ತಮಿಳುನಾಡು: ಗೂಳಿಗೆ ಜೀವಂತ ಹುಂಜ ತಿನ್ನಿಸಿ ವಿಕೃತಿ

Prasthutha|

ಚೆನ್ನೈ: ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಗೂಳಿಗಳನ್ನು ಮಣಿಸಲಾಗುವ ಜಲ್ಲಿಕಟ್ಟು ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಈ ಸಂಬಂಧ ವ್ಯಕ್ತಿಗಳಿಬ್ಬರು ಗೂಳಿಯೊಂದಕ್ಕೆ ಜೀವಂತ ಹುಂಜ ತಿನ್ನಿಸಿದ ಕೃತ್ಯ ನಡೆದಿದೆ. ಈ ವಿಕೃತಿ ಮೆರೆಯಲಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇದನ್ನು ಪ್ರಸಾರ ಮಾಡಿದ ಯುಟ್ಯೂಬರ್ ವಿರುದ್ಧ FIR ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

- Advertisement -

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಹುಂಜವನ್ನು ಬಲವಂತವಾಗಿ ಗೂಳಿಗೆ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಸುಮಾರು 2 ನಿಮಿಷ ಇರುವ ಈ ವಿಡಿಯೋವನ್ನು ರಘು ಎಂಬಾತ ತನ್ನ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಗೂಳಿ ಸಸ್ಯಾಹಾರಿ ಪ್ರಾಣಿಯಾಗಿದ್ದು, ಅದಕ್ಕೆ ಹುಂಜವನ್ನು ತಿನ್ನಿಸುವ ಮೂಲಕ ವಿಕೃತಿ ಮೆರೆಯಲಾಗಿದೆ. ಒಂದು ವೇಳೆ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ ಈ ಎತ್ತು ಗೆದ್ದರೆ ಇದನ್ನು ನೋಡಿಕೊಂಡು ಅನೇಕ ಮಾಲೀಕರು ಇದನ್ನೇ ಅನುಸರಿಸುತ್ತಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯ ಅರುಣ್​ಎಂಬವರು ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ತಾರಮಂಗಲಂ ಪೊಲೀಸ್​ ಠಾಣಾಧಿಕಾರಿ, ಘಟನೆ ಸಂಬಂಧ ಪ್ರಾಣಿಪ್ರಿಯರು ಹಾಗೂ ಹಲವರು ವೈರಲ್​ ವಿಡಿಯೋ ಕುರಿತು ಆಕ್ಷೇಪವೆತ್ತಿದ ಬೆನ್ನಲ್ಲೇ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯುಟ್ಯೂಬರ್​ಗಾಗಿ ಶೋಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Join Whatsapp