NDA ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ SDPI ರಾಷ್ಟ್ರವ್ಯಾಪಿ ಪ್ರತಿಭಟನೆ

Prasthutha|

ಹುಬ್ಬಳ್ಳಿ: ಮೋದಿಯವರು ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರವಹಿಸಿಕೊಂಡ ಕ್ಷಣದಿಂದ ಅವರ NDA ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ಧಾರವಾಡ ಜಿಲ್ಲಾ ಸಮಿತಿಯಿಂದ ನ್ಯೂ ಇಂಗ್ಲೀಷ್ ಸ್ಕೂಲ್ ವೃತ್ತ ದಲ್ಲಿ ಪ್ರತಿಭಟನೆ ನಡೆಸಿತು.

- Advertisement -

ಮಹಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ಜೂನ್ 4ನೇ ತಾರೀಖಿನಿಂದ ಇಲ್ಲಿಯವರೆಗೆ ಸಾಲು ಸಾಲು ಗುಂಪು ಹತ್ಯೆಗಳು, ಶೋಷಣೆ ಮತ್ತು ಮುಸ್ಲಿಮರ ಅಂಗಡಿ ಲೂಟಿ ಮಾಡುವ ಹೀನ ಕೃತ್ಯಗಳು ನಡೆದಿವೆ. ಅವುಗಳಲ್ಲಿ ಬಲಿಯಾದವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಮರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಜೂನ್ 7ನೇ ತಾರೀಖು ಚತ್ತೀಸಘಡದಲ್ಲಿ ಮೂವರು ಮುಸ್ಲಿಂ ಹುಡುಗರ ಮೇಲೆ ಗೋರಕ್ಷಣೆ ಹೆಸರಿನ ಗೂಂಡಾ ಗುಂಪು ಹಲ್ಲೆ ಮಾಡಿ ಅವರನ್ನು ಕೊಂದು ಹಾಕಿತ್ತು.

ಜೂನ್ 14 ರಂದು ಗುಜರಾತಿನ ಮುಸ್ಲಿಂ ಮಹಿಳೆಗೆ ಸರ್ಕಾರವೇ ನೀಡಿದ್ದ ಮನೆಗೆ ಪ್ರವೇಶಿಸಲು ಅಲ್ಲಿನ ಸ್ಥಳೀಯ ಮತಾಂಧರು ಬಿಡಲಿಲ್ಲ. ಇನ್ನು ಜೂನ್ 16 ರಂದು ಮಧ್ಯಪ್ರದೇಶದ ಒಂದು ಮುಸ್ಲಿಂ ಮನೆಯಲ್ಲಿ ದನದ ಮಾಂಸ ದೊರಕಿತು ಎಂಬ ಆರೋಪದ ಹಿನ್ನಲೆಯಲ್ಲಿ ಆ ಬೀದಿಯ ಮುಸ್ಲಿಮರಿಗೆ ಸೇರಿದ 13 ಮನೆಗಳನ್ನು ಬುಲ್ಲೋಜರ್ ಬಳಸಿ ದ್ವಂಸ ಮಾಡಲಾಯಿತು.

- Advertisement -

ಅದೇ ರೀತಿ ಜೂನ್ 19ನೇ ತಾರೀಖು ಹಿಮಾಚಲ ಪ್ರದೇಶದಲ್ಲಿ ಬಕ್ರೀದ್ ದಿನ ಪ್ರಾಣಿ ಹತ್ಯೆಯಾಗಿದ ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಗೆ ಸೇರಿದ ಬಟ್ಟೆ ಅಂಗಡಿಯನ್ನು ದ್ವಂಸ ಮಾಡಿ ಅಲ್ಲಿದ್ದ ಬಟ್ಟೆಗಳನ್ನು ಲೂಟಿ ಮಾಡಲಾಯಿತು. ಅದೇ ದಿನ ಉತ್ತರ ಪ್ರದೇಶದ ಅಲಿಗಡದಲ್ಲಿ ಯುವಕನನ್ನು ಕಳ್ಳತನದ ಆರೋಪದ ಮೇಲೆ ಗುಂಪು ಹತ್ಯೆ ಮಾಡಲಾಯಿತು. ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಇರಲಿದೆ. ನಿನ್ನೆ ಅಂದರೆ ಜುಲೈ 9ನೇ ತಾರೀಖು ಸಹ ಜಾರ್ಖಂಡ್ ನಲ್ಲಿ ಮುಸ್ಲಿಂ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ.

ಇಷ್ಟೆಲ್ಲ ದೌರ್ಜನ್ಯಗಳು ನಡೆಯುತ್ತಿದ್ದರೂ ಅಲ್ಪಸಂಖ್ಯಾತರ ಮತ್ತು ದಲಿತರ ಹಿತ ಕಾಯುತ್ತೇವೆ ಎಂದು ವಾಗ್ದಾನ ನೀಡಿ ಅವರ ಮತಗಳನ್ನು ಪಡೆಯುವ ಮೂಲಕ ತಮ್ಮ ಶಕ್ತಿ ವೃದ್ಧಿಸಿಕೊಂಡಿರುವ ಕಾಂಗ್ರೇಸ್ ಮತ್ತು ಇತರೆ ಪಕ್ಷಗಳು ಈ ಕುರಿತ ಮೌನ ವಹಿಸಿವೆ. ಇದು ಅವರು ಈ ಎರಡೂ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹ. ವಿಪಕ್ಷಗಳ ಈ ಸ್ವಾರ್ಥ ನಡೆಯನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಎಂದು ಪಕ್ಷ ತನ್ನ ಪ್ರತಿಭಟನೆ ಮೂಲಕ ತಿಳಿಸಿದೆ.

ಇದೆಲ್ಲವೂ ಸಹ ಬಿಜೆಪಿ, ಸಂಘಪರಿವಾರ ಮತ್ತು ಸ್ವತಃ ಮೋದಿಯವರೇ ಹಬ್ಬುತ್ತಿರುವ ದ್ವೇಷದ ಕಾರಣಕ್ಕೆ ನಡೆಯುತ್ತಿರುವ ಅನಾಗರೀಕ ಕೃತ್ಯಗಳು ಎಂದಿರುವ ಎಸ್.ಡಿ.ಪಿ.ಐ, ಮೋದಿ ಸರ್ಕಾರ ತನ್ನ ದ್ವೇಷ ಬಿತ್ತುವ ಚಟಕ್ಕೆ ಅಯೋಧ್ಯೆ ಸೇರಿ ದೇಶದಲ್ಲಿ 63 ಸ್ಥಾನಗಳನ್ನು ಮೊನ್ನೆಯ ಚುನಾವಣೆಯಲ್ಲಿ ಕಳೆದುಕೊಂಡು ಈಗ ಅವರಿವರ ಸಹಾಯದಿಂದ ಅಧಿಕಾರ ಉಳಿಸಿಕೊಂಡಿದೆ.

ಬಿಜೆಪಿ ಇದೇ ರೀತಿ ತನ್ನ ದ್ವೇಷ ನೀತಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಜನರ ಆ ಪಕ್ಷವನ್ನು ಸಂಪೂರ್ಣವಾಗಿ ಕಿತ್ತು ಬಿಸಾಡಲಿದ್ದಾರೆ. ಜೊತೆಗೆ ನಮ್ಮ ಪಕ್ಷ ಇದರ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಸ್.ಡಿ.ಪಿ.ಐ ತನ್ನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದೆ.

ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಜಿಲ್ಲಾಧ್ಯಕ್ಷರಾದ ಸಲೀಂ ಅರಳಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ,ಜಿಲ್ಲಾ ಖಜಾಂಚಿ ಮಲಿಕ್ ಜಾನ್ ಕಳಸ್, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಜಬ್ಬಾರ್, ಇಸ್ಮಾಯಿಲ್ ನಾಲ್ಬಂದ್, ಇಮಾಮ್ ಧಾರವಾಡ,ಮತ್ತು ವಾರ್ಡಿನ ಅಧ್ಯಕ್ಷರು & ಕಾರ್ಯದರ್ಶಿಗಳು ಹಾಗೂ ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



Join Whatsapp