ಚಿಂದಿ ಆಯುವ ವ್ಯಕ್ತಿಯ ಮಾಹಿತಿಯಿಂದ ಮೂವರು ಮಕ್ಕಳು ಪತ್ತೆ

Prasthutha|

ಬೆಂಗಳೂರು : ನಗರದ ಉತ್ತರ ವಿಭಾಗದ ವ್ಯಾಪ್ತಿಯಿಂದ 7 ಮಂದಿ ನಾಪತ್ತೆ ಪ್ರಕರಣದಲ್ಲಿ ಚಿಂದಿ ಆಯುವ ವ್ಯಕ್ತಿಯು ನೀಡಿದ ಮಾಹಿತಿಯಿಂದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಪರಿಕ್ಷಿತ್, ಕಿರಣ್ ಹಾಗೂ ನಂದನ್ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ.

- Advertisement -


ಈ ಮೂವರು ಮಕ್ಕಳು ಕಬ್ಬಡ್ಡಿಯಲ್ಲಿ ಸಾಧನೆ ಮಾಡುವುದಾಗಿ ಪತ್ರ ಬರೆದಿಟ್ಟು ಮನೆ ತೊರೆದಿದ್ದು ಚಿಂದಿ ಆಯುವ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಸಿಸಿಟಿವಿ ಹುಡುಕಾಡಿ ಪೊಲೀಸರು ಮಕ್ಕಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಆನಂದ್ ರಾವ್ ಸರ್ಕಲ್ ಬಳಿ ಇಂದು ಬೆಳಗ್ಗೆ 7.30 ರ ವೇಳೆ ಮೂವರು ಕಾಣಿಸಿಕೊಂಡಿದ್ದರು. ಕೂಡಲೇ ಬಾಗಲಗುಂಟೆ ಪೊಲೀದರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಸದ್ಯ ಮಕ್ಕಳು ಉಪ್ಪಾರಪೇಟೆ ಪೊಲೀಸರ ರಕ್ಷಣೆಯಲ್ಲಿದ್ದು, ಬಾಗಲಗುಂಟೆ ಪೊಲೀಸರು ಬಂದ ತಕ್ಷಣ ಮಕ್ಕಳನ್ನ ಒಪ್ಪಿಸಲಿದ್ದಾರೆ.


ಕಳೆದ ಅ.9 ರಂದು ಮನೆ ಬಿಟ್ಟ ನಂತರ ಮಕ್ಕಳು ಕೆಂಗೇರಿಗೆ ಬಂದಿದ್ದು ಅಲ್ಲಿಂದ ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿ ಒಂದು ದಿನ ಕಳೆದಿರುವ ಮಕ್ಕಳು, ದಸರಾದಲ್ಲಿ ನಡೆಯುತ್ತಿದ್ದ ದೇಶೀಯ ಕ್ರೀಡೆಗಳನ್ನು ನೋಡಿ ನಿನ್ನೆ ರಾತ್ರಿ ಮೈಸೂರಿಂದ ಮಕ್ಕಳು ನಗರಕ್ಕೆ ಬಂದಿದ್ದಾರೆ. ಮೆಜೆಸ್ಟಿಕ್ ನಿಂದ ಕಂಠೀರವ ಸ್ಟೇಡಿಯಂ ವರೆಗೆ ಜಾಗಿಂಗ್ ಹೋಗಿದ್ದ ಮಕ್ಕಳು, ಕಂಠೀರವ ಸ್ಟೇಡಿಯಂ ಬಳಿ ಪ್ರಾಕ್ಟೀಸ್ ಗೇಮ್ ಗಳನ್ನ ನೋಡಿಕೊಂಡು ಆನಂದರಾವ್ ಸರ್ಕಲ್ ಕಡೆ ವಾಪಸ್ಸಾಗಿದ್ದರು. ಈ ವೇಳೆ ಮಕ್ಕಳು ಚಿಂದಿ ಆಯುವ ವ್ಯಕ್ತಿ ಮುಖಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

- Advertisement -


ಕಳೆದ ಅ.8ರಂದು ಶಾಲೆಯಲ್ಲಿಯೇ ಮನೆ ಬಿಡುವ ನಿರ್ಧಾರ ಮಾಡಿದ್ದ ಮಕ್ಕಳು, ಅದರಂತೆ ಮರುದಿನ ಬೆಳಗ್ಗೆ 5.30 ಕ್ಕೆ ಮನೆಯಿಂದ ಹೊರಟಿದ್ದಾರೆ. ಜಾಗಿಂಗ್ ಹೋಗಿ ಬರುವುದಾಗಿ ಬಂದಿದ್ದ ಮೂವರು ಮಕ್ಕಳು, ಮನೆಯಿಂದ ಬರುತ್ತಾ ಮೂವರು ತಲಾ ಒಂದೊಂದು ಸಾವಿರ ತಂದಿದ್ದಾರೆ. ಮೊದಲು ಮಂಗಳೂರಿಗೆ ಹೋಗುವ ಯೋಜನೆ ಹಾಕಿಕೊಂಡು,ನಂತರ ಬದಲಾಯಿಸಿ ಮೈಸೂರು ಬಸ್ ಹತ್ತಿದ್ದಾರೆ. ಮೈಸೂರು ಬಸ್ ನಿಲ್ದಾಣದಲ್ಲಿ ಅ.9ರ ಇಡೀ ದಿನ ಉಳಿದುಕೊಂಡು ದಸರಾ ಹಬ್ಬ ನೋಡಿಕೊಂಡು ಮತ್ತೆ ನಿನ್ನೆ ರಾತ್ರಿ ಮೈಸೂರಿನಿಂದ ರೈಲು ಹತ್ತಿದ್ದಾರೆ. ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದು, ಪೇಪರ್ ಆಯುವ ವ್ಯಕ್ತಿ ಬಳಿ ಕೆಲಸ ಕೇಳಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣ ವಿಚಾರ ತಿಳಿದಿದ್ದ ಪೇಪರ್ ಆಯುವ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣೆ ಮಾಡಿದ್ದಾರೆ.

Join Whatsapp