ಚಿಂತಕ, ಹೋರಾಟಗಾರ ಜಿ.ರಾಜಶೇಖರ್ ನಿಧನ: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತಾಪ

Prasthutha|

ಬೆಂಗಳೂರು; ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ, ಉತ್ತಮ ವಾಗ್ಮಿ, ಫ್ಯಾಸಿಸ್ಟ್ ಸಿದ್ಧಾಂತಗಳ ಪ್ರಖರ ವಿರೋಧಿಯಾಗಿದ್ದ ಜಿ.ರಾಜಶೇಖರ್ ರವರ ನಿಧನಕ್ಕೆ ಎಸ್‌ ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಜಿ.ರಾಜಶೇಖರ್ ಅವರು ರಾಜ್ಯದಲ್ಲಿ ಕೋಮು ಸಾಮರಸ್ಯ, ಶಾಂತಿ ಸೌಹಾರ್ದತೆಗಾಗಿ ನಿರಂತರವಾಗಿ ಶ್ರಮಿಸಿದವರು. ಸದಾ ನ್ಯಾಯದ ಪರ ನಿಲ್ಲುತ್ತಿದ್ದ ಅವರು ಬಾಬಾ ಬುಡನ್ ಗಿರಿಯನ್ನು ಹಿಂದುತ್ವ ಶಕ್ತಿಗಳು ವಿವಾದವಾಗಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತ, ದಲಿತರ ಮೇಲೆ ದಾಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ಖಂಡಿಸಿ ಹೋರಾಟಕ್ಕೆ ನೇತೃತ್ವ ನೀಡಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ ಸ್ವತಃ ಅವರೇ ಆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಎಸ್‌ ಡಿಪಿಐಯ ಸಿದ್ಧಾಂತಗಳನ್ನು ಹೋರಾಟಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರಲ್ಲದೇ ಪಕ್ಷದ ಅನೇಕ ಹೋರಾಟಗಳ ಭಾಗವಾಗಿದ್ದರು. ಸರಳ ಪ್ರಾಮಾಣಿಕ ಹಾಗೂ ನೇರ ನಿಷ್ಠುರ ಹೋರಾಟಗಾರನಾಗಿದ್ದ ಇವರ ಅಗಲುವಿಕೆಯು ಶೋಷಿತ ಸಮುದಾಯಕ್ಕೆ ಹಾಗೂ ಫ್ಯಾಸಿಸ್ಟ್ ವಿರೋಧಿ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಇವರ ಕುಟುಂಬ, ಬಂದು ಬಳಗ, ಅಭಿಮಾನಿ ವರ್ಗಕ್ಕೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮಜೀದ್ ಮೈಸೂರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp