ವೇದಿಕೆ ಸಿಕ್ಕಿತೆಂದು ಬಾಯಿಗೆ ಬಂದಂತೆ ಮಾತಾಡುವುದು ನಾಗರಿಕತೆಯ ಲಕ್ಷಣವಲ್ಲ: ನೂಪುರ್ ಶರ್ಮಾ ವಿರುದ್ಧ ಡಾ. ಸುಮತಿ ಹೆಗ್ಡೆ ಕಿಡಿ

Prasthutha|

ಮಂಗಳೂರು:  ಅಭಿವೃದ್ಧಿ, ಉದ್ಯೋಗ, ಕೃಷಿ ಮತ್ತು ತಾಂತ್ರಿಕತೆಯ ವಿಷಯದಲ್ಲಿ ಚರ್ಚಿಸಿ ಯೋಜನೆಗಳನ್ನು ರೂಪಿಸಬೇಕಾದ ಆಡಳಿತ ಪಕ್ಷವು ಧರ್ಮ, ಮಂದಿರ, ವಸ್ತ್ರ ಸಂಹಿತೆ ಮತ್ತು ಧಾರ್ಮಿಕ ನಂಬಿಕೆಗಳಂತಹ ವಿಚಾರಗಳಲ್ಲಿ ಮೂಗು ತೂರಿಸಿ ದೇಶವನ್ನು ಜಗತ್ತಿನ ಮುಂದೆ ಬೆತ್ತಲಾಗಿಸುತ್ತಿದೆ ಎಂದು ಜೆಡಿಎಸ್ ದ. ಕ. ಜಿಲ್ಲಾ ನಾಯಕಿ ಡಾ. ಸುಮತಿ ಹೆಗ್ಡೆ ಟೀಕಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮನುಷ್ಯನು ಆಸ್ತಿ ಅಂತಸ್ತುಗಳಿಗಿಂತ ನೆಮ್ಮದಿಯ ಜೀವನವನ್ನು ಬಯಸುತ್ತಾನೆ. ಆದರೆ ನಾವೀಗ ಆ ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ಸರ್ವ ಶ್ರೇಷ್ಠವಾದ ನಮ್ಮ ಸಂವಿಧಾನ ನಮಗೆ ಅಮೂಲ್ಯವಾದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಒಂದು ಧರ್ಮದ ವಿಶ್ವಾಸ, ನಂಬಿಕೆ ಮತ್ತು ಘನತೆಯನ್ನು ಹೀಯಾಳಿಸುವ ಮತ್ತು ನಿಂದಿಸುವುದು ನೀಚ ಕೃತ್ಯವಾಗಿದೆ. ನಾಲಗೆಯು ವ್ತಕ್ತಿತ್ವವನ್ನು ಸೂಚಿಸುತ್ತದೆ ಎಂಬಂತೆ ವೇದಿಕೆ ಸಿಕ್ಕಿತೆಂದು ಬಾಯಿಗೆ ಬಂದಂತೆ ಮಾತಾಡುವುದು ನಾಗರಿಕತೆಯ ಲಕ್ಷಣವಲ್ಲ. ತನ್ನ ಧರ್ಮವನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಗೌರವವನ್ನು ಇತರ ಧರ್ಮಕ್ಕೂ ನೀಡುವುದೇ ಶ್ರೇಷ್ಠ ಧರ್ಮವಾಗಿದೆ. ಸರ್ವ ಜನಾಂಗದ ಶಾಂತಿಯ ದೋಟವಾದ ಭಾರತದ ನೆಲದಲ್ಲಿ ಈ ರೀತಿಯ ತಾರತಮ್ಯಗಳು ನೋಡುವಾಗ ಅತೀ ನೋವಾಗುತ್ತದೆ. ಸಾಮರಸ್ಯ ಮತ್ತು ಸಹಬಾಳ್ವೆಗೆ ಧಕ್ಕೆ ತರುವಂತ ಕೆಲಸಗಳನ್ನು ನಿಲ್ಲಿಸಬೇಕು. ರಾಜಕೀಯದ ಲಾಭಕ್ಕೋಸ್ಕರ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಈ ರೀತಿಯ ವೈಷಮ್ಯ ಹೇಳಿಕೆಗಳು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಶ್ರೇಷ್ಠ ಮಾನವತಾವಾದಿ ಪ್ರವಾದಿ ಮುಹಮ್ಮದರನ್ನು ನಿಂದಿಸಿದ ಬಿ.ಜೆ.ಪಿ ನಾಯಕರಾದ ನೂಪೂರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕಾಗಿದೆ ಎಂದು ಈ ಮೂಲಕ ಜೆ.ಡಿ.ಎಸ್ ನಾಯಕಿಯಾದ  ಸುಮತಿ.ಎಸ್.ಹೆಗ್ಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp