ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶೀಘ್ರ ಶಾಲಾ-ಕಾಲೇಜು ಆರಂಭ: ಸಚಿವ ಸೋಮಶೇಖರ್

Prasthutha|

ಚಾಮರಾಜನಗರ(ಕೊಳ್ಳೇಗಾಲ): ಶೇಕಡಾ 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಕಡೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ತಾಲೂಕುಗಳ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಸಮಗ್ರ ವಿವರಣೆಯನ್ನು ಪಡೆದುಕೊಂಡರು. ಬಳಿಕ ಶೀಘ್ರದಲ್ಲಿ ಶಾಲೆ-ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

- Advertisement -

ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ಕೋವಿಡ್ 19ರ ಸ್ಥಿತಿಗತಿಗಳು, ತೆಗೆದುಕೊಂಡ ಕ್ರಮಗಳು ಹಾಗೂ ಇದೇ ಆಗಸ್ಟ್ ಕೊನೇ ವಾರದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಶೇಕಡಾ 2ಕ್ಕಿಂತ ಕಡಿಮೆ ಇದೆ. ಆದರೆ, ಇದು ಕೇರಳ ಹಾಗೂ ತಮಿಳುನಾಡು ಗಡಿಭಾಗವನ್ನು ಹೊಂದಿರುವುದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಈಗಾಗಲೇ ಸೂಚನೆ ಇದೆ. ಕಳೆದ ವರ್ಷದ ಮಾಹಿತಿಯಂತೆ ಜಿಲ್ಲೆಯಲ್ಲಿ 9 ಮತ್ತು 10ನೇ ತರಗತಿಯ 37,580 ವಿದ್ಯಾರ್ಥಿಗಳಿದ್ದು, ಇವರಲ್ಲಿ 1716 ಮಕ್ಕಳು ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದರು. ಎಸ್ಎಸ್ಎಲ್‌ಸಿಯಿಂದ ಉತ್ತೀರ್ಣರಾಗಿ ಪ್ರಥಮ ಪಿಯುಸಿ ಅಭ್ಯಾಸ ಮಾಡಲಿರುವ 11,600 ಮಕ್ಕಳಿದ್ದು, ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ 7502 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 1628 ಶಿಕ್ಷಕರಿದ್ದು, ಇವರಲ್ಲಿ 1328 ಶಿಕ್ಷಕರಿಗೆ ವ್ಯಾಕ್ಸಿನೇಶನ್ ಆಗಿದೆ ಎಂದು ಅಧಿಕಾರಿಗಳು ಸಭೆಯ ಮೂಲಕ ಸಚಿವರ ಗಮನಕ್ಕೆ ತಂದರು. ಆಗ ಮಾತನಾಡಿದ ಸಚಿವರು, ಬಾಕಿ ಉಳಿದಿರುವ 294 ಮಂದಿಗೆ ಶೀಘ್ರವೇ ಲಸಿಕೆ ಹಾಕಿಸಬೇಕು. ಎಲ್ಲರೂ ಸಂಪೂರ್ಣ ವ್ಯಾಕ್ಸಿನೇಶನ್ ಪಡೆಯಬೇಕು ಎಂದು ಸೂಚನೆ ನೀಡಿದರು.

- Advertisement -

ಸರ್ಕಾರದ ಮಾರ್ಗಸೂಚಿ ಅನುಸರಿಸಿ- ಎಸ್ ಟಿ ಎಸ್ ಸೂಚನೆ
ಶಾಲೆಯ ಆರಂಭದ ಸಂದರ್ಭದಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸರ್ಕಾರದ ಮಾರ್ಗಸೂಚಿಗಳು ಪ್ರಕಟವಾಗಲಿದೆಯೋ ಅದನ್ನು ತಪ್ಪದೇ ಪಾಲಿಸಬೇಕು. ಇನ್ನು ಹಾಸ್ಟೆಲ್ ಗಳಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳ ಆರೋಗ್ಯವೂ ಬಹುಮುಖ್ಯವಾಗಿದ್ದು, ಇಂತಹ ಮಕ್ಕಳ ಸುರಕ್ಷತೆಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿ, ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ತಾವೂ ಗಮನಹರಿಸುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.

ಮನೆಗೇ ಬಿಸಿಯೂಟ ಆಹಾರ ಸಾಮಗ್ರಿ ತಲುಪಿಸಿ- ಎಸ್ ಟಿ ಎಸ್
ಬಿಸಿಯೂಟ ಸೌಲಭ್ಯದ ಅಡಿ ಬರುವ ವಿದ್ಯಾರ್ಥಿಗಳಿಗೆ 2 ತಿಂಗಳ ಅವಧಿಯ ಧಾನ್ಯಗಳ ಸಹಿತ ಆಹಾರ ಸಾಮಗ್ರಿಗಳನ್ನು ಅವರ ಮನೆಗೆ ಯಾವುದೇ ಲೋಪವಾಗದಂತೆ ತಲುಪಿಸುವ ಕೆಲಸಗಳು ಆಗಬೇಕು. ಇನ್ನುಳಿದಂತೆ ಶಾಲಾ-ಕಾಲೇಜು ಆವರಣಗಳಲ್ಲಿ ಸ್ವಚ್ಛತೆ, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಈ ವೇಳೆ ಶಾಸಕರಾದ ನರೇಂದ್ರ, ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರ್ ರವರು, ಜಿಲ್ಲಾ ವರಿಷ್ಠಾಧಿಕಾರಿಗಳು, ಡಿಡಿಪಿಐ, ಬಿಇಒಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp