ಸ್ವಯಂಘೋಷಿತ ವಿಶ್ವಗುರು ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದು ಹಾಕಿದ್ದಾರೆ: ವಿ.ಎಸ್.ಉಗ್ರಪ್ಪ

Prasthutha|

ಬೆಂಗಳೂರು: ಭಾರತ ಅಹಿಂಸಾ ಧರ್ಮ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಭಾರತ ವಿಶ್ವಗುರು. ಪ್ರಸ್ತುತ ಸ್ವಯಂಘೋಷಿತ ವಿಶ್ವಗುರು ನರೇಂದ್ರ ಮೋದಿಯವರ ಹಾಗೂ ಭಾರತದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳೆದು ಹಾಕಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

- Advertisement -

*ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿ20 ಶ್ರಂಗಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕಾದ ಅಧ್ಯಕ್ಷ ಜೋಬೈಡನ್ ಅವರು ವಿಯೆಟ್ನಾಂ ದೇಶದಲ್ಲಿ ಮಾಧ್ಯಮದವರ ಮುಂದೆ ಮಾತನಾಡುತ್ತಾ “ಭಾರತದ ಪ್ರಧಾನಿ ಮೋದಿಯವರಿಗೆ ಕಿವಿಮಾತನ್ನು ಹೇಳಿದ್ದೇನೆ “ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು ಎಂದು ಹೇಳಿದ್ದೇನೆ” ಎಂದಿದ್ದಾರೆ.

ತನ್ನನ್ನು ತಾನು ವೈಭವೀಕರಿಸಿಕೊಳ್ಳುವ ಪ್ರಧಾನಿಗಳು ಅಮೆರಿಕಾದ ಅಧ್ಯಕ್ಷರಿಂದ ಕಿವಿಮಾತು ಹೇಳಿಸಿಕೊಳ್ಳುವ ದುಸ್ಥಿತಿ ಬಂದಿದೆ. ಯಾರೂ ಹೇಳದೆ ಇದ್ದರೂ ತಮ್ಮನ್ನು ತಾವೇ ವಿಶ್ವಗುರು ಎಂದು ಕರೆಸಿಕೊಳ್ಳುವ ಅವರಿಗೆ ಭಾರತದಲ್ಲಿ ಮಾನವ ಹಕ್ಕು, ಪತ್ರಿಕಾ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿದೆ ಎಂದು ತಿಳಿಯುತ್ತಿಲ್ಲವೇ. ಇವುಗಳಿಗೆ ಗೌರವ ಕೊಡಿ ಎಂದು ಅಮೆರಿಕಾದ ಅಧ್ಯಕ್ಷರು ಹೇಳಬೇಕೆ?

- Advertisement -

ಇದರಿಂದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳ ಸ್ವಾತಂತ್ರ್ಯವಿಲ್ಲ ಎಂಬ ವಿಚಾರ ಇಡೀ ವಿಶ್ವಕ್ಕೆ ಸ್ವಷ್ಟವಾದ ಸಂದೇಶ ಹೋಗಿದೆ. ಪ್ರಧಾನಿಗಳಿಗೆ ವಿಶ್ವಮಟ್ಟದಲ್ಲಿ ಕಪಾಳಮೋಕ್ಷವಲ್ಲವೇ? ಮಣಿಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.

ನಿಮ್ಮ ಪ್ರವೃತ್ತಿಯಿಂದ ಭಾರತಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದೀರಿ ಮೋದಿಯವರೇ. ಬಿಜೆಪಿಯವರು ದೇಶಕ್ಕೆ ಅಗೌರವ ತೋರಿಸುತ್ತಿದ್ದಾರೆ. ನಮ್ಮ ದೇಶ ಪರಂಪರೆ, ಸಂಸ್ಕೃತಿ ಮತ್ತು ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಬದ್ದತೆ ಇದ್ದರೆ ಬಿಜೆಪಿ ಮತ್ತು ಮೋದಿಯವರು ಈ ದೇಶದಲ್ಲಿ ನಡೆಯುತ್ತಿರುವ ಪತ್ರಿಕಾ ಸ್ವಾತಂತ್ರ್ಯಹರಣ ಮತ್ತು ಮಾನವ ಹಕ್ಕು ಉಲ್ಲಂಘನೆಗಳಿಗೆ ದೇಶದ ಜನರ ಬಳಿ ಕ್ಷಮೆ ಕೇಳಬೇಕು.

ಮಣಿಪುರದ ಘಟನೆಗಳ ಬಗ್ಗೆ ವಸ್ತುನಿಷ್ಠ ವರಧಿ ಮಾಡುವ ಪತ್ರಕರ್ತರ ವಿರುದ್ದ ಪ್ರಕರಣ ದಾಖಲಾಗುತ್ತದೆ. ಈಗಲಾದರೂ ನಿಮ್ಮ ಸೋಗಲಾಡಿತನ ಬಿಡಿ. ನೈಜ ದೇಶಪ್ರೇಮವನ್ನು ಮೂಡಿಸಿಕೊಳ್ಳಿ.

2024 ರ ಲೋಕಸಭಾ ಚುನಾವಣೆ ಇನ್ನೂ 8 ತಿಂಗಳು ದೂರವಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಹತಾಶೆಯ ಹಂತಕ್ಕೆ ತಲುಪಿವೆ. ಚುನಾವಣೆ ಮುಗಿದು ಇನ್ನೂ ಕೇವಲ 4 ತಿಂಗಳುಗಳು ಮಾತ್ರ ಆಗಿರುವುದು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವಿಲ್ಲ, ಗುಂಪುಗಾರಿಕೆ ಹೆಚ್ಚಾಗಿರುವ ಕಾರಣ ಬಿಜೆಪಿಯಲ್ಲಿ ಯಾರು ನಾಯಕರು ಎನ್ನುವ ಗೊಂದಲವಿದೆ. ವಿಧಾನಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನಿಲ್ಲ, ಮುಖ್ಯ ಸಚೇತಕರು ಇಲ್ಲ.

ಕಾವೇರಿ ನೀರು ಹರಿಯುತ್ತಾ ಇದ್ದರೆ ಅದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ. ಈ ರಾಜ್ಯದಲ್ಲಿ ವಿರೋಧ ಪಕ್ಷ ಜೀವಂತವಾಗಿದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನೀರು ನಿಲ್ಲಸಬಹುದಿತ್ತು. ನಾವು 2008 ರಲ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿತ್ತು. ಆಗ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರ ಬಳಿ ಮಾತನಾಡಿ ವೈಮಾನಿಕ ಸಮೀಕ್ಷೆ ಮಾಡಿಸಿ, ಸ್ಥಳದಲ್ಲೇ 1200 ಕೋಟಿ ಹಣವನ್ನು ಬಿಡುಗಡೆ ಆಗುವಂತೆ ಮಾಡಿದ್ದೆವು.

ಕರ್ನಾಟಕದ 25 ಜನ ಎಂಪಿಗಳು ಬಿಜೆಪಿಯವರು. ಇದುವರೆಗೂ ಒಂದೇ ಒಂದು ಮಾತನ್ನು ಕಾವೇರಿ ನೀರಿನ ವಿಚಾರವಾಗಿ ಮಾತನಾಡಿಲ್ಲ. ರಾಜ್ಯದ ಬಗ್ಗೆ ಬದ್ದತೆ ಇಲ್ಲ ಬಿಜೆಪಿಯವರಿಗೆ.

ಜನತಾಪಕ್ಷದಿಂದ ಬಿಜೆಪಿಯವರು ಹೊರ ಬರಲು ಕಾರಣ ದ್ವಿಸದಸ್ಯತ್ವ. ಅಂದರೆ ಅವರುಗಳು ಆರ್ಎಸ್ಎಸ್ ಹಾಗೂ ಜನತಾ ಪಕ್ಷ ಎರಡೂ ಕಡೆ ಸದಸ್ಯತ್ವ ಹೊಂದಿದ್ದರು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಅದಕ್ಕೆ ಪಕ್ಷ ತೊರೆದು ಬೇರೆ ಪಕ್ಷ ಮಾಡಿಕೊಂಡರು. ಈಗ ಜನತಾ ಪಕ್ಷಕ್ಕೆ ಬದ್ದತೆಯೇ ಇಲ್ಲ. ಹಿರಿಯರಾದ ದೇವೆಗೌಡರಿಗೆ ಬದ್ದತೆ ಇದೆ, ಕುಮಾರಸ್ವಾಮಿ ಅವರಿಗೆ ಯಾವುದೇ ಸಿದ್ದಾಂತವಿಲ್ಲ. ದೇವೇಗೌಡರನ್ನು ಹೈಜಾಕ್ ಮಾಡಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ನಲ್ಲಿ “ಎಸ್” ತೆಗೆಯಬೇಕು.
ಬಿಜೆಪಿ- ಜೆಡಿಎಸ್ ಎರಡೂ ಒಡೆದ ಮನೆಗಳು. ಇಬ್ಬರೂ ಸೇರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಗೆಲ್ಲದೇ ಇದ್ದ ಪಕ್ಷದಲ್ಲಿ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತೀರಾ? 2019 ರಲ್ಲಿ ಪುಲ್ವಾಮಾ ಘಟನೆಯ ಬಗ್ಗೆ ಸುಳ್ಳು ಹೇಳಿಕೊಂಡು ಲೋಕಸಭಾ ಚುನಾವಣೆ ಗೆದ್ದರೆ ಹೊರತು ಬೇರೆ ಸಾಧನೆ ಇಲ್ಲ.

ಬಿಜೆಪಿ- ಜೆಡಿಎಸ್ ಪಕ್ಷಗಳಿಗೆ ಅಧಿಕಾರದ ದಾಹ ಬಿಟ್ಟರೆ ಇನ್ನೇನು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ದಿನದಿಂದ ದಿನಕ್ಕೆ ಹಿಂಬಾಲಕರು ಹೆಚ್ಚಾಗುತ್ತಿದ್ದಾರೆ. ಜೆಡಿಎಸ್ನವರು ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಜೊತೆ ಹೋಗಿದ್ದರು, ಈಗ ಅವರನ್ನು ಬಿಟ್ಟುಬಿಟ್ಟಿದ್ದಾರೆ. ದೇವೆಗೌಡರು ಜೀವನದ ಉದ್ದಕ್ಕೂ ಬಿಜೆಪಿ ಸಿದ್ದಾಂತದ ವಿರುದ್ದ ಇದ್ದವರು ಈಗ ಇಳಿವಯಸ್ಸಿನಲ್ಲಿ ಇಂತಹ ಸ್ಥಿತಿಗೆ ಬಂದರಲ್ಲ ಎನ್ನುವ ನೋವಿದೆ. ಜೆಡಿಎಸ್ ನವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ದ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.

ಈ ದೇಶದಲ್ಲಿ ಮತೀಯ ಶಕ್ತಿಗಳನ್ನು ಓಡಿಸಿ ಮತ್ತೆ ಶಾಂತಿ, ಸೌಹಾರ್ದಯುತ ಸಮಾಜವನ್ನು ನಿರ್ಮಾಣ ಮಾಡುವುದೇ ಕಾಂಗ್ರೆಸ್ ಪಕ್ಷದ ಗುರಿ. ರಾಜ್ಯದಲ್ಲಿ ಯಾರೇ ಒಂದಾದರೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ. ನಾವು ಕನಿಷ್ಟ 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮ ಜನಪರ ಯೋಜನೆಗಳಿಂದ ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದೇವೆ.



Join Whatsapp