ರೈತರ ಹೋರಾಟಕ್ಕೆ ಆರು ತಿಂಗಳು : ಬೇಡಿಕೆಗಳನ್ನು ಈಡೇರಿಸಿ ಕಾಯಿದೆಗಳನ್ನು ವಾಪಸ್ ಪಡೆಯಲು ಸಿದ್ದರಾಮಯ್ಯ ಆಗ್ರಹ

Prasthutha|

ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಆರು ತಿಂಗಳಾಗಿದ್ದು ಬೇಡಿಕೆಗಳನ್ನು ಪ್ರಜಾತಾಂತ್ರಿವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಿರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರ, ಕಾರ್ಮಿಕರ ಪಾಲಿಗೆ ಮಾರಣಾಂತಿಕವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ  ಮೋದಿಯವರ ಸರ್ಕಾರ ಜಾರಿಗೆ ತಂದು ಒಂದು ವರ್ಷವಾಗುತ್ತಿದೆ.

- Advertisement -

ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಇವರನ್ನು ಮೋದಿಯವರ ಸರ್ಕಾರವೇ ಕೊಂದಿದೆÉ ಎಂದು ಜನರು ಭಾವಿಸುತ್ತಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳುವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ. ಆದರೆ ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವ  ಮೋದಿಯವರ ಸರ್ಕಾರ  ಜನರ/ ರೈತರ ಹೋರಾಟವನ್ನು ತೀವ್ರವಾಗಿ ನಿರ್ಲಕ್ಷಿಸಿತು.ದಮನಿಸಲು ಪ್ರಯತ್ನಿಸಿತು. ಅತ್ಯಂತ ಅಮಾನುಷವಾಗಿ ವರ್ತಿಸಿತು. ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ನೇರವಾಗಿ ಸಂಬಂಧವಿರುವವರು. ಅಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಮೋದಿಯವರ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿದೆ.

ಕಳೆದ ವರ್ಷ ಬೇಳೆ ಕಾಳುಗಳು, ಎಣ್ಣೆ ಬೀಜಗಳ ಉತ್ಪಾದನೆ ಶೇ. 16 ರಷ್ಟು ಹೆಚ್ಚಾಗಿತ್ತು. ದೇಶದ ಎಲ್ಲ ರಂಗಗಳು ವಿಫಲವಾಗಿದ್ದಾಗ ಕೃಷಿಯು ರಾಜ್ಯದಲ್ಲಿ ಶೇ 6.4 ರಷ್ಟು, ದೇಶದಲ್ಲಿ 3.5 ರಷ್ಟು ಪ್ರಗತಿಯಾಗಿದೆಯೆಂದು ಸರ್ಕಾರಗಳೇ ತಮ್ಮ ವರದಿಗಳಲ್ಲಿ ಹೇಳಿಕೊಂಡಿವೆ. ಹಾಗಿದ್ದರೆ ತೊಗರಿ, ಹೆಸರು, ಅವರೆ, ಉದ್ದು, ಅಲಸಂದೆ, ಸೋಯಾ, ಕಡಲೆ ಮುಂತಾದ ಕಾಳುಗಳನ್ನು  ಹಾಗೂ ಸೂರ್ಯಕಾಂತಿ, ಕಡಲೆ ಕಾಯಿ ಮುಂತಾದ ಎಣ್ಣೆ ಬೀಜಗಳನ್ನು ಉತ್ಪಾದನೆ ಮಾಡುತ್ತಿರುವ ರೈತರಿಗೆ ಒಳ್ಳೆ ಬೆಲೆ ಸಿಗಲಿಲ್ಲ. ಆದರೆ ಮಾರುಕಟ್ಟೆಯಲ್ಲಿ  ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ. 120 ಪಟ್ಟು ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ. 16 ಕ್ಕೂ ಹೆಚ್ಚಾಗಿದೆ. ಕೊರೋನ ಕಾರಣದಿಂದ ಜನರ ಕೈಯಲ್ಲಿ ಹಣವಿಲ್ಲದೆ  ಅವರ ಕೊಂಡುಕೊಳ್ಳುವ ಶಕ್ತಿಯೂ ಕಡಿಮೆಯಾಗಿದೆ. ಆದರೆ ಬೆಲೆಗಳು ಮಾತ್ರ ತೀವ್ರವಾಗಿ ಏರಿಕೆಯಗುತ್ತಿವೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು?

- Advertisement -

ಬೇಳೆ ಕಾಳುಗಳು ಮತ್ತು ಎಣ್ಣೆ ಕಾಳುಗಳ ಪ್ರಮುಖ ವ್ಯಾಪಾರಿ ಅದಾನಿ ಮತ್ತು ಅದಾನಿ ವಿಲ್ಮಾರ್ ಕಂಪೆನಿ.  ರಫ್ತು ಮತ್ತು ಆಮದನ್ನು ನಿಯಂತ್ರಿಸುತ್ತಿರುವುದು ಇದೇ ಕಂಪೆನಿ.  ಕೇಂದ್ರ ಸರ್ಕಾರ ಬಂದರುಗಳನ್ನು ವಿಮಾಣ ನಿಲ್ದಾಣಗಳನ್ನು ಅದಾನಿಗೆ ಬಿಟ್ಟುಕೊಟ್ಟಿದೆ.  ದೇಶದಲ್ಲಿ ಸುಮಾರು 5 ಮಿಲಿಯನ್ ಟನ್ ತೊಗರಿ ಬೇಳೆ ಬಳಕೆ ಇದೆ.  ಒಂದು ಕೆ.ಜಿ. ತೊಗರಿ ಬೇಳೆಯ ಬೆಲೆ 30 ರೂಗಳಷ್ಟು ಹೆಚ್ಚಾದರೆ ಈ ಕಂಪೆನಿಗೆ ಒಂದು ವರ್ಷಕ್ಕೆ ಒಂದೂವರೆ ಲಕ್ಷ ಕೋಟಿ ಹಣ ಸಂಗ್ರಹವಾಗುತ್ತದೆ.

ಅಂಥದ್ದರಲ್ಲಿ ತೊಗರಿಬೇಳೆಯ ಬೆಲೆ ಕಳೆದ ಕೆಲವು ತಿಂಗಳಿಂದ ಈಚೆಗೆ ಸರಾಸರಿ 100 ರೂಪಾಯಿಗಳಷ್ಟು ಹೆಚ್ಚಾಗಿದೆ.  ಅನೇಕ ಕಡೆ ಕೆಜಿಗೆ 180 ರೂ.ವರೆಗೆ ಮಾರಾಟವಾಗುತ್ತಿದೆ.  ಕಳೆದ ವರ್ಷ ಇದು 80-90 ರೂ. ಮಾತ್ರ ಇತ್ತು.  ಪರಿಸ್ಥಿತಿ ಹೀಗೆ ಇದ್ದರೆ ದೇಶ ಹೇಗೆ ಉದ್ಧಾರವಾಗಲು ಸಾಧ್ಯ?  ಪರಿಸ್ಥಿತಿ ಹೀಗಾಗಿರುವುದರಿಂದಲೇ ಅಂಬಾನಿ ಮತ್ತು ಅದಾನಿಗಳ ಸಂಪತ್ತು ಹಿಮಾಲಯದಂತೆ ಬೆಳೆಯುತ್ತಿದೆ.  18 ವರ್ಷಗಳ ಹಿಂದೆ ಕೆಲವೇ ಕೋಟಿಗಳ ಆಸ್ತಿ ಇದ್ದ ಅದಾನಿ ಈಗ ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂತ. ಅಂಬಾನಿ ಮೊದಲನೇ ಶ್ರೀಮಂತ.  ಇವರ ಸಂಪತ್ತು ಒಂದೇ ಸಮನೆ ಬೆಳೆಯುತ್ತಿದೆ.

ಆದ್ದರಿಂದಲೇ ನಾನು ಈ ಹಿಂದೆ ಬರೆದ ಪತ್ರದಲ್ಲಿ “ ರೈತರು ನಡೆಸುತ್ತಿರುವ ಹೋರಾಟ ತಮಗಾಗಿ ಮಾತ್ರ ನಡೆಸುತ್ತಿರುವುದಲ್ಲ.  ರೈತರ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿರುವ ಗ್ರಾಹಕರ ಪರವಾಗಿಯೂ ನಡೆಸುತ್ತಿರುವ ಹೋರಾಟವು ಆಗಿದೆ”  ಎಂದು ಹೇಳಿದ್ದೆ.  ಇದು ದೇಶ ಉಳಿಸುವ ಹೋರಾಟವು ಆಗಿದೆ.  ಆದ್ದರಿಂದ

1. ಮೋದಿಯವರ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ತಾನು ಸರ್ವಾಧಿಕಾರಿಯಲ್ಲ ಎಂಬ ವಿವೇಕವಂತಿಕೆ ಇದ್ದರೆ ಕೂಡಲೇ ರೈತರೊಂದಿಗೆ ಶಾಂತಿಯುತವಾಗಿ ಚರ್ಚಿಸಿ ಹೋರಾಟವನ್ನು ಹಿಂಪಡೆಯುವಂತೆ ಮಾಡಬೇಕು.  ರೈತರ, ಕಾರ್ಮಿಕ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು.

2.  ಕೂಡಲೇ ಜನ ವಿರೋಧಿಯಾದ ಅದಾನಿ, ಅಂಬಾನಿ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ಹಿಂಪಡೆಯಬೇಕು.

3.  ಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು.

4. ರೈತರು ಬೆಳೆಯುವ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು ಮತ್ತು ಗ್ರಾಹಕರಿಗೂ ನ್ಯಾಯಯುತವಾದ ಬೆಲೆಗಳಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸಿಗುವಂತೆ ಮಾಡಬೇಕು.

5. ಅದಾನಿ ಮುಂತಾದವರು ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲ ಉತ್ಪನ್ನಗಳನ್ನು ವಶಪಡಿಸಿಕೊಂಡು ಮಾರುಕಟ್ಟೆಗೆ ತಂದು ಹಣದುಬ್ಬರವನ್ನು ನಿಯಂತ್ರಿಸಬೇಕು. ನ್ಯಾಯಯುತ ಬೆಲೆಗಳಿಗೆ ಮಾರುವಂತೆ ಮಾಡಬೇಕು.  ಕೂಡಲೇ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಬೇಕು.

6.  ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯಿದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯಿದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿಯನ್ನು ರಚಿಸಬೇಕು.

7.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಅವಧಿಯಲ್ಲಿ ಮತ್ತು ಆ ನಂತರ ಜಾರಿಗೆ ತಂದಿರುವ, ತಿದ್ದುಪಡಿ ಮಾಡಿರುವ ಎಲ್ಲ ಕಾಯ್ದೆಗಳನ್ನು ರದ್ದುಪಡಿಸಬೇಕು.

ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕರು

Join Whatsapp