ ಹೊಂದಿದೆ. ಮಾತ್ರವಲ್ಲ ಸರಕಾರ ದಲಿತರ ಮೀಸಲಾತಿ ವಿಚಾರದಲ್ಲಿ ಎಡವುತ್ತಿದೆ ಎಂದು ಚೌಹಾಣ್ ರಾಜ್ಯಪಾಲರಿಗೆ ಬರೆದ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ, ಮೌರ್ಯ ನಿರ್ಗಮನದ ನಂತರ ಪಕ್ಷವನ್ನು ತೊರೆಯುವ ವದಂತಿಗಳನ್ನು ನಿರಾಕರಿಸಿದ್ದ ಸೈನಿ, “ಸ್ವಾಮಿ ಪ್ರಸಾದ್ ಮೌರ್ಯ ನನಗೆ ಹಿರಿಯ ಸಹೋದರನಾಗಿ ಉಳಿದಿದ್ದಾರೆ. ಅವರ ಜೊತೆ ಎಸ್ಪಿ ಸೇರುವವರಲ್ಲಿ ನನ್ನ ಹೆಸರನ್ನೂ ಇಟ್ಟಿದ್ದಾರೆ ಎಂಬ ಮಾತು ಟಿವಿ ಚಾನೆಲ್ ಗಳಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಸಂಪುಟ ಮತ್ತು ಬಿಜೆಪಿ ತ್ಯಜಿಸುವುದನ್ನು ನಾನು ನಿರಾಕರಿಸುತ್ತೇನೆ ಎಂಬ ಹೇಳಿಕೆ ನೀಡಿದ್ದರು.

ದಲಿತರು ಮತ್ತು ಸಮಾಜದ ದುರ್ಬಲ ವರ್ಗದವರನ್ನು ಕಡೆಗಣಿಸುತ್ತಿರುವುದಕ್ಕೆ ಬೇಸರವಿದೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅವರ ಪುತ್ರ ಉತ್ಕರ್ಷ್ ಮೌರ್ಯ ಅವರಿಗೆ “ಸೂಕ್ತವಾಗಿ ಸೌಕರ್ಯಗಳು” ಸಿಗದ ಕಾರಣ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಮುಖೇಶ್ ವರ್ಮಾ, ಅವತಾರ್ ಸಿಂಗ್ ಭದನಾ, ಬ್ರಿಜೇಶ್ ಕುಮಾರ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯಾ ಕಳೆದ 36 ಗಂಟೆಗಳಲ್ಲಿ ಬಿಜೆಪಿ ತೊರೆದ ಇತರ ಆರು ನಾಯಕರಾಗಿದ್ದಾರೆ.

Join Whatsapp