ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅವ್ಯಾಹತವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ ಅಗತ್ಯ: ಆರಗ ಜ್ಞಾನೇಂದ್ರ

Prasthutha|

ಬೆಳಗಾವಿ: ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -


ವಿಧಾನಸಭೆಯಲ್ಲಿ ಇಂದು ರೈತರು, ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯ ಮಧ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಪ್ರತಿ ವರ್ಷ ಲಕ್ಷಾಂತರ ಎಕರೆ ಭೂಮಿ, ಅಡಕೆ ಬೆಳೆ, ವಿಸ್ತಾರವಾ ಗುತ್ತಿದ್ದು, ಸರಾಸರಿ ಒಂದು ಕೋಟಿ ಅಡಕೆ ಸಸಿಗಳ ಉತ್ಪಾದನೆಯಾಗಿ ನೀರಾವರಿ ಪ್ರದೇಶದಲ್ಲಿ ಅಡಕೆ ತೋಟ ವಿಸ್ತರಣೆ ಯಾಗುತ್ತಿದೆ ಎಂದರು.


ಸಾವಿರಾರು ಕೋಟಿ ರೂಪಾಯಿಗಳನ್ನು ವಿದೇಶದಿಂದ ಹಾಗೂ ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆದು ಜಲಾಶಯಗಳನ್ನು ಕಟ್ಟಿ, ಷರತ್ತುಗಳನ್ನು ಉಲ್ಲಂಘಿಸಿ ಹಗುರ ಬೆಳೆಗಳ ಬದಲು ಅಡಕೆ ತೋಟಗಳು ಬರುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ, ಸಾಂಪ್ರದಾಯಿಕವಾಗಿ ಅಡಕೆ ಬೆಳೆದು ಬದುಕನ್ನು ಕಟ್ಟಿಕೊಂಡಿರುವ ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು ಸಂಕಷ್ಟಕ್ಕೆ ತುತ್ತಾಗುವ ಭಯ ಆವರಿಸಿದೆ ಎಂದು ಹೇಳಿದರು.

- Advertisement -


ಇದೊಂದು ಅನಾರೋಗ್ಯಕರ ಬೆಳವಣಿಗೆ ಎಂದ ಸಚಿವರು, ಇಂಥ ಪ್ರವೃತ್ತಿಗೆ ಪ್ರೋತ್ಸಾಹ ನೀಡಬಾರದು ಹಾಗೂ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Join Whatsapp