’ಕೇಜ್ರೀವಾಲ್, ಹೇಮಂತ್ ಸೊರೆನ್ ರೀತಿಯಲ್ಲಿ ಸಿದ್ದರಾಮಯ್ಯ ಬಂಧನಕ್ಕೆ ಹುನ್ನಾರ’: ಸಚಿವ ಮಹದೇವಪ್ಪ

Prasthutha|

ಬೆಂಗಳೂರು: ಕೇಂದ್ರ ಸರ್ಕಾರವು, ಸಿದ್ದರಾಮಯ್ಯನವರ ವಿರುದ್ದ ರಾಜಕೀಯ ದ್ವೇಷದ ಕೆಲಸವನ್ನು ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ.

- Advertisement -


ಈ ಸಂಬಂಧ ಅವರು ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. “ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ರಾಜಕೀಯ ದ್ವೇಷದ ಕಾರಣಕ್ಕೆ ಬಂಧಿಸಿದ ಹಾಗೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು ಇದಕ್ಕಾಗಿ ತನ್ನ ಇಡಿ ಸಂಸ್ಥೆಯನ್ನು ಬಳಸಿಕೊಳ್ಳುವಂತಹ ಅಸಂವಿಧಾನಿಕ ಕೆಲಸವನ್ನು ಮಾಡುತ್ತಿದೆ” ಎಂದು ಸಚಿವ ಮಹದೇವಪ್ಪ ಆಪಾದಿಸಿದ್ದಾರೆ. ” ಕರ್ನಾಟಕದಲ್ಲಿ ಪ್ರಣಾಳಿಕೆಗಳನ್ನು ನೀಡಿ, ಅದಕ್ಕೆ ತಕ್ಕದಾಗಿ ನುಡಿದಂತೆ ನಡೆಯುವ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ವೈಯಕ್ತಿಕ ಹಿತಾಸಕ್ತಿಗಳೇ ವಿಜೃಂಭಿಸುತ್ತಾ, ಸರ್ಕಾರ ಎಂದರೆ ಯಾರೋ ಕೆಲವರಿಗೆ ಇರುವ ಅನುಕೂಲದ ವ್ಯವಸ್ಥೆ ಎಂಬಂತಾಗಿರುವ ಕಾಲದಲ್ಲಿ ಸರ್ಕಾರ ಎಂದರೆ ಜನರಿಗಾಗಿ ಇರುವ ವ್ಯವಸ್ಥೆ ಎಂದು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ED ಮೂಲಕ ಸಂಚು ಮಾಡುತ್ತಿರುವ ಕೇಂದ್ರ ಸರ್ಕಾರದ್ದು ಹೇಡಿಗಳ ನಡೆ”.


” ಇಂತಹ ಕುತಂತ್ರಗಳಿಂದ ಕೇಂದ್ರ ಸರ್ಕಾರವು ರಾಜ್ಯ ಜನರ ವಿರೋಧ ಎದುರಿಸುತ್ತದೆಯೇ ವಿನಃ, ಅದರಿಂದ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ದೊಡ್ಡ ಜನಬೆಂಬಲದ ಸಹಕಾರದಿಂದ ಮುಖ್ಯಮಂತ್ರಿಯಾಗಿ ಜನಪರವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅಂತಹ ಜನಪ್ರಿಯ ಮುಖ್ಯಮಂತ್ರಿಯನ್ನು ED ದುರ್ಬಳಕೆ ಸಂಚಿನಿಂದ ಬಂಧಿಸುವ ಹುನ್ನಾರವನ್ನು ಸಹಿಸಲಾದೀತೇ?”.
” ಜನವಿರೋಧಿಗಳಾದ ಈ ಭ್ರಷ್ಟ ಬಿಜೆಪಿಯವರಿಗೇ ಇಷ್ಟೊಂದು ಧೈರ್ಯ, ಭಂಡತನ ಇರಬೇಕಾದರೆ, ಜನಪರವಾಗಿ ಚಿಂತಿಸಿ ಅವರ ಬದುಕಿಗೆ ನೇರವಾಗಿ ಸಹಾಯ ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿರುವ ನಮಗೆ ಇನ್ನೆಷ್ಟು ಧೈರ್ಯ ವಿಶ್ವಾಸ ಇರಬೇಡ, ಅಲ್ಲವೇ? ” ಎಂದು ಸಚಿವ ಡಾ.ಮಹದೇವಪ್ಪ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.



Join Whatsapp