ಉಡುಪಿ ಮೂಲದ ವಿದ್ಯಾರ್ಥಿ ದುಬೈಯಲ್ಲಿ ನಿಧನ

Prasthutha|

ಕಾಪು: ಪದವಿ ಶಿಕ್ಷಣ ಕಲಿಯಲೆಂದು ದುಬೈಗೆ ತೆರಳಿದ್ದ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ್ಯಕ್ಕೀಡಾಗಿ ಸೋಮವಾರ(ಡಿ.5)ದಂದು ನಿಧನರಾಗಿದ್ದಾರೆ.

- Advertisement -

ಕಾಪು ತಾಲೂಕಿನ ಅಹ್ಮದ್ ಬಿಲಾಲ್ (20) ಮೃತ ವಿದ್ಯಾರ್ಥಿ. ಉಡುಪಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ದುಬೈಗೆ ತೆರಳಿದ್ದ ಬಿಲಾಲ್, ಪದವಿ ಶಿಕ್ಷಣವನ್ನು ಗಳಿಸುವ ಉದ್ದೇಶ ಹೊಂದಿದ್ದರು. ಆದರೆ ಆ ಬಳಿಕ ಜ್ವರಕ್ಕೆ ತುತ್ತಾಗಿದ್ದರು.

ನ್ಯುಮೋನಿಯಾ ಕೂಡ ಕಾಡಿದ್ದರಿಂದ ಚಿಕಿತ್ಸೆಗಾಗಿ ಶಾರ್ಜಾದಲ್ಲಿರುವ ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಡಿ 5ರ ಸೋಮವಾರದಂದು ನಿಧನರಾದರು ಎಂದು ತಿಳಿದುಬಂದಿದೆ.

- Advertisement -

“ಬಿಲಾಲ್ ತಂದೆ 35 ವರ್ಷಗಳಿಂದ ದುಬೈಯಲ್ಲಿ ಅನಿವಾಸಿ ಭಾರತೀಯನಾಗಿ ದುಡಿಯುತ್ತಿದ್ದ ಹಿನ್ನೆಲೆಯಲ್ಲಿ, ಪದವಿ ಶಿಕ್ಷಣ ಕಲಿಯಲು ಬಿಲಾಲ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದುಬೈಗೆ ತೆರಳಿದ್ದರು. ಕೆಲದಿನಗಳ ಹಿಂದೆ ದಿಡೀರ್ ಅನಾರೋಗ್ಯಕ್ಕೀಡಾಗಿ ನಿಧನರಾದರು. ಮೃತದೇಹದ ಅಂತ್ಯ ಸಂಸ್ಕಾರವು ದುಬೈಯ ಅಲ್ಕೂಝ್ ಮಸೀದಿಯಲ್ಲಿ ನಡೆದಿದೆ. ಸದ್ಯ ಬಿಲಾಲ್ ಕುಟುಂಬ ದುಬೈನಲ್ಲಿದೆ” ಎಂದು ಬಿಲಾಲ್ ಸಂಬಂಧಿ ಆಸಿಫ್ ಉಚ್ಚಿಲ ಮಾಹಿತಿ ನೀಡಿದ್ದಾರೆ.

ತಂದೆ ಅಬ್ದುಸ್ಸಲಾಂ ಸೂರಿಂಜೆ, ತಾಯಿ ಝೀನತ್ ಗುರುಪುರ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Join Whatsapp