ಆಕಸ್ಮಿಕ ಬೆಂಕಿಗೆ ಎರಡು ಎತ್ತುಗಳು ಬಲಿ

Prasthutha|

ಚಾಮರಾಜನಗರ: ಹುಲ್ಲಿನ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಸಮೀಪದಲ್ಲಿಯೇ ಇದ್ದ ಕೊಟ್ಟಿಗೆಗೂ ಬೆಂಕಿ ಹಬ್ಬಿದ ಪರಿಣಾಮ ಎರಡು ಎತ್ತುಗಳು ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.

- Advertisement -

ವೈ.ಕೆ.ಮೋಳೆ ಗ್ರಾಮದ ರೈತ ಸಿದ್ದರಾಜು ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಎತ್ತುಗಳು ಕೂಗಾಡುತ್ತಿದ್ದ ಶಬ್ದಕ್ಕೆ ನೆರೆ ಮನೆಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿದಾಗ ಕೊಟ್ಟಿಗೆಗೆ ಬೆಂಕಿ ವ್ಯಾಪಿಸಿದ್ದು ಕಂಡು ಬಂದಿದೆ.
ಬೆಂಕಿ ನಂದಿಸಲು ಸ್ಥಳೀಯರು ಹಾಗೂ ಅಗ್ನಿಶಾಮಕ ದಳವರು ಹರಸಾಹಸ ಪಟ್ಟರೂ ಹುಲ್ಲಿನ ರಾಶಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಪಕ್ಕದಲ್ಲಿಯೇ ಇದ್ದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಎರಡು ಎತ್ತುಗಳು ಬೆಂಕಿಯಲ್ಲಿ ಸುಟ್ಟು ಸತ್ತಿದ್ದವು.

ಎರಡು ಎತ್ತುಗಳನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದ ರೈತ ಸಿದ್ದರಾಜು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ರೈತ ಸಿದ್ದರಾಜು ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

Join Whatsapp