ಮಂಗಳೂರಿನ ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಆಗಸ್ಟ್ ಅಂತ್ಯದಲ್ಲಿ ಶಸ್ತ್ರಚಿಕಿತ್ಸೆ ವಿಭಾಗ ಆರಂಭ: ಡಾ.ಇಕ್ಬಾಲ್

Prasthutha|

ಮಂಗಳೂರು: ಮಂಗಳೂರಿನ ವೆನ್ಲಾಕ್ ಆಯುಷ್ ಆಸ್ಪತ್ರೆ ಯಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಸರ್ಜರಿ ಚಿಕಿತ್ಸೆ ವಿಭಾಗ ಆರಂಭ ವಾಗಲಿದೆ ಎಂದು ಆಯುಷ್ ಜಿಲ್ಲಾ ಅಧಿಕಾರಿ ಡಾ.ಇಕ್ಬಾಲ್ ಮಾಹಿತಿ ನೀಡಿದರು.

- Advertisement -

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಸಂವಾದ ಹಾಗೂ ಆಯುಷ್ ಬೂಸ್ಟರ್ ಕಿಟ್ ವಿತರಣೆ ಹಾಗೂ ಆಯುಷ್ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

  ಈಗಾಗಲೇ ಆಯುರ್ವೇದ, ಯುನಾನಿ, ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೌಲಭ್ಯವಿದ್ದು, ಇನ್ನುಶಸ್ತ್ರ ಚಿಕಿತ್ಸೆಯೂ ಈ ಸಾಲಿಗೆ ಸೇರಲಿದೆ. ಇದರೊಂದಿಗೆ ಈ ಆಯುಷ್ ಆಸ್ಪತ್ರೆ ಎಲ್ಲ ವಿಧದಲ್ಲೂ ಸರ್ವಸಜ್ಜಿತ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದು ಡಾ.ಇಕ್ಬಾಲ್ ಈ ಮಾಹಿತಿ ನೀಡಿದರು.

- Advertisement -

ಎಂಆರ್‌ಪಿಎಲ್‌ನ 25 ಲಕ್ಷ ರೂ. ಸಮಾಜಸೇವಾ ನಿಧಿಯಡಿ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿ ಕ್ಷಾರಸೂತ್ರ ಚಿಕಿತ್ಸೆಯನ್ನು ಆರಂಭಿಸಲಿದ್ದು, ಪುತ್ತೂರಿನ ಸುಶ್ರುತ ಆಸ್ಪತ್ರೆಯ ವೈದ್ಯ ಡಾ.ರವಿಶಂಕರ್ ಪೆರುವಾಜೆ ಹಾಗೂ ಶಿವಮೊಗ್ಗ ಆಸ್ಪತ್ರೆಯ ತಜ್ಞ ವೈದ್ಯರು ಇಲ್ಲಿಗೆ ಆಗಮಿಸಿ ಚಿಕಿತ್ಸೆ ನೆರವೇರಿಸಲಿದ್ದಾರೆ. ಪ್ರತಿ ವಾರ 10ರಿಂದ 25 ಸರ್ಜರಿ ಸಾಧ್ಯವಿದ್ದು, ಯುನಾನಿಯ ಹಿಜಾಮ ಚಿಕಿತ್ಸಾ ಸೌಲಭ್ಯವೂ ಇಲ್ಲಿದೆ. ಇಲ್ಲಿನ ಫಿಸಿಯೋಥೆರಪಿ ಸೆಂಟರ್‌ನಲ್ಲಿ ಎಲ್ಲ ವಿಧದ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಆಧುನಿಕ ಯಂತ್ರದಿಂದ ಹೈಡ್ರೋಥೆರಪಿ ಚಿಕಿತ್ಸೆಯೂ ಇಲ್ಲಿದೆ. ಇಲ್ಲಿ ಸುಸಜ್ಜಿತ ಪ್ರಯೋಗಾಲಯ ಕೂಡ ಇದ್ದು, ಎಕ್ಸರೇ ಮುಂತಾದವುಗಳಿಗೆ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಗಂಟು ನೋವಿಗೆ ಸರ್ಜರಿ ರಹಿತ ಚಿಕಿತ್ಸಾ ಸೌಲಭ್ಯವೂ ಇಲ್ಲಿದೆ. ಸದ್ಯ ಇಲ್ಲಿ ಎಲ್ಲ ಬಗೆಯ ಚಿಕಿತ್ಸೆಯನ್ನೂ ಉಚಿತವಾಗಿಯೇ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡುದಾರರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರೆ ಉತ್ತಮ. ಇದಕ್ಕಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಳಗೊಳಿಸುವ ನ್ಯೂಟ್ರಿಷಿಯನ್ ಔಷಧ ತೆಗೆದುಕೊಂಡರೆ ಉತ್ತಮ. ಆರೋಗ್ಯ ರಕ್ಷಣೆ ಜತೆಗೆ ರೋಗಿಗಳನ್ನು ರೋಗಮುಕ್ತಗೊಳಿಸುವುದೂ ಆಯುಷ್ ಆಸ್ಪತ್ರೆಯ ಉದ್ದೇಶವಾಗಿದೆ ಎಂದರು.

ಡಿಸೆಂಬರ್‌ಗೆ 50 ಬೆಡ್ ಪೂರ್ಣ:

ದ.ಕ.ಜಿಲ್ಲೆಯಲ್ಲಿ 7 ಆಯುಷ್ ಆರೋಗ್ಯ ಕೇಂದ್ರಗಳಿದ್ದು, ಉಳ್ಳಾಲ ಹಾಗೂ ಜೋಕಟ್ಟೆಯಲ್ಲಿ 2ರಿಂದ 10 ಬೆಡ್‌ನ ಆಸ್ಪತ್ರೆ ಇದೆ. ಲಾಲ್‌ಬಾಗ್‌ನ ಹ್ಯಾಟ್‌ಹಿಲ್‌ನಲ್ಲಿ ಹೋರರೋಗಿ ವಿಭಾಗದ ಜಿಲ್ಲಾ ಆಯುಷ್ ಆಸ್ಪತ್ರೆ ಇದೆ. ವೆನ್ಲಾಕ್‌ನಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ರಾಷ್ಟ್ರೀಯ ಆಯುಷ್ ಮಿಷನ್‌ನಿಂದ ನಿರ್ಮಿಸಲಾಗಿದೆ. ಜಿಲ್ಲೆಯ ಆಯುಷ್ ಆಸ್ಪತ್ರೆಗಳಲ್ಲಿ ದಿನದಲ್ಲಿ ಒಂದೂವರೆ ಸಾವಿರ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಾಸಿಕ 45 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಪ್ರಸಕ್ತ 20 ಬೆಡ್‌ಗಳಿದ್ದು, ಡಿಸೆಂಬರ್ ವೇಳೆಗೆ ಇದು 50 ಬೆಡ್‌ಗಳಿಗೆ ಪೂರ್ಣಗೊಳ್ಳಲಿದೆ ಎಂದರು.

2 ವರ್ಷದಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್:

ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಿರ್ಮಾಣವಾಗಲಿರುವ ದೇಶದಲ್ಲೇ ಮೊದಲ ಬಾರಿಯ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಎರಡು ವರ್ಷದಲ್ಲಿ ಕಾರ್ಯಾರಂಭಗೊಳ್ಳಲಿದೆ. ಸುಮಾರು 10 ಕೋಟಿ ರೂ.ಗಳಲ್ಲಿ ಆಯುಷ್ ಇಲಾಖೆಯಿಂದ ನಿರ್ಮಾಣವಾಗಲಿದ್ದು, ಇಲ್ಲಿ ಫಿಟ್ನೆಸ್ ಲ್ಯಾಬ್, ವಿವಿಧ ಯಂತ್ರೋಪಕರಣಗಳು ಇರಲಿದೆ. ಈ ಬಗ್ಗೆ ಸಾಯ್ ಹಾಗೂ ಯುವಜನ ಸೇವಾ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ 25 ಮಂದಿ ಸಿಬ್ಬಂದಿ ನೇಮಕಕ್ಕೆ ಮಂಜೂರಾತಿ ದೊರೆತಿದೆ ಎಂದರು. 2018ರಲ್ಲಿ ಸೃಷ್ಟಿ ಯೋಜನೆಯಲ್ಲಿ ಮೂರು ಮಕ್ಕಳನ್ನು ಹೊಂದಲಾಗಿದೆ. 57 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಅಪೌಷ್ಠಿಕತೆ ನಿವಾರಣೆಗೆ ಸಮೃದ್ಧಿ ಯೋಜನೆ, ತಾಯಿ ಮತ್ತು ಮಕ್ಕಳ ಆರೋಗ್ಯ ಪಾಲನೆಗೆ ಸುಪ್ರಜಾ ಯೋಜನೆ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ಅಥವಾ ಬೆಳ್ತಂಗಡಿಗೆ ಆಯುಷ್ ಸಂಚಾರಿ ಕ್ಲಿನಿಕ್ ಕಾರ್ಯಕ್ರಮ ಶೀಘ್ರವೇ ಜಾರಿಗೊಳ್ಳಲಿದೆ ಎಂದರು.

ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೇಮವಣಿ, ವೆನ್ಲಾಕ್ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ.ಅಜಿತ್ ನಾಥ್ ಇಂದ್ರ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ  ಬಿ.ಎನ್. ಪುಷ್ಪರಾಜ್  ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Join Whatsapp