ಬೆಂಗ್ರೆಯ ಸರ್ಕಾರಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಎಸ್.ಐ.ಓ ಪ್ರತಿಭಟನೆ

Prasthutha|

ಬೆಂಗ್ರೆ: ಬೇಂಗ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಶುಕ್ರವಾರ ಬೆಂಗ್ರೆಯ ಶಾಲೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -

ಪ್ರತಿಭಟನೆಯಲ್ಲಿ ಶಾಲೆಯ ಸುತ್ತಮುತ್ತಲಿನ ಜನರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಭಾಗವಹಿ‌ಸಿ ತಮ್ಮ ಮಕ್ಕಳ ಶೈಕ್ಷಣಿಕ ಹಕ್ಕಿನ ಲಭಿಸುವಿಕೆಗೆ ಎಸ್.ಐ.ಓ ಸಂಘಟನೆಯೊಂದಿಗೆ ಜೊತೆಗೂಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಆಸಿಫ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಅನೇಕ ಬಾರಿ ಇಲ್ಲಿನ ಸಮಸ್ಯೆಗಳ ಕುರಿತು ಶಿಕ್ಷಣ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಮನವಿ ಪತ್ರವನ್ನು ಸಲ್ಲಿಸಿದರೂ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು, ಸರ್ಕಾರವು ನೀಡುವ ಸವಲತ್ತು ಅದು ಔದಾರ್ಯವಲ್ಲ ಬದಲಾಗಿ ಮಕ್ಕಳ ಹಕ್ಕು ಮತ್ತು ಅದನ್ನು ಖಾತರಿಪಡಿಸುವುದು ಸರ್ಕಾರದ ಹೊಣೆಗಾರಿಕೆ ಎಂದರು. ಈ ಶಾಲೆಯಲ್ಲಿ ಮಧ್ಯಮ ವರ್ಗದ ಬಡ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳು ಅಭ್ಯಸುತ್ತಿತ್ತು. ಅವರಿಗೂ ಸಹ ಶಿಕ್ಷಣ ಹಕ್ಕು ಕಾಯ್ದೆ ಒದಗಿಸುವ ಗುಣಮಟ್ಟ ಶಿಕ್ಷಣ ದೊರಕಿಸಬೇಕು ಎಂದು ಆಗ್ರಹಿಸಿದರು.

- Advertisement -

ಇದೆ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಮತ್ತು ಶಿಕ್ಷಣದ ಮೂಲ ಭಾಗಿದಾರರು ತಮ್ಮ ಆಗ್ರಹವನ್ನು ಸಹ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ಜಿಲ್ಲಾಧ್ಯಕ್ಷರಾದ ಗಪೂರ್ ಖುಲಾಯಿ ಅವರು ಮಾತನಾಡುತ್ತಾ ಸರ್ಕಾರಿ ಶಾಲೆಯ ಅವಸ್ಥೆ ಮತ್ತು ಅದಕ್ಕಾಗಿ ಜನರು ಬೀದಿಗಿಳಿದು ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸುವುದು ಖೇದಕರ ಸಂಗತಿ, ಇಲಾಖೆಯೇ ಖುದ್ದಾಗಿ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಬದಲಾಗಿ ಸುಮ್ಮನೆ ಕುಳಿತಿರುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಐಓ ಬೆಂಗ್ರೆಯ ಸಂಚಾಲಕರಾದ ಸಹೋದರಿ ಅಸ್ಮಿನಾ ಅವರು ಮಾತನಾಡಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸಲು ನಾವೆಲ್ಲರೂ ಸೇರಿ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಆಸಿಫ್, ಜಿಲ್ಲಾ ಕಾರ್ಯದರ್ಶಿ ಅಯಾನ್ ಮತ್ತು ಬೆಂಗ್ರೆ ಘಟಕದ ಅಧ್ಯಕ್ಷ ಅಬ್ದುಲ್ ರಫಿ ಹಾಗೂ ಮತ್ತಿತರ ಕಾರ್ಯಕರ್ತರು ಮತ್ತು ಊರಿನ ಜನರು ಉಪಸ್ಥಿತರಿದ್ದರು.

Join Whatsapp