September 28, 2020
ಪವರ್ ಟಿವಿ ವಿರುದ್ಧ ಸೇಡಿನ ಕ್ರಮ: ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಿಂದ ಖಂಡನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪರವರ ಪುತ್ರ ವಿಜಯೇಂದ್ರರವರು ನಡೆಸಿದ್ದಾರೆನ್ನಲಾದ ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಪವರ್ ಟಿವಿ ನಿರ್ದೇಶಕರ ಮನೆಯ ಮೇಲೆ ದಾಳಿ ಹಾಗೂ ನಿರೂಪಕನ ಬಂಧನವು ಬಿಜೆಪಿ ಸರಕಾರದ ಸೇಡಿನ ಕ್ರಮವಾಗಿದ್ದು, ಇದು ಅತ್ಯಂತ ನಾಚಿಕೆಗೇಡು ಎಂಬುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಬಿಜೆಪಿ ನಡೆಸುವ ಇಂತಹ ದಾಳಿಗಳು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದು ಮಾಧ್ಯಮಗಳ ಬಾಯಿಮುಚ್ಚಿಸುವ ಯತ್ನವಲ್ಲದೆ ಇನ್ನೇನೂ ಅಲ್ಲ. ಹಿಟ್ಲರ್ ಕೂಡ ಇದೇ ರೀತಿ ಆತನ ವಿರುದ್ಧ ಮಾತನಾಡಿದವರ ಮೇಲೆ ಸೇನಾ ಬಲದ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದನು. ರಾಜ್ಯದ ಮುಖ್ಯಮಂತ್ರಿಗಳು ಹಿಟ್ಲರ್ ನ ಹಾದಿಯನ್ನು ತುಳಿಯುತ್ತಿದ್ದು, ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಇಲ್ಯಾಸ್ ಮುಹಮ್ಮದ್ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಯ ಪುತ್ರ ಭಾರಿ ಭ್ರಷ್ಟಾಚಾರ ಮಾಡಿರುವಾಗ ರಾಜೀನಾಮೆ ಪಡೆದು ತನಿಖೆಗೆ ಆದೇಶಿಸುವ ಬದಲಾಗಿ ಭ್ರಷ್ಟಾಚಾರ ವರದಿ ಮಾಡಿದ ಮಾಧ್ಯಮದ ಮೇಲೆ ದಾಳಿ ನಡೆಸಿರುವುದು ನಾಚಿಕೆಗೇಡು. ಈ ರೀತಿಯ ದಾಳಿ ಬಂಧನಗಳಿಂದ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹತ್ತಿಕ್ಕಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಆದರೆ ಬಿಜೆಪಿ ಸರಕಾರದ ಇಂತಹ ಅನೈತಿಕ ಕ್ರಮಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಿಚ್ಚನ್ನು ಹೆಚ್ಚಿಸಲಿದೆ. ಭ್ರಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಾಬೀತುಪಡಿಸುವ ವರೆಗೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಹಾಗೂ ಜಂಟಿ ಸಮಿತಿಯಿಂದ ತನಿಖೆ ನಡೆಸಲಿ ಎಂದು ಇಲಿಯಾಸ್ ತುಂಬೆ ಆಗ್ರಹಿಸಿದ್ದಾರೆ.