ಹಿರಿಯ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ನಿಧನ

Prasthutha|

ಚಿಕ್ಕಮಗಳೂರು: ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.ಸೋಮವಾರ ಮಧ್ಯಾಹ್ನ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಗೋಣಿಬೀಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

ಹಾಯ್ ಬೆಂಗಳೂರು ಪತ್ರಿಕೆ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ಮಾಡಿದ್ದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು. ಜನಶ್ರೀ ಸುದ್ದಿ ವಾಹಿನಿಯಲ್ಲಿಯೂ ಅವರು ಕೆಲಸ ಮಾಡಿದ್ದರು.

ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ ಹೆಗ್ಗರವಳ್ಳಿ ಹೊರಬಿದ್ದಿದ್ದರು. ನಂತರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಆರಂಭಿಸಿದ್ದರು. ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಕೆಲಸ ಮಾಡಿದ್ದರು. ಸುನಿಲ್ ಹೆಗ್ಗರವಳ್ಳಿ ಅಕಾಲಿಕ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.ಸುನೀಲ್ ಅವರು ತಂದೆ, ತಾಯಿ, ಪತ್ನಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.

Join Whatsapp