ಐಸಿ 814 ವಿಮಾನ ಹೈಜಾಕರ್ ಜಹೂರ್ ಮಿಸ್ತ್ರಿ ಹತ್ಯೆ

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯ ಅಖ್ತರ್ ಕಾಲೋನಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಮಿಸ್ತ್ರಿಯನ್ನು ಮಾರ್ಚ್ 1ರಂದು ಕೊಲೆ ಮಾಡಿರುವುದಾಗಿ ವರದಿಯಾಗಿದೆ.

- Advertisement -

ಪಾಕಿಸ್ತಾನದ ಜಿಯೋ ಟೀವಿ ಈ ಕೊಲೆಯನ್ನು ಖಚಿತಪಡಿಸಿದ್ದು ಆತ ಕರಾಚಿಯಲ್ಲಿ ಉದ್ಯಮಿಯಾಗಿದ್ದ ಎಂದೂ ಹೇಳಿದೆ. ಮಿಸ್ತ್ರಿಯು ಜಾಹಿದ್ ಅಖುಂದ್ ಎಂಬ ನಕಲಿ ಹೆಸರಿನಲ್ಲಿ ಕರಾಚಿಯಲ್ಲಿ ಕ್ರೆಸೆಂಟ್ ಫರ್ನೀಚರ್ ಎಂಬ ಉದ್ಯಮದಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ.

ಜೈಶ್ ಎ ಮುಹಮ್ಮದ್ ನ ಮಸೂದ್ ಅಜರ್ ನ ಸಹೋದರ ರೌಫ್ ಅಸ್ಗರ್ ಮಿಸ್ತ್ರಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಕೊಲೆಗಾರರು ಕೊಲೆ ಮಾಡಿದ ಪ್ರದೇಶದಲ್ಲಿ ಮೊದಲು ಅಡ್ಡಾಡುತ್ತಿದ್ದ ಸಿಸಿಟಿವಿ ದೃಶ್ಯಗಳನ್ನು ಕೂಡ ಮಾಧ್ಯಮಗಳು ತೋರಿಸಿವೆ.

ನೇಪಾಳದ ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಭಾರತೀಯ ಏರ್ ಲೈನ್ಸ್ ನ ವಿಮಾನವನ್ನು1999ರ ಡಿಸೆಂಬರ್ 24ರಂದು ಪಾಕಿಸ್ತಾನಕ್ಕೆ ಅಪಹರಣ ಮಾಡಲಾಗಿತ್ತು.

ಮಿಸ್ತ್ರಿ ಸಹಿತ ಐದು ಜನ ವಿಮಾನ ಅಪಹರಣಕಾರರು ಇದ್ದರು. ರೌಫ್ ಅಸ್ಗರ್, ಅಜರ್ ಮತ್ತು ಆತನ ಅಣ್ಣ ಇಬ್ರಾಹಿಂ ಅಜರ್ ಅಪಹರಣಕಾರರಲ್ಲಿ ಸೇರಿದ್ದರು. ವಿಮಾನದಲ್ಲಿ 25ರ ಪ್ರಾಯದ ರೂಪಿನ್ ಕತ್ಯಾಲ್ ಎಂಬ ಒಬ್ಬ ಪ್ರಯಾಣಿಕರನ್ನು ಕೊಲೆ ಮಾಡಿದ್ದು ಕೂಡ ಇದೇ ಮಿಸ್ತ್ರಿ. ಕಾಠ್ಮಂಡುವಿನಲ್ಲಿ ಮಧುಚಂದ್ರ ಮುಗಿಸಿ ಕತ್ಯಾಲ್ ಹೆಂಡತಿಯೊಂದಿಗೆ ದೆಹಲಿಗೆ ವಾಪಾಸು ಬರುತ್ತಿದ್ದರು.

ಸಿಬ್ಬಂದಿ ಸೇರಿ ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಲಕ್ನೋ ಮೇಲೆ ಹಾರುವಾಗ ಅದನ್ನು ಹೈಜಾಕ್ ಮಾಡಿ, ಇಂಧನ ತುಂಬಿಸಲು ಅಮೃತಸರದಲ್ಲಿ ಇಳಿಸಲಾಯಿತು. ಪಾಕಿಸ್ತಾನವು ಲಾಹೋರ್ ನಲ್ಲಿ ಇಳಿಯಲು ಅವಕಾಶ ನೀಡದ್ದರಿಂದ ವಿಮಾನವನ್ನು ಕಂದಹಾರ್ ಗೆ ಒಯ್ಯಲಾಗಿತ್ತು.

ಅಫಘಾನಿಸ್ತಾನದಲ್ಲಿ ಮಾತುಕತೆ ನಡೆದು ಅದರಂತೆ ಭಾರತದ ಜೈಲಿನಲ್ಲಿದ್ದ ಜೈಶ್ ಎ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಅವರ ಸಂಗಾತಿಗಳಾದ ಸಯೀದ್ ಶೇಖ್ ಹಾಗೂ ಮುಸ್ತಾಕ್ ಅಹ್ಮದ್ ಜರ್ಗರ್ ರನ್ನು ಬಿಡುಗಡೆ ಮಾಡಿ ಪ್ರಯಾಣಿಕರನ್ನು ಬಿಡಿಸಿಕೊಳ್ಳಲಾಯಿತು.

Join Whatsapp