ಒಂದೇ ಕುಟುಂಬದ ಜೊತೆ ವಿವಾಹ ಇಬ್ಬರು ಗರ್ಭಿಣಿಯರು ಸೇರಿ ಮೂವರು ಆತ್ಮಹತ್ಯೆ

Prasthutha|

ಜೈಪುರ: ಒಂದೇ ಕುಟುಂಬಕ್ಕೆ ಮದುವೆಯಾಗಿದ್ದ ಮೂವರು ಸಹೋದರಿಯರು, ಇಬ್ಬರು ಮಕ್ಕಳ ಸಮೇತ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ರಾಜ್ಯದ ಜನತೆಗೆ ಆಘಾತ ಉಂಟುಮಾಡಿದೆ. ಕಲು ಮೀನಾ (25), ಮಮ್ತಾ (23) ಮತ್ತು ಕಮ್ಲೇಶ್​ (20) ಮೃತ ಸಹೋದರಿಯರು.

- Advertisement -

ನತದೃಷ್ಟ ಈ ಮೂವರು‌‌ 4 ವರ್ಷದ ಬಾಲಕ ಹಾಗೂ 27 ದಿನಗಳ ಶಿಶುವಿನ ಜತೆಗೆ ಸಹೋದರಿಯರು ಸಾವಿನ ಹಾದಿ ಹಿಡಿದಿದ್ದಾರೆ.ಹೃದಯವಿದ್ರಾವಕ ಸಂಗತಿ ಅಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಇಬ್ಬರು ಸಹೋದರಿಯರು ಗರ್ಭಿಣಿಯಾಗಿದ್ದರು.

ಮೂವರು ಕೂಡ ಜೈಪುರ ಜಿಲ್ಲೆಯ ಚಪಿಯಾ ಗ್ರಾಮದ ಒಂದೇ ಕುಟುಂಬದ ಮೂವರು ಸಹೋದರರಿಗೆ ಮದುವೆಯಾಗಿದ್ದರು. ಮೃತತ ಅತ್ತೆ ನಿತ್ಯವು ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು. ಇದಲ್ಲದೆ, ಅವರ ಮೇಲೆ ಹಲ್ಲೆಯನ್ನು ಮಾಡುತ್ತಿದ್ದರು.

- Advertisement -

ವರದಕ್ಷಿಣೆಗಾಗಿ ನನ್ನ ಸಹೋದರಿಯರಿಗೆ ನಿತ್ಯ ಹೊಡೆಯುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು. ಮೇ 25 ರಂದು ಅವರು ನಾಪತ್ತೆಯಾದಾಗ, ನಾವು ಅವರನ್ನು ಹುಡುಕಲು ತುಂಬಾ ಶ್ರಮಪಟ್ಟೆವು. ಇದಾದ ಬಳಿಕ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆವು. ಮಹಿಳಾ ಸಹಾಯವಾಣಿ ನೆರವಿನಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದೆವು. ಆದರೆ, ಸಣ್ಣ ಪ್ರಮಾಣ ನೆರವು ಮಾತ್ರ ದೊರೆಯಿತು ಎಂದು ಮೃತರ ಸೋದರ ಸಂಬಂಧಿ ಹಮ್ರಾಜ್​ ಮೀನಾ ತಿಳಿಸಿದ್ದಾರೆ.

ಮೃತ ಸಹೋದರಿಯರು ಡೆತ್​ನೋಟ್​ ಬರೆಯದಿದ್ದರೂ, ಅವರ ಕುಟುಂಬ ಸದಸ್ಯರು ಕಿರಿಯ ಸಹೋದರಿ ಕಮಲೇಶ್ ಅವರ ವಾಟ್ಸಾಪ್ ಸ್ಟೇಟಸ್ ಅನ್ನು ಹಂಚಿಕೊಂಡರು. ಅದರಲ್ಲಿ ಆಕೆ ಹಿಂದಿಯಲ್ಲಿ ಬರೆದಿದ್ದಾರೆ. ನಾವು ಈಗ ಹೋಗುತ್ತಿದ್ದೇವೆ. ನೀವು ಸಂತೋಷವಾಗಿರಿ. ನಮ್ಮ ಸಾವಿಗೆ ಕಾರಣ ನಮ್ಮ ಅತ್ತೆ. ನಾವು ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದು ಉತ್ತಮ. ಹೀಗಾಗಿ ನಾವು ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ಮುಂದಿನ ಜನ್ಮದಲ್ಲಿ ನಾವು ಮೂವರು ಒಟ್ಟಿಗೆ ಇರುತ್ತೇವೆ ಎಂದು ಭಾವಿಸುತ್ತೇವೆ. ನಾವು ಸಾಯಲು ಬಯಸುವುದಿಲ್ಲ ಆದರೆ, ನಮ್ಮ ಅತ್ತೆಯಂದಿರು ನಮಗೆ ಕಿರುಕುಳ ನೀಡುತ್ತಾರೆ. ನಮ್ಮ ಸಾವಿಗೆ ನಮ್ಮ ಹೆತ್ತವರನ್ನು ದೂಷಿಸಬೇಡಿ ಎಂದು ಬರೆಯಲಾಗಿದೆ.

ನಾಪತ್ತೆಯಾದ ನಾಲ್ಕು ದಿನಗಳ ನಂತರ ಇಂದು ಬೆಳಿಗ್ಗೆ ದುಡು ಗ್ರಾಮದ ಬಾವಿಯಿಂದ ಮೂವರು ಸಹೋದರಿಯರು ಮತ್ತು ಇಬ್ಬರು ಮಕ್ಕಳ ಮೃತದೇಹಗಳನ್ನು ಪೊಲೀಸರು ಹೊರಕ್ಕೆ ತೆಗೆಸಿದ್ದಾರೆ. ಕ್ರೌರ್ಯ ಸೇರಿದಂತೆ ಇತರೆ ಅಪರಾಧದ ಅಡಿಯಲ್ಲಿ ಮೃತ ಸಹೋದರಿಯರ ಪತಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವರದಕ್ಷಿಣೆ ಕಿರುಕುಳ ಆಧಾರದ ಮೇಲೆ ಎಫ್‌ಐಆರ್‌ಗೆ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದು, ಮೂವರು ಗಂಡಂದಿರು, ಅತ್ತೆ ಮತ್ತು ಇತರ ಕುಟುಂಬದ ಇತರೆ ಸದಸ್ಯರನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಜಸ್ಥಾನದ ಮಹಿಳಾ ಆಯೋಗದ ಕಾರ್ಯಕರ್ತೆಯರು ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇಂತಹ ಪ್ರಕರಣದಿಂದ ರಾಜಸ್ಥಾನ ಸರ್ಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ ಎಂದು ಕಾರ್ಯಕರ್ತೆಯರು ಟೀಕಿಸಿದರು. ಇದಲ್ಲದೆ, ಮೃತ ಸಹೋದರಿಯರ ಶವಗಳನ್ನು ಹೊರತೆಗೆಯಲು ನಾಲ್ಕು ದಿನ ತೆಗೆದುಕೊಂಡ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Join Whatsapp