ಆಡಳಿತಾರೂಢ ಡಿಎಂಕೆ ಶಾಸಕನನ್ನೇ ಬಂಧಿಸಿದ ತಮಿಳುನಾಡು ಪೊಲೀಸರು : ಏನಿದು ಪ್ರಕರಣ?

Prasthutha|

ಚೆನ್ನೈ: ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬು ಸುಂದರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆಡಳಿತರೂಢ ಡಿಎಂಕೆ ಪಕ್ಷದ ಹಿರಿಯ ಶಾಸಕ ಶಿವಾಜಿ ಕೃಷ್ಣಮೂರ್ತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

- Advertisement -

ಖುಷ್ಬು ಸುಂದರ್ ಬಗ್ಗೆ ಮಾತ್ರವೇ ಅಲ್ಲದೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ, ತಮಿಳುನಾಡು ರಾಜ್ಯಪಾಲ ರವಿ ಅವರ ಬಗ್ಗೆಯೂ ಕೀಳು ಹೇಳಿಕೆಗಳನ್ನು ಶಿವಾಜಿ ನೀಡಿದ್ದರು.

ಇತ್ತೀಚೆಗಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಶಿವಾಜಿ, ”ನನ್ನ ಮಗಳ ಮದುವೆ ಸಮಯದಲ್ಲಿ ಫೋಟೊದವರು ನನ್ನ ಫೋಟೊ ಹೆಚ್ಚಿಗೆ ತೆಗೆಯುತ್ತಿದ್ದರು. ನೀವು ಚೆನ್ನಾಗಿದ್ದೀರಿ ಎಂದರು, ನಾನೇನು ನಟನಲ್ಲ, ಅದರಲ್ಲಿಯೂ ಖುಷ್ಬು ಅಂಥಹಾ ನಟನಲ್ಲ. ನಟರಾಗಿರುವುದು ಓಕೆ, ಆದರೆ ಖುಷ್ಬು ರೀತಿ ನಟರಾಗಿರುವುದು ಸರಿಯಲ್ಲ. ಖುಷ್ಬು ಹಳೆಯ ಹಂಡೆ ಇದ್ದಂತೆ. ಆದರೆ ಎಲ್ಲ ಖುಷ್ಬು ಬೇಕು, ಖುಷ್ಬು ಬೇಕು ಎನ್ನುತ್ತಾರೆ. ಅಯ್ಯೋ ಅವಳು ಹಳೆ ಹಂಡೆ ಅವಳನ್ನ ಯಾಕೆ ಕೇಳ್ತೀರಿ ಸುಮ್ಮನಿರ್ರಿ” ಎಂದು ನಾಲಗೆ ಹರಿಬಿಟ್ಟಿದ್ದರು ಶಿವಾಜಿ.

- Advertisement -

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಗ್ಗೆಯೂ ಮಾತನಾಡಿದ್ದ ಶಿವಾಜಿ, ”ಅಣ್ಣಾಮಲೈ ಒಂದು ಕಡೆಯಿಂದ ನೋಡಿದರೆ ಹೆಣ್ಣಿನಂತೆ ಕಾಣುತ್ತಾನೆ, ಇನ್ನೊಂದು ಕಡೆಯಿಂದ ನೋಡಿದರೆ ಗಂಡಿನಂತೆ ಕಾಣುತ್ತಾನೆ ಮಧ್ಯದಿಂದ ನೋಡಿದರೆ ಗಂಡು-ಹೆಣ್ಣು ಎರಡೂ ರೀತಿ ಕಾಣುತ್ತಾನೆ. ರಫೆಲ್ ವಾಚು ಹಾಕಿಕೊಳ್ಳುವುದು ಅವನಿಗೆ ದೇಶಪ್ರೇಮವಂತೆ. ಮೂರು ಲಕ್ಷದ ವಾಚು ಹಾಕಿಕೊಳ್ಳುತ್ತಾನೆ, ಬಿಲ್ ತೋರಿಸು ಅಂದರೆ ಯಾವುದೋ ರಸೀದಿ ತೋರಿಸುತ್ತಾನೆ. ಇವನು ಐಪಿಎಸ್ ಬೇರೆ ಆಗಿದ್ದನಂತೆ. ಮೊದಲು ನಿಮ್ಮ ಅಮ್ಮ-ಅಪ್ಪನ ಕೇಳು, ನೀನು ಗಂಡೊ-ಹೆಣ್ಣೊ ಎಂದು” ಎಂದು ಶಿವಾಜಿ ಮಾತನಾಡಿದ್ದರು.

ಕೆಲವು ತಿಂಗಳ ಹಿಂದೆಯಷ್ಟೆ ತಮಿಳುನಾಡು ರಾಜ್ಯಪಾಲರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಶಿವಾಜಿಯನ್ನು ಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿತ್ತು, ಕ್ಷಮೆ ಕೇಳಿದ ಬಳಿಕ ಇತ್ತೀಚೆಗಷ್ಟೆ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ತಮ್ಮ ವಿರುದ್ಧ ಕೀಳು ಅಭಿರುಚಿಯ ಮಾತನಾಡಿದ ಶಿವಾಜಿ ವಿರುದ್ಧ ನಟಿ ಖುಷ್ಬು ಸುಂದರ್ ದೂರು ನೀಡಿದ್ದರು. ಅವರ ಮಾತಿನ ವಿಡಿಯೋವನ್ನು ತಮಿಳುನಾಡು ಸಿಎಂ ಸ್ಟಾಲಿನ್​ಗೆ ಟ್ಯಾಗ್​ ಮಾಡಿ ಇದೇನಾ ನಿಮ್ಮ ಸಂಸ್ಕಾರ ಎಂದು ಪ್ರಶ್ನಿಸಿದ್ದರು. ಶಿವಾಜಿ ಭಾಷಣದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಡಿಎಂಕೆ ಪಕ್ಷವು ಶಿವಾಜಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಉಚ್ಛಾಟನೆಯಾದ ಬೆನ್ನಲ್ಲೆ ಪೊಲೀಸರು ಶಿವಾಜಿಯನ್ನು ಬಂಧಿಸಿದ್ದಾರೆ.

Join Whatsapp