ಕೇರಳದಲ್ಲಿ ಅವಳಿ ಸ್ಫೋಟ: ಬಾಂಬ್ ಇಟ್ಟಿದ್ದು ನಾನೇ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

Prasthutha|

ಕೊಚ್ಚಿ: ಸಭಾಂಗಣವೊಂದರಲ್ಲಿ ನಡೆದ ಅವಳಿ ಸ್ಫೋಟದಲ್ಲಿ  ಓರ್ವ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ. ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ “ನಾನೇ ಬಾಂಬ್​ ಇಟ್ಟಿದ್ದು” ಎಂದು ವ್ಯಕ್ತಿಯೊಬ್ಬ ಕೊಡಕಾರ ಪೊಲೀಸ್​ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

- Advertisement -

ಸುಮಾರು 1:30ರ ವೇಳೆಗೆ ಠಾಣೆಗೆ ಶರಣಾದ ವ್ಯಕ್ತಿ, ತಾನು ಕೊಚ್ಚಿ ಮೂಲದವನು ಎಂದು ತಿಳಿಸಿದ್ದಾನೆ. ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಕಣ್ಣೂರು ರೈಲು ನಿಲ್ದಾಣದಲ್ಲೂ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಮಾಹಿತಿ ಹೊರಬಂದಿದ್ದು, ಪೊಲೀಸ್​ ಮತ್ತು ಆರ್‌ಪಿಎಫ್ ಜಂಟಿಯಾಗಿ ನಡೆಸಿದ ಶೋಧದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನದ ಮೇಲೆ ಆತನನ್ನು ಬಂಧಿಸಲ್ಪಟ್ಟಿರುವ ಆತ ಗುಜರಾತ್ ಮೂಲದವನು ಎಂದು ತಿಳಿದುಬಂದಿದೆ.

ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ವೇಳೆ ಸುಮಾರು 2500 ಮಂದಿ ಸಮಾವೇಶ ಕೇಂದ್ರದಲ್ಲಿದ್ದರು. ಮಹಿಳೆಯೊಬ್ಬರು ಸಾವನ್ನಪ್ಪಿದರೆ. 40 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮೂರು ದಿನಗಳ ಪ್ರಾರ್ಥನೆ ಇಂದು ಮುಗಿಯುವ ಹಂತದಲ್ಲಿದ್ದಾಗ ಸರಣಿ ಸ್ಫೋಟ ಸಂಭವಿಸಿದೆ.

Join Whatsapp