ಅಜ್ಜ ಎಲುಬು ಮುರಿದುಕೊಂಡುದನ್ನು ಕಂಡು ರಸ್ತೆ ಗುಂಡಿ ಮುಚ್ಚಿದ ಮೊಮ್ಮಗ!

Prasthutha|

ಪಾಂಡಿಚೇರಿ: ರಸ್ತೆ ಗುಂಡಿಗಳಿಂದಾಗಿ ತನ್ನ ಅಜ್ಜ ಬೈಕ್’ನಿಂದ ಬಿದ್ದು ಎಲುಬು ಮುರಿದುಕೊಂಡಿದ್ದರಿಂದ ವ್ಯಥೆಪಟ್ಟ ಮೊಮ್ಮಗನೋರ್ವ ರಸ್ತೆ ಗುಂಡಿಗಳನ್ನು ಮುಚ್ಚಿದ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ.

- Advertisement -


ಪಾಂಡಿಚೇರಿ ನೆರೆಯಲ್ಲಿನ ರಸ್ತೆಗಳು ದೇಶದ ಇತರ ಕಡೆಗಳ ರಸ್ತೆಗಳಿಗಿಂತ ಬೇರಲ್ಲ; ಸಾಕಷ್ಟು ರಸ್ತೆ ಗುಂಡಿಗಳು ಕಾಣಸಿಗುತ್ತವೆ. ತಮ್ಮ ಅಜ್ಜ ಇಂತಹ ಹೊಂಡದ ಕಾರಣದಿಂದ ಬೈಕಿನಿಂದ ಬಿದ್ದು ಎಲುಬು ಮುರಿದುಕೊಂಡುದನ್ನು ಕಂಡು 8ನೇ ತರಗತಿಯ ಮೊಮ್ಮಗ ಕಂಗಾಲಾದ. ಕೊನೆಗೆ ರಸ್ತೆಯ ಗುಂಡಿಗಳನ್ನು ಮುಚ್ಚಲು ತೀರ್ಮಾನಿಸಿ ಆ ಕೆಲಸವನ್ನು ಮಾಡಿಯೂ ಮುಗಿಸಿದ್ದಾನೆ.
ಕೆಲವು ದಿನಗಳ ಹಿಂದೆ ಬೇಸಾಯಗಾರರಾದ ಆ ಅಜ್ಜ ಬೈಕಿನಲ್ಲಿ ಹೋಗುವಾಗ ರಸ್ತೆ ಗುಂಡಿಯಲ್ಲಿ ಹಿಡಿತ ತಪ್ಪಿ ಎಲುಬು ಮುರಿದುಕೊಂಡು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದರು. ಇದನ್ನು ನೋಡಿದ 13ರ ಪ್ರಾಯದ ಮೊಮ್ಮಗ ಮಾಸಿಲಾಮಣಿ ಬೇರೆಯದೇ ತೀರ್ಮಾನ ಮಾಡಿದ.


ಮಾಸಿಲಾಮಣಿ ಜಲ್ಲಿ ಮತ್ತು ಮರಳು ಸಂಗ್ರಹಿಸಿ ಅದನ್ನು ಸಿಮೆಂಟಿನಲ್ಲಿ ಕಲಸಿ ತನ್ನೂರಿಂದ ಪೇಟೆಗೆ ಹೋಗುವ ರಸ್ತೆಯ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿ ಹಾಕಿದ. ತನ್ನ ಸೆಂದನಾತಂ ಅಲ್ಲದೆ ಪಕ್ಕದ ವಿಲ್ಲಿಯನೂರ್ ಉದ್ದಕ್ಕೂ ರಸ್ತೆಯ ಗುಂಡಿಗಳನ್ನು ಮುಚ್ಚಿದ್ದಾನೆ ಈ ಬಾಲಕ.

- Advertisement -


“ನನ್ನ ಅಜ್ಜನಿಗೆ ಈ ರಸ್ತೆ ಗುಂಡಿಗಳಿಂದ ಅಪಘಾತವಾಗಿ ಎಲುಬು ಮುರಿತ ಆದಂತೆ ಬೇರೆಯವರಿಗೆ ಆಗಬಾರದು ಎನ್ನುವ ಕಾರಣಕ್ಕೆ ಗುಂಡಿಗಳನ್ನು ಮುಚ್ಚಿ ಹಾಕಿದೆ” ಎಂದು ಮಾಸಿಲಾಮಣಿ ಹೇಳಿದ್ದಾನೆ.
ಬಾಲಕನ ಕೆಲಸವನ್ನು ಗಮನಿಸಿದ ಮಾಜಿ ಶಾಸಕ ವಯ್ಯಾಪುರಿ ಮಣಿಕಂಡನ್ ಸ್ಥಳಕ್ಕೆ ಬಂದು ಬಾಲಕನನ್ನು ಪ್ರಶಂಸಿಸಿ, ಕೆಲವು ಪುಸ್ತಕ ಬಹುಮಾನ ನೀಡಿದ್ದಾರೆ.
ಹುಡುಗನ ನೆರೆಹೊರೆಯವರು, ಪಕ್ಕದೂರಿನವರು ಸಹ ಬಂದು ಶಾಲು ಹಾಕಿ ಸನ್ಮಾನಿಸಿದ್ದಾರೆ. ಪಾಂಡಿಚೇರಿಯಿಂದ ಪತುಕನ್ನು ರಸ್ತೆಯು ಕಳೆದ ಏಳು ವರ್ಷಗಳಿಂದ ಕೆಟ್ಟು ಕೂತಿದ್ದರೂ ಆಳುವ ಯಾರೂ ಅತ್ತ ತಿರುಗಿ ನೋಡುತ್ತಿಲ್ಲ ಎಂದು ಬಾಲಕನನ್ನು ಭೇಟಿಯಾದ ಜನರೆಲ್ಲ ತಿಳಿಸಿದರು.

Join Whatsapp