ಉಡುಪಿ | ಹಿಂದೂ ಜಾಗರಣಾ ವೇದಿಕೆಯಿಂದ ಪಾದಯಾತ್ರೆ: ಪ್ರಮುಖರ ವಿರುದ್ಧ ಪ್ರಕರಣ ದಾಖಲು

Prasthutha|

ಉಡುಪಿ: ಇತ್ತೀಚಿಗೆ ನಡೆದ ‘ದುರ್ಗಾ ದೌಡ್’ ಪಾದಯಾತ್ರೆಯಲ್ಲಿ ತಲವಾರು, ಆಯುಧ ಪ್ರದರ್ಶನ ನಡೆದಿದ್ದರೂ ಪೊಲೀಸರು ಕೇವಲ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -


ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಮಹಾಕಾಳಿ ದೇವಸ್ಥಾನದವರೆಗೆ ಅ.15ರಂದು ‘ದುರ್ಗಾ ದೌಡ್ ಪಾದಯಾತ್ರೆ ನಡೆದಿತ್ತು. ಈ ಯಾತ್ರೆಗೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದು ಆರೋಪಿಸಿ ಉಡುಪಿಯ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಸರಕಾರ/ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಉಡುಪಿ ನಗರಸಭೆ ಪೌರಾಯುಕ್ತ ಹಾಗೂ ಕೋವಿಡ್ ನೋಡೆಲ್ ಅಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ.

- Advertisement -

ಅದರಂತೆ ಹಿಂಜಾವೇ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 188, 269 ಐಪಿಸಿ ಕಲಂ: 5(1), 5(4) ದ ಕರ್ನಾಟಕ ಅಪಿಡಮಿಕ್ ಡಿಸಿಸ್ ಆ್ಯಕ್ಟ್ 2020ರಂತೆ ಪ್ರಕರಣ ದಾಖಲಿಸಲಾಗಿದೆ. ಈ ಮೆರವಣಿಗೆಯಲ್ಲಿ ಸಚಿವ ವಿ.ಸುನೀಲ್ ಕುಮಾರ್, ಶಾಸಕ ಕೆ.ರಘುಪತಿ ಭಟ್, ಹಿಂಜಾವೇ ಮುಖಂಡರಾದ ಮಹೇಶ್ ಶೆಣೈ, ಪ್ರಕಾಶ್ ಕುಕ್ಕೆಹಳ್ಳಿ, ವಿಶು ಶೆಟ್ಟಿ ಅಂಬಲಪಾಡಿ ಸಹಿತ ಅನೇಕ ಪ್ರಮುಖರು ಭಾಗವಹಿಸಿದ್ದರು.


ಮೆರವಣಿಗೆಯಲ್ಲಿ ಹಿಂಜಾವೇ ಕಾರ್ಯಕರ್ತರು ತಲವಾರು, ಆಯುಧಗಳನ್ನು ಪ್ರದರ್ಶಿಸಿರುವುದರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಪೊಲೀಸರ ಈ ತಾರತಮ್ಯ ನೀತಿಯ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp