ಗೋವುಗಳನ್ನು ಪೋಷಿಸಲು ಸರ್ಕಾರಿ ನೌಕರರ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ

Prasthutha|

ಬೆಂಗಳೂರು: ರಾಜ್ಯದಲ್ಲಿ ಗೋವುಗಳನ್ನು ಪೋಷಿಸುವ ಸಲುವಾಗಿ ʼಪುಣ್ಯಕೋಟಿ ದತ್ತು ಯೋಜನೆʼಯ ಜಾರಿಗೆ ರಾಜ್ಯ ಸರ್ಕರಿ ನೌಕರರ ವೇತನದಿಂದ ಒಂದು ದಿನದ ಸಂಬಳ ಕಡಿತ ಮಾಡಿ ನಿಗದಿತ ಯೋಜನೆಗೆ ಬಳಸುವ ಕುರಿತು ಸರ್ಕಾರ ಆದೇಶಿಸಿದೆ.

- Advertisement -

ಸರಕಾರದ ಈ ನಡೆಯ ವಿರುದ್ಧ ಸಚಿವಾಲಯದ ನೌಕರರಿಂದಲೇ ವಿರೋಧ ವ್ಯಕ್ತವಾಗಿದ್ದು, ತಮ್ಮ ವೇತನ ಕಡಿತ ಮಾಡದಂತೆ ಆಗ್ರಹಿಸಿದ್ದಾರೆ. 2022-23ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದರು. ಸದರಿ ಯೋಜನೆಯ ದ್ಯೇಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಸರ್ಕಾರಿ ನೌಕರರು ಸಹಕರಿಸುವಂತೆ ಶಿಕ್ಷಕರ ದಿನಾಚರಣೆ ವೇಳೆ ಮನವಿ ಮಾಡಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಪ್ರಸ್ತಾವಣೆ ಪರಿಗಣಿಸಿದ ಸರ್ಕಾರ, ʼಎʼ ವೃಂದ ನೌಕರರಿಂದ 11 ಸಾವಿರ ರೂ, ʼಬಿʼ ವೃಂದ ನೌಕರರಿಂದ 4 ಸಾವಿರ ರೂ, ʼಸಿʼ ವೃಂದ ನೌಕರರಿಂದ 400 ಕಡಿತಗೊಳಿಸಲು ಆದೇಶ ನೀಡಿ, ʼಡಿʼ ನೌಕರಿಗೆ ವಿನಾಯಿತಿ ಕಲ್ಪಿಸಿದೆ. ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ವೇತನದಲ್ಲಿ ನವೆಂಬರ್‌ ತಿಂಗಳಿನ ಒಂದು ದಿನದ ಸಂಬಳ ಕಡಿತಗೊಳಿಸಿ, ಆ ಮೊತ್ತವನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರ ಖಜಾನೆಗೆ ಸಂದಾಯ ಮಾಡಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.



Join Whatsapp