ಶಿವಮೊಗ್ಗ: ತಾಯಿಯ ವಿಯೋಗದ ನೋವಿನಲ್ಲೂ ಪರೀಕ್ಷೆ ಬರೆದ ಯುವತಿ

Prasthutha|

ರಿಪ್ಪನ್‌ಪೇಟೆ: ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಮೃತದೇಹ ಮನೆಯಲ್ಲಿದ್ದರೂ ನೋವಿನಲ್ಲೇ ವಿದ್ಯಾರ್ಥಿನಿಯೋರ್ವಳು ಪ್ರವೇಶ ಪರೀಕ್ಷೆ ಬರೆದಿರುವ ಘಟನೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ನಡೆದಿದೆ.

- Advertisement -


ಶಿವಮೊಗ್ಗದ ಮಹೇಶ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಅಂಕ ಪಡೆದಿರುವ ಸ್ಫೂರ್ತಿ (18) ಪದವಿ ಪಡೆಯಬೇಕೆಂಬ ಹೆಬ್ಬಯಕೆ ಹೊಂದಿದ್ದಳು. ಇದೀಗ ತಾಯಿಯ ವಿಯೋಗದ ನೋವಿನಲ್ಲೂ ಕೃಷಿ ಪದವಿಯ ಕನಸಿನೊಂದಿಗೆ ಪರೀಕ್ಷೆ ಬರೆದ ಸ್ಫೂರ್ತಿ ಯುವ ಪೀಳಿಗೆಗೆ ಮಾದರಿಯಾಗಿದ್ದಾಳೆ.

ಶಾಂತಪುರ ಗ್ರಾಮದ ನಾಗರಾಜ್ ಎಂಬವರ ಪತ್ನಿ ಅನುರಾಧ (45) ಎಂಬ ಮಹಿಳೆ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸೋಮವಾರ ಸಂಜೆ ಸಾವನ್ನಪ್ಪಿದ್ದರು.

- Advertisement -


ಮೃತದೇಹವನ್ನು ಮನೆಗೆ ತಂದು ಮಂಗಳವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಸ್ಫೂರ್ತಿ ಅವರ ಬಿಎಸ್‌ಸಿ ಕೃಷಿ ಪದವಿಗೆ ಪ್ರವೇಶ ಪರೀಕ್ಷೆ ನಿಗದಿಯಾಗಿತ್ತು. ಅಮ್ಮನ ಶವ ಮನೆಯಲ್ಲಿದ್ದರೂ ಹಿರಿಯರ ಮನವೊಪ್ಪಿಸಿ ನೋವಿನಲ್ಲೇ ಪರೀಕ್ಷೆ ಬರೆದು ನಂತರ ಮನೆಗೆ ಬಂದ ಮೇಲೆ ಅಮ್ಮನ ಶವ ಸಂಸ್ಕಾರವನ್ನು ನೆರವೇರಿಸಲಾಯಿತು.

Join Whatsapp