ಜಿಗ್ನೇಶ್ ಮೇವಾನಿ ಬಂಧನ: ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Prasthutha|

ಬೆಂಗಳೂರು: ಸುಳ್ಳು ಆರೋಪದಲ್ಲಿ ಗುಜರಾತ್ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಪಕ್ಷವು ರಾಜಕೀಯ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಈ ರೀತಿಯಾಗಿ ಬಾಯಿ ಮುಚ್ಚಿಸುವುದು ಸರ್ವಾಧಿಕಾರಿ ಧೋರಣೆ ಎಂದು ಅವರು ಕಿಡಿಕಾರಿದ್ದಾರೆ.

ಯಾವುದೇ ಹೇಳಿಕೆಗಳಿಂದ ಯಾರಿಗಾದರೂ ಮಾನ ನಷ್ಟವಾಗಿದ್ದರೆ ಸಂಬಂಧಿತರಿಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶ ಇದೆ. ಇದರ ಬದಲಿಗೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಫ್ಯಾಸಿಸ್ಟ್ ಬುದ್ದಿ. ಭಾರತದಲ್ಲಿ ಇದು ನಡೆಯದು ಎಂದು ಅವರು ತಿಳಿಸಿದ್ದಾರೆ.

- Advertisement -

ದೇಶವನ್ನು ಪ್ರೀತಿಸುವ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಜಿಗ್ನೇಶ್ ಮೇವಾನಿ ಜೊತೆಗೆ ಇದ್ದಾರೆ. ಒಬ್ಬ ಜಿಗ್ನೇಶ್ ರನ್ನು ಜೈಲಿಗೆ ಕಳುಹಿಸಿದ್ದೇವೆ ಎಂದು ಬೀಗುವುದು ಬೇಡ. ಈ ಬೆಳವಣಿಗೆಯಿಂದಾಗಿ ದೇಶದ ತುಂಬ ನೂರಾರು ಜಿಗ್ನೇಶರು ಹುಟ್ಟಿಕೊಂಡು ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದು ನೆನಪಿರಲಿ ಎಂದು ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

Join Whatsapp