ವಿದ್ಯಾರ್ಥಿ, ದಲಿತ, ಅಲೆಮಾರಿ ಮತ್ತು ಮಹಿಳಾ ಸಮುದಾಯದ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಕೂಡಲೆ ನಿಲ್ಲಿಸಿ: ಸಿದ್ದರಾಮಯ್ಯ ಒತ್ತಾಯ

Prasthutha|

ಬೆಂಗಳೂರು: ರಾಜ್ಯ ಸರ್ಕಾರವು ವಿದ್ಯಾರ್ಥಿ, ದಲಿತ, ಅಲೆಮಾರಿ ಮತ್ತು ಮಹಿಳಾ ಸಮುದಾಯದ ಮೇಲೆ ದೌರ್ಜನ್ಯವೆಸಗುತ್ತಿದ್ದು, ಈ ಕೂಡಲೆ ಅದನ್ನು ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ:

  1. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಮಹಿಳೆಯರು, ದಲಿತರು ಮತ್ತು ಅಲೆಮಾರಿ ಸಮುದಾಯಗಳ ಮೇಲಿನ ದಮನವನ್ನು ತೀವ್ರಗೊಳಿಸಿದೆಯೆಂಬುದು ಇಂದಿನ ಪತ್ರಿಕಾ ವರದಿಗಳಿಂದ ಅರ್ಥವಾಗುತ್ತದೆ. ಊರಿಲ್ಲದ, ಸೂರಿಲ್ಲದ ಮತ್ತು ವಿಳಾಸವೂ ಇರದ ಲಕ್ಷಾಂತರ ಸಂಖ್ಯೆಯ ಅಲೆಮಾರಿ ಸಮುದಾಯಗಳಾದ ಹಕ್ಕಿಪಿಕ್ಕಿಗಳು, ಹಂದಿಜೋಗಿಗಳು, ಸುಡುಗಾಡು ಸಿದ್ಧರು, ಚನ್ನದಾಸರು, ಬುಡ್ಗಜಂಗಮರು, ದೊಂಬರು, ಕಿಳ್ಳೆಕ್ಯಾತರು, ಕೊರಚ, ಕೊರಮ ಮುಂತಾದ ಜನರಿಗೆ ಮನೆ ಕಟ್ಟಿಕೊಡಲು ಕಳೆದ ಎರಡು ವರ್ಷಗಳಿಂದ ಮೀಸಲಿರಿಸಿದ್ದ 550 ಕೋಟಿ ಅನುದಾನವನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ವಾಪಸ್ಸು ಪಡೆದಿದೆ. ಮನೆ ನಿರ್ಮಿಸಿಕೊಡಬೇಕಾದ ಸರ್ಕಾರವು ದಾಖಲೆಗಳ ನೆಪ ಒಡ್ಡಿ ಅನುದಾನ ಹಿಂಪಡೆದಿರುವುದನ್ನು ನೋಡಿದರೆ ಈ ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸಲು ಬರುವುದಿಲ್ಲ ಮತ್ತು ಈ ಸರ್ಕಾರಕ್ಕೆ ಗೊತ್ತಿರುವುದು ಕೇವಲ ಭ್ರಷ್ಟಾಚಾರ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಜೊತೆಗೆ ಈ ಸರ್ಕಾರದ ಆಡಳಿತ ವಿಧಾನವೆ ದಲಿತ, ದಮನಿತ ಮತ್ತು ಮಹಿಳಾ ವಿರೋಧಿಯಾಗಿವೆ.

  2. 2.ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಾ ಬೆಂಗಳೂರಿನ ರಸ್ತೆಗಳಲ್ಲಿ ಮಲಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕನಿಷ್ಠ ಮಾನವೀಯವಾಗಿ ನಡೆದುಕೊಳ್ಳುವಷ್ಟೂ ನೈತಿಕತೆ ಈ ಸರ್ಕಾರಕ್ಕೆ ಇಲ್ಲವಾಗಿದೆ. ಅವರ ಮೇಲೆ ವ್ಯಾಪಕ ದೌರ್ಜನ್ಯ ಎಸಗಿ, ಅವರ ತಾಳಿ ಬಳೆಗಳನ್ನೂ ಕಿತ್ತೆಸೆಯಲಾಗಿದೆ. ಬಟ್ಟೆ ಬರೆ ಹರಿದು ಅವಮಾನಿಸಲಾಗಿದೆ.
    3.ಜೊತೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇನ್ನೊಂದು ಆಘಾತಕಾರಿ ವಿದ್ಯಮಾನ ನಡೆದಿದೆ. ಅಲ್ಲಿನ ಪರಿಶಿಷ್ಟ ಪಂಗಡದ ಹಾಸ್ಟೆಲ್ನರಲ್ಲಿ ಊಟ ಸರಿಯಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಮನೆ ಹತ್ತಿರ ರಾತ್ರಿ 10 ಗಂಟೆಯ ವೇಳೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆಂದು ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂಗದ ಹೊರಹಾಕಲಾಗಿದೆ.

  3. 4.ಬಳ್ಳಾರಿಯ ಜಿಲ್ಲಾಧಿಕಾರಿ ಮನುಷ್ಯನಾಗಿದ್ದರೆ, ಕಾನೂನಿನ ತಿಳುವಳಿಕೆ ಇದ್ದರೆ ಪ್ರತಿಭಟಿಸಿದ, ಸಮಸ್ಯೆಯನ್ನು ಗಮನಕ್ಕೆ ತಂದ ವಿದ್ಯಾರ್ಥಿಗಳನ್ನು ಶ್ಲಾಘನೆ ಮಾಡಬೇಕಾಗಿತ್ತು. ಅದರ ಬದಲು ಹಾಸ್ಟೆಲ್ನಿಂ್ದ ಹೊರಹಾಕಲು ಆದೇಶ ಮಾಡಿದ್ದಾರೆ ಎಂಬುದು ಅತ್ಯಂತ ಅಮಾನವೀಯವಾದ ಸಂಗತಿಯಾಗಿದೆ. ಈ ಡಿಸಿಯೇನು ತನ್ನನ್ನು ತಾನು ಮಹಾರಾಜರ ಕಾಲದವರು ಅಂದುಕೊಂಡಿದ್ದಾರಾ? ಅಥವಾ ಈ ಜಿಲ್ಲಾಧಿಕಾರಿ, ಸರ್ಕಾರ ತನ್ನ 24 ಗಂಟೆಗಳ ಸೇವೆಗಾಗಿ ಸಂಬಳ ಕೊಡುತ್ತಿದೆ ಎಂದು ಭಾವಿಸದೆ 8 ಗಂಟೆ ಅವಧಿಗೆ ಗುತ್ತಿಗೆ ಕೆಲಸ ಮಾಡುವ ಕೆಲಸಗಾರ ಅಂದುಕೊಂಡಿದ್ದಾರಾ? ಜಿಲ್ಲಾಧಿಕಾರಿಯ ಈ ಅಮಾನವೀಯ ವರ್ತನೆಗೆ ಸರ್ಕಾರ ಇಷ್ಟೊತ್ತಿಗೆ ಅವರನ್ನು ಅವರನ್ನು ಅಮಾನತು ಮಾಡಬೇಕಾಗಿತ್ತು.

5.ಜಿಲ್ಲಾಧಿಕಾರಿಯನ್ನು ಅಮಾನತು ಮಾಡಿ ಎಂದು ಮುಖ್ಯಮಂತ್ರಿಯನ್ನು ಒತ್ತಾಯಪಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವಿದ್ಯಾರ್ಥಿಗಳನ್ನೆ ಗದರಿಸಿ ಹೋಗಿ ಜಿಲ್ಲಾಧಿಕಾರಿಗಳ ಬಳಿ ಕ್ಷಮೆ ಕೇಳಲು ತಿಳಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ತನ್ನದೆ ಸಮುದಾಯದ ವಿದಾರ್ಥಿಗಳ ಮೂಲಭೂತವಾದ ಗುಣಮಟ್ಟದ ಆಹಾರದ ಹಕ್ಕಿನ ಮೇಲೆ ದಮನ ನಡೆಯುತ್ತಿದ್ದರೂ ಸಹ ಅದನ್ನು ಸರಿಪಡಿಸಲಾಗದ ಬಿ. ಶ್ರೀರಾಮುಲು ಜಿಲ್ಲೆಯ ಹಾಗೂ ರಾಜ್ಯದ ಬಡವರು ಮತ್ತು ದಮನಿತ ಜನರನ್ನು ಹೇಗೆ ರಕ್ಷಿಸಬಲ್ಲರು? ಈ ಘಟನೆಗಳು ಸರ್ಕಾರದ ಆಡಳಿತ ಹೇಗಿದೆ ಎಂಬುದಕ್ಕೆ ನಿದರ್ಶನಗಳು.
6.ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪರಿಶಿಷ್ಟ ಜಾತಿ- ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಹಾಯಧನ ಇತ್ಯಾದಿಗಳನ್ನು ಸಮರ್ಪಕವಾಗಿ ನೀಡಲು ಅನುದಾನದ ಕೊರತೆಯಾಗಿದೆ ಎಂದು ತಳಮಟ್ಟದ ಅಧಿಕಾರಿಗಳು ಪತ್ರಗಳನ್ನು ಬರೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹ ಸರ್ಕಾರ ಉದ್ದೇಶಪೂರ್ವಕ ಮೌನ ವಹಿಸಿದೆಯೆಂದರೆ ಅದರ ಅರ್ಥ ದಮನಿತ ಸಮುದಾಯಗಳನ್ನು ಶಿಕ್ಷಣದಿಂದ ತಪ್ಪಿಸಿ ಮನುವಾದ ಸ್ಥಾಪಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು ಪ್ರಯತ್ನಿಸುತ್ತಿರುವ ಹಿಡನ್ ಅಜೆಂಡಾ ಹೊಂದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಸರ್ಕಾರ ಈ ಕೂಡಲೆ ತಾನು ಸಂವಿಧಾನದ ಮಾರ್ಗಸೂಚನೆಯಂತೆ ಕೆಲಸ ಮಾಡುತ್ತಿದ್ದೇನೆ ಎಂಬುದು ಅರಿತುಕೊಳ್ಳಬೇಕು.
ಆದ್ದರಿಂದ,
1.ಅಲೆಮಾರಿ ಸಮುದಾಯಗಳಿಗೆ ಮನೆ ಇಲ್ಲದಂತೆ ಮಾಡಿರುವ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕು. ವಾಪಸ್ಸು ಪಡೆದಿರುವ ಅನುದಾನವನ್ನು ಕೂಡಲೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು. ಅನುದಾನವನ್ನು ಸಮರ್ಪಕವಾಗಿ ಬಳಸಲಾಗದ ಸಂಬಂಧಪಟ್ಟ ಸಚಿವರ ಅಸಮರ್ಥತೆಯ ಕಾರಣಕ್ಕೆ ರಾಜೀನಾಮೆ ಪಡೆಯಬೇಕು.
2.ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಿ ಪರಿಹಾರ ಕಂಡುಕೊಳ್ಳಬೇಕು.
3.ಬಳ್ಳಾರಿಯ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದೆ ವಿದ್ಯಾರ್ಥಿಗಳನ್ನೆ ಶಿಕ್ಷಿಸಿರುವ ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಸಂಬಂಧಿತ ಎಲ್ಲ ಅಧಿಕಾರಿಗಳನ್ನು ಈ ಕೂಡಲೆ ಅಮಾನತು ಮಾಡಿ ವಿಚಾರಣೆಗೆ ಆದೇಶಿಸಬೇಕು. ದಮನಿತ ಸಮುದಾಯಗಳ ವಿದ್ಯಾರ್ಥಿಗಳ ಹಿತ ರಕ್ಷಿಸಲು ಅಸಮರ್ಥರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ತಕ್ಷಣ ವಜಾಮಾಡಬೇಕು. ಆ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರವೆ ಕ್ಷಮೆ ಕೇಳಿ ಅವರಿಗೆ ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಒದಗಿಸಬೇಕಾದ ಸವಲತ್ತುಗಳನ್ನು ಒದಗಿಸಬೇಕು.

- Advertisement -

4.ಹಾಗೂ ರಾಜ್ಯದ ಎಲ್ಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಸಮಸ್ಯೆಯೂ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಬಳ್ಳಾರಿಯ ಹಾಸ್ಟೆಲ್ನಿಂಿದ ಹೊರದಬ್ಬಿರುವ ವಿದ್ಯಾರ್ಥಿಗಳನ್ನು ಈ ಕೂಡಲೆ ಮರಳಿ ಹಾಸ್ಟೆಲ್ಗೆಲ ಸೇರಿಸಬೇಕೆಂದು ಒತ್ತಾಯಿಸುತ್ತೇನೆ.



Join Whatsapp