ಮನೆಗೆ ತಗಡಿನ ಶೀಟ್ ಹಾಕುವಾಗ ವಿದ್ಯುತ್ ತಗುಲಿ ಇಬ್ಬರು ಸಾವು

Prasthutha|

ಬೆಳಗಾವಿ: ಮಳೆ ನೀರು ಸೋರದಂತೆ ತಡೆಯಲು ಮನೆಯ ಮಾಳಿಗೆ ಮೇಲೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ಸುಳಗಾ ಗ್ರಾಮದಲ್ಲಿ ನಡೆದಿದೆ.
ಸುಳಗಾ ಗ್ರಾಮದ ನಿವಾಸಿ ವಿನಾಯಕ ಕೃಷ್ಣ ಕಲಖಾಂಬಕರ (25) ಹಾಗೂ ಬೆನಕನಹಳ್ಳಿ ನಿವಾಸಿ ವಿಲಾಸ ಗೋಪಾಲ ಅಗಸಗೇಕರ (57) ಮೃತಪಟ್ಟವರು. ವಿದ್ಯುತ್ ತಗುಲಿರುವ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -


ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿನಾಯಕ ಅವರ ಮನೆ ಸೋರುತ್ತಿತ್ತು. ಛಾವಣಿ ಮೇಲೆ ಹೊಸ ತಗಡುಗಳನ್ನು ಹಾಕಲು ವಿನಾಯಕ ಹಾಗೂ ವಿಲಾಸ ಗೋಪಾಲ ಮನೆಯ ಮೇಲೆ ನಿನ್ನೆ ಸಂಜೆ ಹತ್ತಿದ್ದರು.
ಈ ವೇಳೆ ಮನೆಯ ಮೇಲೆ ಹಾದು ಹೋದ ವಿದ್ಯುತ್ ತಂತಿಗೆ ತಗಡು ಸಿಲುಕಿಕೊಂಡು, ವಿದ್ಯುತ್ ಪ್ರವಹಿಸಿ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಇಬ್ಬರ ನೆರವಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿಗೂ ವಿದ್ಯುತ್ ಸ್ಪರ್ಶವಾಗಿದೆ. ಈ ವೇಳೆ ಕೆಳಗೆ ಬಿದ್ದು ಆತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp