ಬಿಜೆಪಿ ಸರ್ಕಾರವನ್ನು ಹೊಗಳುವ ಭರದಲ್ಲಿ ಪ್ರಧಾನಿ ಮೋದಿ ನಾಚಿಕೆಯಿಲ್ಲದೆ ಸುಳ್ಳು ಹೇಳುತ್ತಿದ್ದಾರೆ: ಸೀತಾರಾಂ ಯೆಚೂರಿ

Prasthutha|

►ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆ ನಿರ್ಮಾಣ 2004ರಲ್ಲಿ ಯುಪಿಎ ಸರ್ಕಾರದ ತೀರ್ಮಾನ

- Advertisement -

ನವದೆಹಲಿ: ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರ್ಕಾರವನ್ನು ಹೊಗಳುವ ಭರದಲ್ಲಿ ನಾಚಿಕೆಯಿಲ್ಲದೆ ಸುಳ್ಳುಗಳನ್ನು ಪ್ರಧಾನಿ ನರೇಂದ್ರ ದಾಮೋದರ ಮೋದಿ ಹೇಳುತ್ತಿದ್ದಾರೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕಿಡಿಕಾರಿದ್ದಾರೆ.


ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆ ಲೋಕಾರ್ಪಣೆಯಾಗುತ್ತಿರುವ ಸಂಗತಿ ಎಲ್ಲಾ ಭಾರತೀಯರೂ ಹೆಮ್ಮೆಪಡುವಂತಹದ್ದಾಗಿದೆ. ಇಡೀ ಭಾರತ ಎದ್ದು ನಿಂತು ಭಾರತೀಯ ನೌಕಾದಳವನ್ನು ಅಭಿನಂದಿಸುತ್ತದೆ. ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಈ ದೇಶೀಯ ಯುದ್ಧ ನೌಕೆಯನ್ನು ಭಾರತದಲ್ಲೇ ನಿರ್ಮಿಸಬೇಕೆಂದು 2004ರಲ್ಲಿ ಎಡ ಪಕ್ಷಗಳ ಬೆಂಬಲ ಪಡೆದ ಯುಪಿಎ ಸರ್ಕಾರ ತೀರ್ಮಾನ ಮಾಡಿತು. ಆಗ ಸಂಚಾರ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷನಾಗಿ ನಾನು ನೌಕೆ ನಿರ್ಮಾಣ ಮಾಡುವ ಕೊಚಿನ್ ಹಡಗುಕಟ್ಟೆಗೆ ಹೋಗಿ ಸಮೀಕ್ಷೆ ಮಾಡಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಆ ಸಮಿತಿಯ ಶಿಫಾರಸನ್ನು ಅಂಗೀಕರಿಸಿದ ಕೇಂದ್ರ ಸರ್ಕಾರವು ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯ ನಿರ್ಮಾಣಕ್ಕೆ ತೀರ್ಮಾನಿಸಿತು. 2014ರ ಚುನಾವಣೆಗೆ ಮುಂಚೆಯೇ ಯುದ್ಧ ನೌಕೆ ಸಿದ್ಧವಾಗಿ ಲೋಕಾರ್ಪಣೆಯಾಯಿತು. ಬಳಕೆಗೆ ಮುಂಚೆ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ಈಗ ಅದು ಪೂರ್ಣ ಬಳಕೆಗೆ ಸಿದ್ಧವಾಗಿದೆ ಎಂದು ಯೆಚೂರಿ ತಿಳಿಸಿದ್ದಾರೆ.

- Advertisement -


ನಿಜಸ್ಥಿತಿ ಹೀಗಿರುವಾಗ, ಈ ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯು ತನ್ನ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿಕೊಳ್ಳುವುದು ಪ್ರಧಾನಿ ಪಟ್ಟಕ್ಕೆ ಶೋಭೆ ತರುವ ಮಾತಲ್ಲ. ಆದ್ದರಿಂದ ಇಂತಹ ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸೀತಾರಾಮ್ ಯೆಚೂರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.




Join Whatsapp