ಬಟ್ಟೆ ಖರೀದಿಗೆ ಹೊರಟಿದ್ದ ಸಹೋದರರ ಪೈಕಿ ಓರ್ವನ ಹತ್ಯೆ, ಮತ್ತೋರ್ವ ನಾಪತ್ತೆ

Prasthutha|

ದಾವಣಗೆರೆ: ಮದುವೆಗಾಗಿ ಬಟ್ಟೆ ಖರೀದಿಸಲು ಹೊರಟ ಬಳಿಕ ಕಾಣೆಯಾಗಿದ್ದ ಇಬ್ಬರು ಸಹೋದರರ ಪೈಕಿ ಓರ್ವನ ಮೃತದೇಹ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರ್ತೋರ್ವನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಹರಿಹರದ ವಿಜಯನಗರ ನಿವಾಸಿ ಅಲ್ತಾಫ್ (21) ಮೃತಪಟ್ಟವರು. ಆತನೊಂದಿಗೆ ತೆರಳಿದ್ದ ಸಹೋದರ ಇಬ್ರಾಹೀಂ ಅವರು ಇದುವರೆಗೆ ಪತ್ತೆಯಾಗಿಲ್ಲ.
  ನಿರ್ಜನ ಪ್ರದೇಶದಲ್ಲಿ ಯುವಕನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ವಿದ್ಯಾನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

ಹರಿಹರದ ವಿಜಯನಗರ ನಿವಾಸಿ ಯುವಕ ಅಲ್ತಾಫ್ ಶವವಾಗಿ ಪತ್ತೆಯಾಗಿದ್ದಾನೆ. ಈತನ ಅಕ್ಕನ ಮಗ ಇಬ್ರಾಹಿಂ ನಾಪತ್ತೆಯಾಗಿದ್ದಾನೆ. ಆದರೆ ಅಲ್ತಾಫ್ ಶವ ಕತ್ತು ಕೊಯ್ದು ಸ್ಥಿತಿಯಲ್ಲಿ ದಾವಣಗೆರೆಯ ಹೊರ ವಲಯದ ಕುಂದವಾಡ ಕೆರೆ ಬಳಿ ಇರುವ ಮಹಾಲಕ್ಷ್ಮೀ ಲೇಔಟ್ ಬಳಿ ಪತ್ತೆಯಾಗಿದೆ.

ಕಳೆದ 18ರಂದು ಹರಿಹರದಿಂದ ದ್ವಿಚಕ್ರವಾಹನದಲ್ಲಿ ಈ ಇಬ್ಬರು ದಾವಣಗೆರೆಗೆ ಇಬ್ರಾಹಿಂನ ಮದುವೆಗೆ ಬಟ್ಟೆ ತೆಗೆದುಕೊಳ್ಳಲು ಬಂದಿದ್ದಾರೆ. ಆದರೆ ರಾತ್ರಿಯಾದರೂ ಮನೆಗೆ ವಾಪಾಸು ಆಗದ ಕಾರಣ ಅವರ ಮೊಬೈಲ್‍ಗಳಿಗೆ ಪೋನ್ ಮಾಡಿದ್ದಾರೆ. ಆದರೆ, ಮೊಬೈಲ್ ರಿಂಗ್ ಆದರೂ ರಿಸಿವ್ ಆಗುತ್ತಿರಲಿಲ್ಲ. ನಂತರ ಗಾಬರಿಗೊಂಡು ಎಲ್ಲಾ ಕಡೆ ಹಡುಕಾಡಿದರೂ ಪತ್ತೆ ಆಗಿರುವುದಿಲ್ಲ. ಕಾರಣ ಹರಿಹರ ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು.

- Advertisement -

ನಂತರ 19ರಂದು ದಾವಣಗೆರೆಯ ಕುಂದವಾಡ ಕೆರೆಯ ಬಳಿ ಇರುವ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಕತ್ತು ಸೀಳಿ ಕೊಲೆಯಾಗಿದ್ದ ಮೃತ ವ್ಯಕ್ತಿಯ ದೇಹ ದೊರೆತಿದ್ದು, ಸ್ಥಳಕ್ಕೆ ಬರುವಂತೆ ಹರಿಹರದ ಎಂ.ಮೆಹಬೂಬ್ ಪಾಷಾ ಅವರಿಗೆ ತಿಳಿಸಲಾಯಿತು. ಆ ಮೇರೆಗೆ ಪಾಷಾ ಅವರು ಸ್ಥಳಕ್ಕೆ ಬಂದು ನೋಡಿ, ಕೊಲೆಯಾಗಿರುವ ಯುವಕ ತನ್ನ ಮಗನೆಂದು ತಿಳಿಯಿತು.

ಮೊಹಮ್ಮದ್ ಅಲ್ತಾಫ್‍ನ ಜೊತೆಗೆ ಬಂದಿದ್ದ ಇಬ್ರಾಹಿಂ ಮತ್ತು ಬೈಕಿನ ಬಗ್ಗೆ ಮಾಹಿತಿ ಇರುವುದಿಲ್ಲ. ಯಾರೋ ಯಾವುದೋ ವಿಚಾರಕ್ಕೆ ಇಲ್ಲಿಯೇ ಅಥವಾ ಎಲ್ಲಿಯೋ ಕೊಲೆ ಮಾಡಿದಂತೆ ಕಂಡು ಬರುತ್ತಿದೆ. ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಅಂತಾ ಮೆಹಬೂಬ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Join Whatsapp