ಜಿಲ್ಲೆಯಲ್ಲಿ ಕೋಮು ಗಲಭೆಗೆ ಕಿಡಿಹಚ್ಚಿದ್ದೇ ರಾಜ್ಯದ ಮುಖ್ಯಮಂತ್ರಿ: ಯಾಕೂಬ್ ಸಅದಿ ಕಿಡಿ

Prasthutha|

ಫಾಝಿಲ್, ಮಸೂದ್ ಹತ್ಯೆ ಪ್ರಕರಣದಲ್ಲಿ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

- Advertisement -

ಮಂಗಳೂರು: ಎರಡು ಸಂಘಟನೆಗಳ ನಡುವೆ ನಡೆದ ಘರ್ಷಣೆ ಬಗ್ಗೆ ಮಂಗಳೂರಿನಲ್ಲಿ ಮುಖ್ಯಮಂತ್ರಿಯ ಬಳಿ ಪತ್ರಕರ್ತರು ಕೇಳಿದಾಗ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದು ಹೇಳಿದ್ದೇ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣ ಎಂದು ಎಸ್ಸೆಸ್ಸೆಫ್ ರಾಜ್ಯ ಮುಖಂಡ ಯಾಕೂಬ್ ಸಅದಿ ಆರೋಪಿಸಿದ್ದಾರೆ.

ಅವರು ನಗರದ ಕ್ಲಾಕ್ ಟವರ್ ಬಳಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ನಡೆದ ಸರಕಾರದ ತಾರತಮ್ಯ ನೀತಿಯ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಬೊಮ್ಮಾಯಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಗಲಭೆಗೆ ಕಿಡಿ ಹಚ್ಚಿದ್ದು ಅದು ಇಂದು ಕೊಲೆಗಳ ಮೂಲಕ ಉರಿಯುತ್ತಿದೆ ಎಂದು ಅವರು ಹೇಳಿದರು.

- Advertisement -

ಈ ಮೂರೂ ಕೊಲೆಯ ತನಿಖೆ, ಪರಿಹಾರ ನೀಡುವಿಕೆಯಲ್ಲಿ ಸರಕಾರ ಏಕೆ ತಾರತಮ್ಯ ಮಾಡುತ್ತಿದೆ. ಕೊಲೆಯಾದ ಒಂದು ಕುಟುಂಬಕ್ಕೆ ಲಕ್ಷಾಂತರ ರೂ. ಪರಿಹಾರ ನೀಡಿದ್ದು, ಉಳಿದ ಎರಡು ಕುಟುಂಬವನ್ನು ಯಾಕೆ ನಿರ್ಲಕ್ಷಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಅವರೇನು (ಮುಸ್ಲಿಮರು) ಇಲ್ಲಿ ಪುಕ್ಸಟ್ಟೆ ಬದುಕುತ್ತಿದ್ದಾರಾ? ಅವರೂ ತೆರಿಗೆ ಕಟ್ಟಿಯೇ ಬದುಕುತ್ತಿರುವುದು ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಸೂದ್, ಫಾಝಿಲ್ ಹತ್ಯೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಅನಿವಾರ್ಯವಾಗಿತ್ತು ಎಂದರು.

ಬೆಂಕಿ ಬಿದ್ದಾಗ ಚಳಿ ಕಾಯುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಹಿಜಾಬ್ ವಿಷಯದಲ್ಲೂ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ನ್ಯಾಯ ದೊರಕಿಸಿಕೊಡಬೇಕಾದ ಸರ್ಕಾರ ಧರ್ಮಾಧಾರಿತವಾಗಿ ಜನರನ್ನು ಒಡೆದು ಮುಂದಿನ ಚುನಾವಣೆಯಲ್ಲಿ ಲಾಭಗಳಿಸುವ ಪ್ರಯತ್ನದಲ್ಲಿದೆ. ಆದರೆ ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದು ಎಚ್ಚರಿಸಿದರು.

ಇಲ್ಲಿನ ಮುಸ್ಲಿಮರು ಪುಕ್ಕಟೆ ಜೀವನ ನಡೆಸುತ್ತಿಲ್ಲ. ಪ್ರಜೆಗಳಿಗೆ ವಿಧಿಸುತ್ತಿರುವ ಪ್ರತಿಯೊಂದು ತೆರಿಗೆಯನ್ನೂ ಅವರು ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಮೂವರು ಯುವಕರ ಕೊಲೆಯಾಗಿದೆ. ಕೊಲೆಯನ್ನು ಯಾರು ಕೂಡ ಸಮರ್ಥಿಸಲು ಸಾಧ್ಯವಿಲ್ಲ. ಸಿಎಂ ಬೊಮ್ಮಾಯಿ ಅವರು ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ್ದಾರೆ. ಆದರೆ ಅಲ್ಲೇ ಹತ್ತಿರದಲ್ಲಿ ಕೊಲೆಗೀಡಾಗಿದ್ದ ಮಸೂದ್ ಅವರ ಮನೆಗೆ ಭೇಟಿ ನೀಡದೆ ಹೊರಟುಹೋಗಿದ್ದಾರೆ. ಸಿಎಂ ಮಂಗಳೂರಿನಲ್ಲಿಯೇ ಇದ್ದಾಗ ಫಾಝಿಲ್ ಹತ್ಯೆಯಾಗಿದೆ. ಆದರೆ ಬೊಮ್ಮಾಯಿ ಕಂಡೂ ಕಾಣದಂತೆ ನಡೆದುಕೊಂಡಿದ್ದಾರೆ ಎಂದು ಸಅದಿ ಆರೋಪಿಸಿದರು.
ಸಿಎಂ ಬೊಮ್ಮಾಯಿ ಮತ್ತು ಸರ್ಕಾರ, ಧರ್ಮ – ಧರ್ಮಗಳ ನಡುವೆ ಭೇದ ಮಾಡಿದೆ. ಜಿಲ್ಲಾಧಿಕಾರಿಯವರು ಕೂಡ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಮಸೂದ್ ಮತ್ತು ಫಾಝಿಲ್ ಮನೆಗೆ ಇದುವರೆಗೆ ಭೇಟಿ ನೀಡಿಲ್ಲ ಎಂದು ಅವರು ಹೇಳಿದರು.

ಮಂಗಳೂರು ಎನ್ ಕೌಂಟರ್ ಪ್ರಕರಣದಲ್ಲೂ ಮುಸ್ಲಿಮರಿಗೆ ನ್ಯಾಯದೊರಕಿಲ್ಲ. ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಅಮಾಯಕ ಯುವಕರಿಗೆ ನ್ಯಾಯ ದೊರಕಿಲ್ಲ. ನ್ಯಾಯ ಸಿಗುವ ಭರವಸೆಯೂ ಇಲ್ಲ ಎಂದು ಹೇಳಿದ ಅವರು, ಫರೋವಾ, ಹಿಟ್ಲರ್, ನಮ್ರೂದ್, ಕಾರೂನ್ ಮುಂತಾದವರ ಚರಿತ್ರೆಯನ್ನು ನಾವು ಓದಿದ್ದೇವೆ. ಹೆಚ್ಚು ಕಾಲ ಈ ಅನ್ಯಾಯ ನಡೆಯುವುದಿಲ್ಲ, ಇಲ್ಲಿ ಯಾರು ಕೂಡ ಶಾಶ್ವತರಲ್ಲ ಎಂದು ಹೇಳಿದರು.

ರಾಜ್ಯದ ಮಾನ ಮರ್ಯಾದೆ, ಉಳಿಸಲು ಹಾಗೂ ರಾಜ್ಯದ ಗೌರವ ಕಾಪಾಡಲು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರಿಬ್ಬರೂ ಆ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್ ಎಂದು ಹೇಳಿದರು.

ಹಿರಿಯ ವಿದ್ವಾಂಸ ಎಸ್.ಬಿ.ದಾರಿಮಿ ಮಾತನಾಡಿ, ಅನ್ಯಾಯದ ವಿರುದ್ಧ ಮಾತನಾಡಬೇಕು ಎಂಬ ಉದ್ದೇಶದಿಂದ ಇಂದು 26 ಜಮಾಅತಿನ ಪದಾಧಿಕಾರಿಗಳು ಮತ್ತು ಸದಸ್ಯರು ಬೀದಿಗಿಳಿದಿದ್ದೇವೆ. ಸರ್ಕಾರ ಎಲ್ಲರ ತೆರಿಗೆಯಿಂದ ನಡೆಯುತ್ತಿದೆ. ಇಂತಹ ಸರ್ಕಾರ, ಪರಿಹಾರ ನೀಡುವಲ್ಲಿ ತಾರತಮ್ಯವೆಸಗಿದೆ. ಮನಸ್ಸಾಕ್ಷಿ ಇದ್ದರೆ ಸರ್ಕಾರದಲ್ಲಿರುವವರು ತಾವು ಮಾಡಿದ್ದು ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಅಧಿಕಾರ ನಡೆಸುವವರು ರಾಜಧರ್ಮ ಪಾಲಿಸಬೇಕು. ಅಧಿಕಾರ ಸ್ವೀಕರಿಸುವಾಗ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದಾಗಿ ಪ್ರತಿಜ್ಞೆ ಕೈಗೊಂಡವರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿರಬೇಕು ಎಂದು ದಾರಿಮಿ ಹೇಳಿದರು.

ಹಿಂದೂ ಧರ್ಮವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುವ ಇವರು, ಹಿಂದೂ ಧರ್ಮವನ್ನು ನಾಶಪಡಿಸುತ್ತಿದ್ದಾರೆ. ಹಿಂದೂ ಧರ್ಮದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡು ತಾವು ನಕಲಿ ಹಿಂದೂಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಿದರು.

ಮರ್ತೋರ್ವ ಮುಖಂಡ ಮುಹಮ್ಮದ್ ಕುಂಞಿ ಮಾತನಾಡಿ, ಅನ್ಯಾಯವನ್ನು ಪ್ರಶ್ನಿಸಬೇಕು ಎಂಬ ಆತ್ಮವಿಶ್ವಾಸದಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮನುಷ್ಯತ್ವ, ಮಾನವೀಯತೆ, ಧರ್ಮ ನಿಷ್ಠೆ ಇದ್ದ ಯಾರೇ ಆದರೂ ಕೊಲೆಗಳು ನಡೆದಾಗ ದುಃಖಿಗಳಾಗುತ್ತಾರೆ. ಪ್ರತಿಯೊಂದು ಕೊಲೆ ಕೂಡ ಇಂತಹವರಲ್ಲಿ ಆಘಾತವನ್ನು ಉಂಟು ಮಾಡುತ್ತದೆ. ಚುನಾವಣೆ ಹತ್ತಿರ ಬರುವಾಗ ಇಂತಹ ಕೊಲೆಗಳು ಸಂಭವಿಸುತ್ತಿವೆ ಎಂಬುದನ್ನು ಜಾಗೃತ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಆಡಳಿತಗಾರರು ಎಂಬ ಹೊಣೆಗಾರಿಕೆಯಿಂದ ಕೆಳಗೆ ಇಳಿದು ದಲ್ಲಾಳಿಗಳಾಗಿ ಬದಲಾದಾಗ ಖಂಡಿತವಾಗಿಯೂ ಸಮಾಜದಲ್ಲಿ ಇಂತಹ ಸಾವುಗಳು ಸಂಭವಿಸುತ್ತವೆ. ಆಡಳಿತದಲ್ಲಿರುವವರು ಸಮಾಜಕ್ಕೆ ಒಳಿತು ಮಾಡದಿದ್ದರೂ ಪರವಾಗಿಲ್ಲ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಮತ ಧ್ರುವೀಕರಣಗೊಳಿಸುವ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಗೆ ಗೌರವ, ಪಾವಿತ್ರ್ಯದೆ ಇದೆ. ಅದನ್ನು ಹಾಳು ಮಾಡುವ ಕೆಲಸವನ್ನು ಮಾಡಬೇಡಿ ಎಂದು ಮುಹಮ್ಮದ್ ಕುಂಞಿ ಹೇಳಿದರು.

ಪ್ರವೀಣ್ ಹೇಗೆ ಭಾರತೀಯ ಪ್ರಜೆಯೋ ಅದೇ ರೀತಿ ಮಸೂದ್ ಮತ್ತು ಫಾಝಿಲ್ ಕೂಡ ಈ ದೇಶದ ಪ್ರಜೆಗಳು ಎಂಬ ವಾಸ್ತವಿಕತೆಯನ್ನು ಸರ್ಕಾರ ಒಪ್ಪಿಕೊಂಡು ನ್ಯಾಯ ಪಾಲನೆ ಮಾಡಬೇಕು ಎಂದು ಹೇಳಿದರು.

ಯುವ ಮುಖಂಡ ಅಶ್ರಫ್ ಎ.ಕೆ. ಜೋಕಟ್ಟೆ ಮಾತನಾಡಿ, ನ್ಯಾಯ ದೇಶದಲ್ಲಿ ಮರೀಚಿಕೆಯಾಗುತ್ತಿದೆ. ಕೊಲೆಗಳ ಮೂಲಕ ಬೆದರಿಸುವ ಪ್ರಯತ್ನ ನಡೆಯುತ್ತಿದೆ. ತಾರತಮ್ಯವೆಸಗುವ ಮೂಲಕ ಒಂದು ಸಮುದಾಯವನ್ನು ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕಠಿಣ ಕಾನೂನಿನ ಮೂಲಕ ಹೆದರಿಸಿ ಮಂಡಿಯೂರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದರಿಂದ ಮುಸ್ಲಿಮರನ್ನು ದಮನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರೈತರು ತಮ್ಮ ಹಕ್ಕುಗಳಿಗಾಗಿ ವರ್ಷಗಟ್ಟಲೆ ಬೀದಿಯಲ್ಲಿ ನಿಲ್ಲಬೇಕಾಯಿತು. ಎನ್ ಆರ್ ಸಿ ಸಂದರ್ಭದಲ್ಲಿ ದೇಶಾದ್ಯಂತ ಮುಸ್ಲಿಮರು ಬೀದಿಗಳಿದ ಪರಿಣಾಮ ಕಾನೂನು ಜಾರಿಯಾಗದಂತೆ ತಡೆಯಲು ಸಾಧ್ಯವಾಯಿತು. ಆದ್ದರಿಂದ ಹೋರಾಟ ನಿರಂತರವಾಗಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಹೋರಾಟದ ಕಿಚ್ಚು ಆರಂಭಗೊಳ್ಳಬೇಕು ಎಂದು ಹೇಳಿದರು.

ಬೊಮ್ಮಾಯಿಯವರ ಪಿತ್ರಾರ್ಜಿತ ಸ್ವತ್ತನ್ನು ನಾವು ಕೇಳುತ್ತಿಲ್ಲ. ಬಸವರಾಜ ಬೊಮ್ಮಾಯಿಯಾಗಿ ಅವರು ಒಂದು ಮನೆಗೆ ಹೋಗಿದ್ದರೆ ನಾವು ಅದನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಸಂತ್ರಸ್ತ ಕುಟುಂಬವನ್ನು ಸಮಾನ ರೀತಿಯಲ್ಲಿ ಕಾಣಬೇಕಾಗಿತ್ತು. ಆದರೆ ಅವರು ಸಾಂತ್ವನ ಹೇಳುವುದರಲ್ಲೂ, ಪರಿಹಾರ ನೀಡುವುದರಲ್ಲೂ ತಾರತಮ್ಯವೆಸಗಿ ಮುಖ್ಯಮಂತ್ರಿ ಹುದ್ದೆಗೆ ದ್ರೋಹ ಬಗೆದರು ಎಂದು ಅಶ್ರಫ್ ಕಿಡಿಕಾರಿದರು.

ಪ್ರಭುತ್ವದಿಂದ ಯುಎಪಿಎ ಕಾನೂನು ನಿರಂತರವಾಗಿ ದುರ್ಬಳಕೆಯಾಗುತ್ತಿದೆ. ಸ್ಥಳೀಯವಾಗಿ ನಡೆಯುವ ಹಲ್ಲೆ, ಕೊಲೆ, ಚೂರಿ ಇರಿತ ಪ್ರಕರಣಗಳಿಗೂ ಯುಎಪಿಎ ಕೇಸು ಹಾಕುವ ಮೂಲಕ ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸರ್ಕಾರವೇ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ನೀತಿಯನ್ನು ಅನುಸರಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

2016- 2020ರವರೆಗಿನ ನಾಲ್ಕು ವರ್ಷಗಳಲ್ಲಿ 5027 ಯುಎಪಿಎ ಪ್ರಕರಣ ದಾಖಲಿಸಲಾಗಿದ್ದು, 24,000 ಜನರನ್ನು ಜೈಲಿಗೆ ತಳ್ಳಲಾಗಿದೆ. ಇದುವರೆಗೆ ಕೇವಲ 386 ಜನರನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, 212 ಮಂದಿಗೆ ಶಿಕ್ಷೆಯಾಗಿದೆ. ಆದರೆ 23,500ಕ್ಕೂ ಹೆಚ್ಚು ಜನರು ಈಗಲೂ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ ಎಂದು ಅಶ್ರಫ್ ಅಂಕಿ ಅಂಶ ಸಹಿತ ವಿವರಿಸಿದರು.

ದೇಶದ ಸಂವಿಧಾನ ನಾಶಪಡಿಸುವ ಫ್ಯಾಶಿಸ್ಟರ ಕನಸು ಯಾವುದೇ ಕಾರಣಕ್ಕೂ ನನಸಾಗದು. ಅದಕ್ಕೆ ಈ ದೇಶದ ಸಂವಿಧಾನಪ್ರಿಯರು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂಘಪರಿವಾರದಿಂದ ಹತ್ಯೆಗೀಡಾದ ಫಾಝಿಲ್ ಅವರ ತಂದೆ ಉಮ್ಮರ್ ಫಾರೂಕ್ ಮಾತನಾಡಿ, ಯಾರ ಮಕ್ಕಳು ಕೂಡ ಸಾಯಬಾರದು. ಸರ್ಕಾರದಿಂದಲೇ ತಾರತಮ್ಯ ಉಂಟಾಗಿರುವುದು ಬೇಸರ ತಂದಿದೆ ಎಂದು ಹೇಳಿ ಬಾವುಕರಾದರು.

ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ, ಫಾಝಿಲ್, ಮಸೂದ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಮುಸ್ಲಿಮ್ ಒಕ್ಕೂಟದಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಮುಖಂಡರಾದ ಹೈದರಾಲಿ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

Join Whatsapp