ಸಮಾಜ ಕಲ್ಯಾಣ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಯವರ ಸ್ವಯಂ ಕಲ್ಯಾಣ ಇಲಾಖೆಯಾಗಿದೆ: ಪ್ರಿಯಾಂಕ್ ಖರ್ಗೆ

Prasthutha|

►ಇಲಾಖೆಯ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ ಕಾಂಗ್ರೆಸ್ ಶಾಸಕ

- Advertisement -

ಬೆಂಗಳೂರು: ಗಂಗಾಕಲ್ಯಾಣ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್ ನವರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ ಕೇವಲ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ನಾವು ಹಿಟ್ ಅಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡಿದಾಗ ಆರೋಪಪಟ್ಟಿ ಸಲ್ಲಿಸುತ್ತಾರೆ. ಪಿಎಸ್ ಐ ಅಕ್ರಮದ ಬಗ್ಗೆ ಹೇಳಿದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತೀರಿ. ನಂತರ ನೀವೇ ತನಿಖಾ ತಂಡ ರಚನೆ ಮಾಡಿದ್ದೀರಿ. ಸುಮಾರು 50ಕ್ಕೂ ಹೆಚ್ಚು ಜನ ಅಧಿಕಾರಿಗಳು ಸೇರಿದಂತೆ ಬಂಧನವಾಗಿದ್ದಾರೆ. ಇದೆಲ್ಲವೂ ಹಿಟ್ ಅಂಡ್ ರನ್ ಹೇಗೆ ಆಗುತ್ತೆ? ಎಂದು ಪ್ರಶ್ನಿಸಿದರು.
ಈ 431 ಕೋಟಿಯ ಗಂಗಾ ಕಲ್ಯಾಣ ಯೋಜನೆ ರಾಜ್ಯದ ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾಡಲಾಗಿದ್ದು, ಈ 40 ಪರ್ಸೆಂಟ್ ಸರ್ಕಾರ ಇದರಲ್ಲೂ ಹಣ ದೋಚುತ್ತಿದೆ. ಈ ಬಗ್ಗೆ ಆರೋಪ ಮಾಡಿದಗ ಇದು ಹಸಿ ಸುಳ್ಳು ಎಂದರು. ಜತೆಗೆ ತನಿಖಾ ಸಮಿತಿ ರಚಿಸಿದರು. ಸಮಾಜದ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನು ನುಂಗುತ್ತಿದ್ದಾರ. ಇವರು ಹಿಂದುಳಿದವರು, ಪರಿಶಿಷ್ಟರ ಹಣ ತಿನ್ನುವ ಮಟ್ಟಕ್ಕೆ ಬಂದಿದ್ದಾರೆ ಎಂದು ಭಾವಿಸುತ್ತಿದ್ದೆ. ನನ್ನ ಅನುಮಾನಕ್ಕೆ ಮುಖ್ಯಮಂತ್ರಿಗಳು ದಾವೋಸ್ ನಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಅಲ್ಲಿ ಲಕ್ಷ್ಮಿ ಮಿತ್ತಲ್ ಅವರು ನಿಮ್ಮ ಸರ್ಕಾರಕ್ಕೆ ಬಹುಮತ ಇದೆಯೇ ಎಂದು ಕೇಳಿದಾಗ ಸರಳ ಬಹುಮತ ಇದೆ ಎಂದಿದ್ದಾರೆ. ಅದು ನಿಮಗೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದಾಗ, ಇಲ್ಲ ವಿರೋಧ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದಾರೆ ಎಂದು ಹೇಳುತ್ತಾರೆ. ಆಗ ನನಗೆ ಗೊತ್ತಾಯಿತು. ಬಿಜೆಪಿಯ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಭ್ರಷ್ಟಾಚಾರ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರ ನಿರಂತರವಾಗಿ ಹಗರಣ ನಡೆದಿಲ್ಲ ಎಂದು ಹೇಳುತ್ತಿದೆ. ಮೇ 20ರಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ, ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೇ 11ರಂದು ಈ ಪ್ರಕರಣದಲ್ಲಿನ ತನಿಖಾಧಿಕಾರಿಗಳು ಮುಖ್ಯ ಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಾಥಮಿಕ ವರದಿ ಸಲ್ಲಿಸಿದ್ದು, ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾದರೆ ಮಂತ್ರಿಗಳಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲವೇ? ಅಥವಾ ಅರಿವಿದ್ದರೂ ಬೇಕಂತಲೇ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರಾ? ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದರು.
ನಿಗಮಗಳು ಎಲ್ಲ ದಾಖಲೆ ನೀಡಿಲ್ಲ. ಕೊಟ್ಟಿರುವ ಕೆಲವು ದಾಖಲೆಗಳನ್ನೇ ಆಧರಿಸಿ ಈ ತನಿಖೆ ಮಾಡಿದ್ದು, ತನಿಖಾಧಿಕಾರಿಗಳು ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸುತ್ತಾರೆ. ಈ ವರದಿ ನೀಡಿರುವುದು ಸರ್ಕಾರ ನೇಮಿಸಿರುವ ಅಧಿಕಾರಿಗಳೇ ನೀಡಿದ್ದಾರೆ. ನಿಮ್ಮ ಬಳಿ ದಾಖಲೆ ಇಲ್ಲ ಎಂದರೆ ನಿಮ್ಮ ಅಧಿಕಾರಿಗಳಇಂದ ನೋಟೀಸ್ ಕೊಡಿಸಿ, ನಾನೇ ನಿಮಗೆ ಈ ದಾಖಲೆಗಳನ್ನು ನೀಡುತ್ತೇನೆ.

ಈ ತನಿಖಾ ವರದಿಯಲ್ಲಿ ಗುತ್ತಿಗೆದಾರರ ವಾರ್ಷಿಕ ವಹಿವಾಟಿನ ಕುರಿತು ಪರಿಶೀಲನೆ ನಡೆಸಬೇಕು. ಕೆಲಸ ಮಾಡಿರುವ ಪ್ರಮಾಣ ಪತ್ರ ಪರಿಶೀಲಿಸಬೇಕು. ಇನ್ನು ಕೊಳವೆ ಬಾವಿ ಯಂತ್ರಗಳು 5 ಸ್ಟಾರ್ ಅಥವಾ 4 ಸ್ಟಾರ್ ಇರಬೇಕು. ಅದು ಕೂಡ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲವೇ? ಇವರು ರಚಿಸಿದ ತನಿಖಾ ತಂಡಗಳಿಗೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಯಾಕೆ? ತನಿಖಾ ವರದಿಯಲ್ಲಿ ಯಾವ ನಿಗಮ ಎಷ್ಟು ದಾಖಲೆ ನೀಡಿದ್ದಾರೆ ಎಂದು ಉಲ್ಲಂಘಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದವರು 30 ಪ್ಯಾಕೇಜ್ ನಲ್ಲಿ 8 ಪ್ಯಾಕೇಜ್ ಮಾಹಿತಿ ನೀಡಿದ್ದಾರೆ. ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದವರು, 27 ಪ್ಯಾಕೇಜ್ ನಲ್ಲಿ 18 ಪ್ಯಾಕೇಜ್ ಮಾಹಿತಿ ಮಾತ್ರ ನೀಡಿದ್ದಾರೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ 7 ಪ್ಯಾಕೇಜ್ ಪೈಕಿ 2ರಲ್ಲಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದವರು 14 ಪ್ಯಾಕೇಜ್ ಪೈಕಿ 0 ಪ್ಯಾಕೇಜ್ ಮಾಹಿತಿ ನೀಡಿದ್ದಾರೆ. ಈ ವರದಿ ಸಂಕ್ಷಿಪ್ತ ಸಾರಾಂಶ ಏನೆಂದರೆ, 3 ಕಡೆಗಳಲ್ಲಿ ಲೋಪವಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರ Random Sampling ಮಾಡುತ್ತಿದ್ದು, ಇದರಲ್ಲಿ ಇಷ್ಟು ಭ್ರಷ್ಟಾಚಾರ ಆಗುತ್ತಿದ್ದರೆ, ಪ್ರತಿ ಪ್ಯಾಕೇಜ್ ಅನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಇದು ಒಂದಲ್ಲ ಎರಡಲ್ಲ, 431 ಕೋಟಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸೇರಿದ ಹಣ. ಅವರು ಸಮಾಜದ ಮುಖ್ಯವಾಹಿನಿಗೆ ಬರುವ ಹಣ.
ಮೇ 16ರಂದು ತನಿಖಾಧಿಕಾರಿಗಳು ನಿಗಮದ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೂ ಇನ್ನು ಅವರನ್ನು ಅಧೇ ಹುದ್ದೆಯಲ್ಲಿ ಯಾಕೆ ಇಟ್ಟುಕೊಂಡಿದ್ದೀರಾ? ಯಾಕೆ ಅಮಾನತು ಮಾಡಿಲ್ಲ? ಸಾಕ್ಷಿ ನಾಶ ಮಾಡಲು ಇಟ್ಟುಕೊಂಡಿದ್ದೀರಾ? ನಿಮಗೂ ಈ ಅಕ್ರಮದಲ್ಲಿ ಪಾಲು ಬರುತ್ತಿದೆಯೇ? ಅವರನ್ನು ಅಮಾನತು ಮಾಡಿ, ತನಿಖೆಗೆ ಎಲ್ಲ ಅಗತ್ಯ ದಾಖಲೆ ನೀಡಬೇಕು ಎಂದು ಪ್ರಿಯಾಂಕಾ ಖರ್ಗೆ ಆಗ್ರಹಿಸಿದರು.
ಇಲಾಖೆಯ ಆಂತರಿಕ ತನಿಖೆಯಲ್ಲೇ ಭ್ರಷ್ಟಾಚಾರ ನಡೆದಿರುವ ಮಾಹಿತಿ ಬಂದಿದೆ ಎಂದರೆ, ನ್ಯಾಯಾಂಗ ತನಿಖೆಗೆ ಕೊಟ್ಟರೆ ಎಲ್ಲರ ಹೆಸರೂ ಬರುತ್ತದೆ. ಈ ತನಿಖೆ ಕೇವಲ ಯುಐಡಿಎ ಸಂಖ್ಯೆ ಮೇಲೆ ನಡೆದಿದ್ದು, ಆದಾಯ ತೆರಿಗೆ ದಾಖಲೆ ಪಡೆದು ಪರಿಶೀಲನೆ ಮಾಡಬೇಕು. ಈ ಹಗರಣ ಆಗಲು ಸರ್ಕಾರ ಅಧೀನ ಕಾರ್ಯದರ್ಶಿ ಜ.2, 2021ರಂದು ಬರೆದ ಪತ್ರ. ಇದರಲ್ಲಿ ಈ ಟೆಂಡರ್ ನಿಯಮಾವಳಿ ಬದಲಿಸಲು ವ್ಯವಸ್ಥಾಪಕ ನಿರ್ದೇಶಕರು ಅಂಬೇಡ್ಕರ್ ಅಭಿವೃದ್ಧಿ ನಿಗಮದವರಿಗೆ ಪತ್ರ ಬರೆಯುತ್ತಾರೆ. ಇದೆಲ್ಲವನ್ನು ಸಮಾಜ ಕಲ್ಯಾಣ ಸಚಿವರ ಅನೋಮೋದಿತದ ಆಧಾರದ ಮೇಲೆ ಪತ್ರ ಬರೆಯಲಾಗಿದೆ ಎಂದು ತಿಳಿಸಲಾಗಿದೆ. ಅಂದಿನ ಸಮಾಜ ಕಲ್ಯಾಣ ಸಚಿವರು ಇದನ್ನು ಒಪ್ಪಿ ಬರೆಯುತ್ತಿದ್ದಾರೆ. ಆಗ ಶ್ರೀರಾಮುಲು ಅವರು ಸಚಿವರಾಗಿದ್ದರು. ಅವರಿಗೂ ಮುನ್ನ ಗೋವಿಂದ ಕಾರಜೋಳ ಅವರು ಇದ್ದರು. ಈಗ ಕೋಟಾ ಶ್ರೀನಿವಾಸ ಪೂಜಾರಿ ಅವರು ನಾನು ಪ್ರಾಮಾಣಿಕ ಎಂದು ಹೇಳುತ್ತಿದ್ದಾರೆ. ನೀವು ಪ್ರಾಮಾಣಿಕರೇ ಇರಬಹುದು. ಆದರೆ ಬೇರೆಯವರ ಅಕ್ರಮಕ್ಕೆ ನೀವ್ಯಾಕೆ ಬಲಿಪಶುವಾಗುತ್ತಿದ್ದೀರಿ? ಈ ಮೂವರೂ ಇದರಲ್ಲಿ ಭಾಗಿಯಾಗಿದ್ದು, ಈ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರು ಸದನದಲ್ಲೂ ಸುಳ್ಳು ಹೇಳಿದ್ದಾರೆ.

- Advertisement -

ಕಟೀಲ್ ಅವರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಬಿಟ್ ಕಾಯಿನ್, ಪಿಎಸ್ ಐ ಹಗರಣ, ಗಂಗಾ ಕಲ್ಯಾಣ ಹಗರಣದ ಬಗ್ಗೆ ಮಾತನಾಡಿದರೆ ಮೌನವಾಗುತ್ತಾರೆ. ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಮೋದಿ ಅವರು ಹೇಳಿದ್ದಾರೆ ಎಂದು ಹೊಗಳುತ್ತಾರೆ. ಆದರೆ ಇಲ್ಲಿ ನಾನು ತಿಂದು ನಿಮಗೂ ತಿನ್ನಲು ಬಿಡುತ್ತೇನೆ ಎಂಬಂತೆ ನಡೆಯುತ್ತಿದೆ. ಇದಕ್ಕೆ ನಿಮ್ಮ ಸ್ಪಷ್ಟನೆ ಏನು? ಎಂದು ಖರ್ಗೆ ಪ್ರಶ್ನಿಸಿದರು.
ಮಾನ್ಯ ಸಮಾಜ ಕಲ್ಯಾಣ ಸಚಿವರೇ ನಿಮಗೆ ಗೌರವ ಇದ್ದರೆ ನೀವೇ ಸ್ಥಾನ ತ್ಯಾಗ ಮಾಡಬೇಕು. ಪರಿಶಿಷ್ಟರ ಹಣ ಲೂಟಿ ಮಾಡಿ ಏನು ಆಗಿಲ್ಲ ಎಂದು ಕಣ್ಣು ಮುಚ್ಚಿಕೊಂಡಿದ್ದೀರಿ. ನೀವು ಸ್ವಾಭಿಮಾನಿಗಳಿದ್ದರೆ, ನೀವೇ ರಾಜೀನಾಮೆ ನೀಡಿ, ಅವರಿಗೂ ರಾಜೀನಾಮೆ ಕೊಡಿಸಿ. ಇದು ಸಾಮಾಜ ಕಲ್ಯಾಣ ಇಲಾಖೆಯಲ್ಲ, ಸ್ವಯಂ ಕಲ್ಯಾಣ ಇಲಾಖೆಯಾಗಿದೆ. ಈ ಯೋಜನೆಯನ್ನು ಮತ್ತೆ ಆರಂಭ ಮಾಡಬೇಕು. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತೇನೆ ಎಂದು ಖರ್ಗೆ ಹೇಳಿದರು.

Join Whatsapp