ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ: WPI ರಾಷ್ಟ್ರೀಯ ಅಧ್ಯಕ್ಷ ಡಾ.ಇಲ್ಯಾಸ್ ಆರೋಪ

Prasthutha|

ಕಲ್ಬುರ್ಗಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನಡೆದಿದೆ. ದೇಶದ ಜನ ಇರುವ ವಿರುದ್ಧ ಜಾಗೃತರಾಗಿ ಬೀದಿಗೆ ಬಂದು ಪ್ರತಿಭಟನೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟೀಯ ಅಧ್ಯಕ್ಷ ಡಾ. ಎಸ್.ಕ್ಯೂ.ಆರ್ ಇಲ್ಯಾಸ್ ಆರೋಪಿಸಿದ್ದಾರೆ.

- Advertisement -

ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿ ಸರ್ಕಾರ ಸದನದಲ್ಲಿ ಚರ್ಚಿಸದೇ ಮಸೂದೆಗಳಿಗೆ ಒಪ್ಪಿಗೆ ಕೊಡುತ್ತಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡುವ ಬದಲು ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಪ್ರಸ್ತುತ ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್‌ ಘನತೆ ಕಳೆದುಕೊಳ್ಳುತ್ತಿವೆ. ಗಂಭೀರ ಆರೋಪದಡಿ ಬಂಧನಕ್ಕೆ ಒಳಗಾದ ಆಡಳಿತಾರೂಢ ‍ಪಕ್ಷದ ಮುಖಂಡರು ಅಷ್ಟೇ ಸಲೀಸಾಗಿ ಜೈಲುಗಳಿಂದ ಹೊರಗೆ ಬರುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡ ಮುಖಂಡರು ಜೈಲಿ ನಲ್ಲೇ ಕೊಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತರು ದೆಹಲಿಯಲ್ಲಿ ಒಂದು ವರ್ಷ ಪ್ರತಿಭಟನೆ ನಡೆಸಿದರೂ ಬಿಜೆಪಿ ಸರ್ಕಾರ ಕ್ಯಾರೇ ಅನ್ನಲಿಲ್ಲ. ಆದರೆ ನಂತರದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು. ಹಿಜಾಬ್, ಹಲಾಲ್‌ ಹಾಗೂ ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರದ ಮೂಲಕ ಸಮುದಾಯದಲ್ಲಿ ಬಿರುಕು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಗುಡುಗಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಾಹೀರ್‌ ಹುಸೇನ್ ಮಾನತಾಡಿ, ‘ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪಠ್ಯದಿಂದ ದೇಶ ಭಕ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೈಬಿಟ್ಟಿರುವುದು ಸರಿಯಲ್ಲ. ಆಯ್ಕೆ ಸಮಿತಿಯ ಏಳು ಸದಸ್ಯರಲ್ಲಿ ಆರು ಮಂದಿ ಒಂದೇ ಸಮುದಾಯದವರು ಇದ್ದಾರೆ. ಧರ್ಮ ನಿರಪೇಕ್ಷ ಮುಖಂಡರ ಬಗೆಗೆ ಪಠ್ಯ ಕೈಬಿಟ್ಟಿರುವುದು ಸರಿಯಲ್ಲ ಎಂದು ಆಕ್ರೋಶದಿಂದ ನುಡಿದಿದ್ದಾರೆ.

ದೇಶ, ರಾಜ್ಯದಲ್ಲಿ ಅಶಾಂತಿ ಹೆಚ್ಚಳ:

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ದೇಶ-ರಾಜ್ಯಗಳಲ್ಲಿ ಅಶಾಂತಿ ಹೆಚ್ಚಾಗುತ್ತಿದ್ದು, ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ತಾಹೀರು ಹುಸೈನ್ ತಿಳಿಸಿದ್ದಾರೆ.

ಕೆಲವು ದಿನದಿಂದ ರಾಜ್ಯದ ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಿಂಸಾಚಾರ, ಗಲಭೆ ನಡೆಯುತ್ತಿವೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ. ಶಾಂತಿ, ಸೌಹಾರ್ದತೆ, ಜಾತ್ಯತೀತಗೆ ಹೆಸರಾಗಿದ್ದ ರಾಜ್ಯ ನಮ್ಮದಾಗಿತ್ತು. ಐಟಿ-ಬಿಟಿ ಸೇರಿದಂತೆ ಹಲವು ಕೈಗಾರಿಕೆಗಳು, ಬಂಡವಾಳಗಳು ಹರಿದು ಬರುತ್ತಿದ್ದವು. ಆದರೆ ಈಗ ನಡೆಯುತ್ತಿರುವ ಘಟನೆಯಿಂದ ಬಂಡವಾಳ ಹೂಡುವವರು ಹಿಂಜರಿಯುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ತಕ್ಷಣದ ಲಾಭಕ್ಕೆ ಪ್ರಚೋದನಕಾರಿ ವರ್ತನೆ ಮಾಡಿದರೆ ಭವಿಷ್ಯದಲ್ಲಿ ದೇಶ ಗಂಡಾತರಕ್ಕೆ ಒಳಗಾಗಲಿದೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ. ಕೇವಲ ಘೋಷಣೆ, ಭಾಷಣದಿಂದ ಏನೂ ಪ್ರಯೋಜನವಿಲ್ಲ. ಯೋಜನೆಗಳು ಅನುಷ್ಠಾನವಾಗಬೇಕು. ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಬಿಜೆಪಿ ಸಂವಿಧಾನದ ಬಗ್ಗೆ ವಿಶ್ವಾಸವಿಡಬೇಕು. ಶಾಂತಿ, ನೆಮ್ಮದಿಯಿಂದ ಇರುವುದು ಬಿಜೆಪಿಯವರಿಗೆ ಇಷ್ಟವಿದ್ದಂತಿಲ್ಲ ಎಂದು ಗುಡಿಗಿದ್ದಾರೆ.

ಈ ವೇಳೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಆರ್ಮುಗಂ, ಜಿಲ್ಲಾಧ್ಯಕ್ಷರಾದ ಸಲೀಂ ಅಹ್ಮದ್ ಚಿತಾಪುರ, ಜಿಲ್ಲಾ ಉಪಾಧ್ಯಕ್ಷರು ಸಿದ್ದಣ್ಣ ಚಕ್ರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬೀನ್ ಅಹಮದ್, ನಗರ ಘಟಕ ಕಾರ್ಯದರ್ಶಿ ಸಲೀಂ ಸದರಿ ಉಪಸ್ಥಿತಿ ಇದ್ದರು.

Join Whatsapp