ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಎಚ್.ಡಿ.ಕುಮಾರಸ್ವಾಮಿ

Prasthutha|

ಹಾಸನ: ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; “ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ಮಾಡಿದ್ದಾರೆ. ಇದರಲ್ಲಿ ಎಲ್ಲಾ ಸಮಾಜದ ಸಂಘಟನೆಗಳ ಪಾತ್ರವೂ ಇದೆ. ಇದು ವ್ಯವಸ್ಥಿತವಾಗಿ ಶುರುವಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಇದೆ. ಅದಕ್ಕೆ ಈ ವಿಷಯವನ್ನು ದೇಶವ್ಯಾಪಿ ಹರಡುವಂತೆ ಮಾಡಲಾಗುತ್ತಿದೆ. ಹಾಗಾಗಿ ಜನ ಇಂಥ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬಾರದು” ಎಂದರು.

ನಮಗೆಲ್ಲರಿಗೂ ಬೇಕಿರುವುದು ಬದುಕು ಮಾತ್ರ. ಬದುಕು ಕಟ್ಟುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಮಾಜವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದು ಅವರು ಪ್ರತಿಪಾದಿಸಿದರು.

- Advertisement -

ರಾಜ್ಯದಲ್ಲಿ ಹಿಜಾಬ್ ವಿವಾದ ಯಾಕೆ ಪ್ರಾರಂಭವಾಯಿತು? ಇದರ ಹಿಂದಿನ ದುರುದ್ದೇಶವೇನು?

ಶಿಕ್ಷಣ ಕ್ಷೇತ್ರಕ್ಕೂ ಇದನ್ನು ಯಾಕೆ ತಂದರು? ಮಕ್ಕಳ ಹೃದಯ ಹಾಳು ಮಾಡಲು ಈ ರೀತಿ ಮಾಡಬೇಕಿತ್ತಾ? ಯಾವುದೋ ಒಂದು ಶಾಲೆಯಲ್ಲಿ ಆರಂಭವಾದ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ ಅದನ್ನು ಅಲ್ಲಿಗೇ ಬಿಡುವುದು ಕೆಲವರಿಗೆ ಬೇಕಿರಲಿಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಮತ ಗಳಿಕೆ ಹುನ್ನಾರ: ಹಿಜಾಬ್ ವಿವಾದ ದೊಡ್ಡ ಮಟ್ಟದಲ್ಲಿ ಹರಡಿದರೆ ಇದರ ಮೆಲೆ ಭಾವನಾತ್ಮಕ ವಿಚಾರ ಇಟ್ಟು ಮತಗಳನ್ನಾಗಿ  ಪರಿವರ್ತನೆ ಮಾಡಬಹುದು ಎನ್ನುವ ದುರಾಲೋಚನೆ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಎಲ್ಲಾ ದುಷ್ಟ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವ ಕ್ಷಣದಲ್ಲಿ ಇದು ಯಾರಿಗೆ ತಿರಗುಬಾಣ ಆಗುತ್ತದೆ ಎನ್ನುವುದನ್ನು  ನೋಡೊಣ ಎಂದು ಅವರು ಮಾರ್ಮಿಕವಾಗಿ ಹೇಳಿದರು.

 ಪೋಷಕರು ಎಚ್ಚರ ವಹಿಸಬೇಕು. ನಿಮ್ಮ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಯಾವುದೇ ಸಂಘಟನೆ ಇರಲಿ, ಅಂಥವರಿಗೆ ಅವಕಾಶ ಕೊಡಬೇಡಿ. ನಿಮ್ಮ ಮಕ್ಕಳನ್ನು ಅಂತಿಮವಾಗಿ ದಾರಿ ತಪ್ಪಿಸುತ್ತಿದ್ದಾರೆ. ಆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನೈಜ ವಾತಾವರಣ ಏನಿದೆ ಎಂಬ ಬಗ್ಗೆ ಮಕ್ಕಳಿಗೆ ಬುದ್ದಿ ಹೇಳಿ. ಚಿಕ್ಕ ಮಕ್ಕಳಲ್ಲಿ ದ್ವೇಷದ ಮನೋಭಾವನೆ ಬೆಳೆಸುವಂಥ ಕೆಲಸ ಬೇಡ. ಸಮಾಜವನ್ನು ದಾರಿ ತಪ್ಪಿಸುವಂತಹ ಸಂಘಟನೆಗಳಿಗೆ ಯಾರೂ ಬಲಿಯಾಗುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.

ಈ ವಿವಾದವನ್ನು ಆರಂಭದಲ್ಲಿಯೇ ಮೊಟಕುಗೊಳಿಸಬಹುದಿತ್ತು. ಯಾರೂ ಅಭಿವೃದ್ಧಿ ವಿಚಾರಗಳನ್ನು ಚರ್ಚೆ ಮಾಡದೇ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಸರಕಾರಗಳಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭಿವೃದ್ಧಿಪೂರಕ ವಿಚಾರ ಚರ್ಚೆ ಮಾಡಲು ಇವರ ಬಳಿ ವಿಚಾರಗಳೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಒಂದೂವರೆ ತಿಂಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ: ಹಾಸನ ಜಿಲ್ಲೆ ರಾಜಕಾರಣಕ್ಕೆ ಸಂಬಂಧಿಸಿ ನೇರವಾಗಿ ನನ್ನ ಪಾತ್ರವೇನೂ ಇಲ್ಲ ಎಂದ ಮಾಜಿ ಮುಖ್ಯಮಂತ್ರಿಗಳು;  ಈ ಜಿಲ್ಲೆಯ ರಾಜಕಾರಣದಲ್ಲಿ ಇದುವರೆಗೂ ನಾನು ಮೂಗು ತೂರಿಸಿಲ್ಲ. ಆದರೆ, ಈ ಸಲ ಹಾಸನ ವಿಧಾನಸಭಾ ಕ್ಷೇತ್ರ ಒಂದನ್ನು ಮಾತ್ರ ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ. ನಾನು ಸಿಎಂ ಆಗಿದ್ದ ವೇಳೆ ಹಾಸನ ಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಹಾಸನ ವಿಧಾನಸಭೆ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಒಂದೂವರೆ ತಿಂಗಳಿನಲ್ಲಿ ಜೆಡಿಎಸ್ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ. ಅದರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುತ್ತೇನೆ. ಈ ಕ್ಷೇತ್ರದಲ್ಲಿ ನಮ್ಮ ಕುಟುಂಬದವರು ಸ್ಪರ್ಧಿಸುತ್ತಾರೆ ಎನ್ನುವುದು ಊಹಾಪೋಹ. ಹಾಸನ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ. ಅವರೊಟ್ಟಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ.

ಹಾಸನದಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಲ್ಲರಿಗೂ ತಿಳಿದಿದೆ. ಎಚ್.ಎಸ್.ಪ್ರಕಾಶ್ ಇದ್ದ ಕಾಲದಲ್ಲಿ ಈ ರೀತಿ ವ್ಯವಸ್ಥೆ ಇರಲಿಲ್ಲ. ಅದನೆಲ್ಲದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರ ಜತೆ ಚರ್ಚಿಸಿ ಟಿಕೆಟ್ ನೀಡುತ್ತೇನೆ.

ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ಆಗುತ್ತಿಲ್ಲ: ವಿಧಾನಮಂಡಲ ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಪ್ರತಿ ಬಾರಿಯೂ ಅನಗತ್ಯ ವಿಷಯಗಳ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದರು.

ಕಲಾಪಗಳಲ್ಲಿ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನ ಚರ್ಚೆ ನಡೆಯುತ್ತಿಲ್ಲ. ಪ್ರತಿ ಬಾರಿಯೂ ಸದನದ ಸಮಯ ಬೇಡದ ವಿಚಾರಗಳಿಗೆ ಬಲಿಯಾಗುತ್ತಿದೆ. ನಾನು ಈ ಬಾರಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದರು ಅವರು.

ಇನ್ನು, ಕಾಂಗ್ರೆಸ್ ತೊರೆದಿರುವ ಸಿಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ಪಕ್ಷ ಸೇರುವಂತೆ ಮುಕ್ತ ಆಹ್ವಾನ ನೀಡಿದ್ದೇನೆ. ಆದರೆ, ಅವರು ತಮ್ಮ ಹಿತೈಷಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡುತ್ತೇವೆ ಎಂದು ಹೆಚ್ ಡಿಕೆ ತಿಳಿಸಿದರು.



Join Whatsapp