ಹಿಜಾಬ್ ಕಾರಣಕ್ಕೆ ಶಿಕ್ಷಣದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿರುವುದು ಖಂಡನೀಯ: SSF

Prasthutha|

ಶಿವಮೊಗ್ಗ: ಮುಸ್ಲಿಂ ಹೆಣ್ಮಕ್ಕಳು ಶಾಲಾ ಕಾಲೇಜುಗಳಿಗೆ  ಹಿಜಾಬ್ ಧರಿಸಿ ಹೋಗುತ್ತಿರುವುದು ಹೊಸದೇನಲ್ಲ. ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲಾ ಆವರಣದೊಳಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ಮನಸ್ಥಿತಿ ನಿಜಕ್ಕೂ ಗಾಬರಿಯುಂಟುಮಾಡಿದೆ. ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಇಂತಹ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಬಟ್ಟೆಯ ಕಾರಣಕ್ಕೆ ಶಿಕ್ಷಣದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿರುವುದನ್ನು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್  ಖಂಡಿಸಿದೆ.

- Advertisement -

ಸಮವಸ್ತ್ರದ ಶಾಲಿನಲ್ಲಿ ತಲೆ ಮುಚ್ಚಿಕೊಂಡರೆ ಉಂಟಾಗುವ ಸಮಸ್ಯೆಯಾದರೂ ಏನು? ಹಿಜಾಬ್‌ ವಿವಾದವಾಗುವ ವಿಷಯವೇ ಅಲ್ಲ. ಇಲ್ಲಿ ಸಮಸ್ಯೆ ಮನಸ್ಥಿತಿಯದ್ದು,ಹಿಜಾಬ್‌ನದ್ದಲ್ಲ. ಈ ಹಿಂದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹಿಜಾಬ್‌ ವಿವಾದ ಉಂಟಾದಾಗ ಶೀಘ್ರವೇ ಬಗೆಹರಿದಿದೆ.ಆದರೆ ಕರಾವಳಿಯಲ್ಲಿ ಮಾತ್ರ ಏಕಾಏಕಿ ಹಿಜಾಬ್‌ ಸಮಸ್ಯೆಯಾಗಿ ಉಲ್ಬಣಗೊಂಡಿದ್ದು ಯಾಕೆ ಎಂಬುವುದು ಜನಸಾಮಾನ್ಯರಿಗೆ ತಿಳಿದಿದೆ. ವಿದ್ಯಾರ್ಥಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಮ್ಮ ಕಾರ್ಯ ಸಾಧಿಸುವವರ ಬಗ್ಗೆ  ಮತ್ತು ಕ್ಯಾಂಪಸ್‌ಗಳನ್ನು ಪ್ರಯೋಗ ಶಾಲೆಗಳನ್ನಾಗಿ ಮಾಡುವ ಕುತ್ಸಿತ ಮನಸ್ಥಿತಿಯವರ ಷಡ್ಯಂತ್ರವನ್ನು ಅರಿತುಕೊಂಡು ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಹೇಳಿದರು.

ಸಂವಿಧಾನಬದ್ಧ ಹಕ್ಕುಗಳು ಇರುವಾಗ ಇಲ್ಲಿ ಆಯ್ಕೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಜಾಬ್‌ ಮುಖ್ಯವೋ? ಶಿಕ್ಷಣ ಮುಖ್ಯವೋ? ಎನ್ನುವ ಪ್ರಶ್ನೆಗಳು ಅಲ್ಪಸಂಖ್ಯಾತ ಸಮುದಾಯವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಇನ್ನಷ್ಟು ದುರ್ಬಲಗೊಳಿಸುವ ಕುತಂತ್ರವಾಗಿದೆ.ಆಸಕ್ತರು ಹಿಜಾಬ್ ಧರಿಸುವುದರಿಂದ ಇತರ ಯಾರಿಗೂ ತೊಂದರೆಯುಂಟಾಗುವುದಿಲ್ಲ. ಆದುದರಿಂದ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡುವುದೇ ಇದಕ್ಕೆ ಸೂಕ್ತ ಪರಿಹಾರ ಎಂದು ಅವರು ಹೇಳಿದರು.

Join Whatsapp