ಮೊಬೈಲ್ ಚಾರ್ಜರ್ ವಿಷಯದಲ್ಲಿ ಗಲಾಟೆ, ಕೊಲೆಯಲ್ಲಿ ಅಂತ್ಯ

Prasthutha|

ಶಿವಮೊಗ್ಗ: ಮೊಬೈಲ್ ಚಾರ್ಜ್‌ಗೆ ಇಡುವ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಾಗರ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿನಡೆದಿದೆ.

- Advertisement -


ಮುರಳ್ಳಿ ಮರಾಠಿ ಗ್ರಾಮದ ತಿಮ್ಮಪ್ಪ (57) ಕೊಲೆಗೀಡಾದ ವ್ಯಕ್ತಿ. ತಿಮ್ಮಪ್ಪ ಅವರ ಮನೆಗೆ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳಲು ಸಿದ್ದಪ್ಪ (37) ಎಂಬಾತ ಹೋಗಿದ್ದ. ಈ ವಿಚಾರಕ್ಕೆ ಸಂಬಂಧಿಸಿ ತಿಮ್ಮಪ್ಪ ಹಾಗೂ ಆತನ ಹೆಂಡತಿ ಲಕ್ಷ್ಮೀ ಜೊತೆ ಗಲಾಟೆಯಾಗಿದೆ. ಕೋಪಗೊಂಡ ಸಿದ್ದಪ್ಪ, ತಿಮ್ಮಪ್ಪನ ಮನೆಯಲ್ಲಿದ್ದ ದೊಣ್ಣೆ ತೆಗೆದು ಮನೆಯ ಮೇಲಿನ ಡಿಶ್ ಬುಟ್ಟಿಗೆ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅದೇ ದೊಣ್ಣೆಯಿಂದ ತಿಮ್ಮಪ್ಪನಿಗೂ ಹೊಡೆದು ಗಾಯಗೊಳಿಸಿದ್ದಾನೆ. ಗಾಯಾಳು ತಿಮ್ಮಪ್ಪನನ್ನು ಸಾಗರ ಆಸ್ಪತ್ರೆಗೆ ಸಾಗಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.


ತಿಮ್ಮಪ್ಪನ ಹೆಂಡತಿ ಲಕ್ಷ್ಮಿ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Join Whatsapp