ಪಠ್ಯಪುಸ್ತಕ ಪರಿಷ್ಕರಣೆ: ಕಲುಷಿತ ವಾತಾವರಣ ತಿಳಿಗೊಳಿಸಲು ಸಿಎಂ ಮಧ್ಯಪ್ರವೇಶಿಸಬೇಕು- ಡಾ.ಟಿ.ಎಸ್.ನಾಗಾಭರಣ

Prasthutha|

ಬೆಂಗಳೂರು: ಪರಿಷ್ಕೃತ ಪಠ್ಯ ಪುಸ್ತಕಗಳ ಬಗ್ಗೆ ನಡೆಯುತ್ತಿರುವ ವಾದ-ವಿವಾದಗಳು, ಪರಸ್ಪರ ಕೆಸರೆರಚಾಟ ಸುಸಂಸ್ಕೃತ ಸಮಾಜದ ಘನತೆಗೆ ಚ್ಯುತಿ ತರುವುದಾಗಿದೆ. ‘ಅಪ್ಪ ಅಮ್ಮನ ಜಗಳದ ನಡುವೆ ಕೂಸು ಬಡವಾಯಿತು’ ಅನ್ನುವಂತೆ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ ಅನ್ನುವ ಭಾವ ಜವಾಬ್ದಾರಿಯುತ ನಾಗರಿಕರನ್ನು, ಪೋಷಕರನ್ನು ಕಾಡುತ್ತಿದೆ. ಪರಿಷ್ಕೃತ ಪಠ್ಯದ ಚರ್ಚೆ ವಿದ್ಯಾರ್ಥಿಗಳ, ಕನ್ನಡ ಶಾಲೆಗಳ ಭವಿಷ್ಯಕ್ಕೆ ಚ್ಯುತಿ ತರಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಆಗ್ರಹಿಸಿದ್ದಾರೆ.

- Advertisement -

10ನೇ ತರಗತಿಯವರೆಗೆ ಇರುವ ಸಾರ್ವತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಮತ್ತು ಸಂವಹನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರೆ, ನಂತರ ಆಡಳಿತ, ನ್ಯಾಯಾಂಗ, ವಾಣಿಜ್ಯ, ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡ ಬಳಸುವುದು ವಿಶೇಷ ಸಮಸ್ಯೆ ಆಗುತ್ತಿರಲಿಲ್ಲ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಕನ್ನಡ ಎಂಬ ಪಠ್ಯಪುಸ್ತಕದಲ್ಲಿಯೂ ಕನ್ನಡವನ್ನು ಕಲಿಸುವ ಉದ್ದೇಶವನ್ನು ಇಟ್ಟುಕೊಳ್ಳದಿರುವುದು ಪ್ರಾಧಿಕಾರದ ಆತಂಕವಾಗಿದೆ ಎಂದು ಟಿ.ಎಸ್.ನಾಗಾಭರಣ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಇತ್ಯಾದಿಗಳನ್ನು ಕಲಿಸುತ್ತೇವೆ. ವಿಜ್ಞಾನದ ಪಠ್ಯಕ್ರಮದಲ್ಲಿ ವಿಜ್ಞಾನವನ್ನು ಕಲಿಸುತ್ತೇವೆ. ಸಮಾಜ ವಿಜ್ಞಾನದ ಪಠ್ಯಕ್ರಮದಲ್ಲಿ ಸಮಾಜ ವಿಜ್ಞಾನವನ್ನು ಕಲಿಸುತ್ತೇವೆ. ಗಣಿತದಲ್ಲಿ ಗಣಿತ. ಆದರೆ ಕನ್ನಡ ಪಠ್ಯಕ್ರಮದಲ್ಲಿ ಕನ್ನಡವನ್ನು ಕಲಿಸುವುದಿಲ್ಲ. ಸ್ವಾತಂತ್ರ್ಯ ಹೋರಾಟ, ಮಹಾನ್ ವ್ಯಕ್ತಿಗಳು, ಪ್ರೇಕ್ಷಣಿಯ ಸ್ಥಳಗಳು, ನೀತಿ ಪಾಠಗಳು, ಪ್ರಬಂಧ, ಕಥೆ, ನಾಟಕ, ಗದ್ಯ ಮತ್ತು ಹಲವಾರು ಪದ್ಯಗಳು ಕನ್ನಡ ಪಠ್ಯಕ್ರಮದಲ್ಲಿರುತ್ತವೆ. ಹೀಗಾದರೆ ಕನ್ನಡ ಭಾಷೆಯನ್ನು ಕಲಿಯುವುದು ಯಾವಾಗ ಮತ್ತು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

- Advertisement -

ಈಗ ಪಠ್ಯಕ್ರಮದ ಪರಿಷ್ಕರಣದಲ್ಲಿ ಯಾವುದು ಇರಬೇಕು ಇರಬಾರದು ಎನ್ನುವ ಕುರಿತು ವ್ಯಾಪಕವಾದ ಚರ್ಚೆ ನಡೆದಿರುವುದು ವಸ್ತುವಿಷಯದ ಬಗ್ಗೆ. ಆದರೆ ಭಾಷಾ ಕೌಶಲಾಭಿವೃದ್ಧಿ ಕುರಿತು ಈಗಲೂ ಯಾರೂ ಮಾತಾಡುತ್ತಿಲ್ಲ ಎಂದು ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಪಠ್ಯಕ್ರಮದಲ್ಲಿ ಪ್ರಮುಖವಾಗಿ ಆಗಬೇಕಾಗಿರುವುದು ವಸ್ತುವಿಷಯದ ಕುರಿತು ಚರ್ಚೆಯಲ್ಲ, ಕನ್ನಡ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಕೌಶಲಗಳನ್ನು ಕಲಿಸಿಕೊಡುವುದು ಹೇಗೆ, ಅದಕ್ಕೆ ತಕ್ಕ ಹಾಗೆ ವಿವಿಧ ಹಂತದ ಪಠ್ಯಪುಸ್ತಕಗಳು ಹೀಗಿರಬೇಕು ಇತ್ಯಾದಿ ಕುರಿತು ಬಹಳ ಗಹನವಾದ ಚರ್ಚೆ, ಕಾರ್ಯಾಚರಣೆ, ಅನುಷ್ಠಾನ ಆಗಬೇಕಾಗಿದೆ. ಇದು ಪ್ರಾಧಿಕಾರಕ್ಕೆ ಇರುವ ಪ್ರಮುಖ ಕಾಳಜಿಯಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣದಲ್ಲಿ ಕನ್ನಡಕ್ಕೆ ಧಕ್ಕಬೇಕಾದ ಆದ್ಯತೆ ಇನ್ನೂ ದೊರೆತಿಲ್ಲ. ಈ ಸನ್ನಿವೇಶದಲ್ಲಿ ನಾಡಿನ ಪ್ರಜ್ಞಾವಂತರು ಪಠ್ಯಪುಸ್ತಕದ ಬಗ್ಗೆ ಪರ-ವಿರೋಧದ ಬಣಗಳಾಗಿ ಶತ್ರುಗಳಂತೆ ನಡೆದುಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ. ಪಠ್ಯವನ್ನು ಅಂತಿಮವಾಗಿ ಗುರಿ ಮುಟ್ಟಿಸುವವರು ಶಿಕ್ಷಕರು ಇದರ ಪ್ರಯೋಜನಾರ್ಥಿಗಳು ಮಕ್ಕಳು ಮತ್ತು ಪೋಷಕರು. ಪರಿಷ್ಕರಣ ಸಮಿತಿಯಲ್ಲಿ ಇವರ ಪ್ರಾತಿನಿಧ್ಯ ಬಹಳ ಮುಖ್ಯ ಎಂಬುದು ಎಲ್ಲರ ಅರಿವಿನಲ್ಲಿರಬೇಕೆಂದು ಪ್ರಾಧಿಕಾರದ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ವಿವಾದಗಳಿಂದಾಗಿ ಕನ್ನಡ ಭಾಷೆ ಹಾಗೂ ವಿದ್ಯಾರ್ಥಿ ಮತ್ತು ಪೋಷಕರು ಬಡವಾಗುತ್ತಿದ್ದಾರೆ. ಈ ಬಗ್ಗೆ ತುರ್ತಾಗಿ ಎಲ್ಲರೂ ಅಗತ್ಯಕ್ರಮ ವಹಿಸಲೇಬೇಕಾದ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳು ಈ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಾರ್ಥಿಸುತ್ತದೆ ಎಂದು ಮನವಿ ಮಾಡಿದ್ದಾರೆ.

Join Whatsapp