ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಹೇಳಿ: ಪ್ರಿಯಾಂಕ್ ಖರ್ಗೆ

Prasthutha|

ಫೆ.7ರಂದು ದೆಹಲಿಯಲ್ಲಿ ನಾಡಿನ ಪರವಾಗಿ ಕಾಂಗ್ರೆಸ್ ಪ್ರತಿಭಟನೆ

- Advertisement -

ಬೆಂಗಳೂರು: ಬಿಜೆಪಿಯವರು ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಎಂದು ಹೇಳಲಿ. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ನಾಡಿನ ಪರವಾಗಿ ಸಂಸತ್‍ನ ಒಳಗೆ ದನಿ ಏರಿಸಿ ಮಾತನಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.7ರಂದು ದೆಹಲಿಯಲ್ಲಿ ನಾಡಿನ ಪರವಾಗಿ ಕಾಂಗ್ರೆಸ್ ನಡೆಸಲಿರುವ ಪ್ರತಿಭಟನೆಗೆ ಬಿಜೆಪಿಯವರು ಬೆಂಬಲ ನೀಡಬೇಕು. ನಿಜವಾಗಿಯೂ ಅವರಿಗೆ ಕನ್ನಡಿಗರು, ಕರ್ನಾಟಕದ ಬಗ್ಗೆ ಕಾಳಜಿ ಇದುದ್ದೇ ಆದರೆ ನಮ್ಮ ಜತೆ ಕೈ ಜೋಡಿಸಲಿ ಎಂದು ಹೇಳಿದ್ದಾರೆ.

- Advertisement -

ನಾವು ಸಂಸತ್‍ನ ಹೊರಗೆ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು, ಸಂಸತ್ ಒಳಗೆ ದನಿ ಎತ್ತಲಿ. ಅವರಿಗೆ ಯಾವುದೇ ಭಯ ಬೇಡ. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಮ್ಮ ಸಂಸದರ ಬೆನ್ನಿಗೆ ನಿಲ್ಲಲಿದೆ. ಮೋದಿಯ ಭಯದಿಂದಾಗಿ ಮೌನವಾಗಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.

ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮಗೆ 44 ಸಾವಿರ ಕೋಟಿ ನೀಡಿದರೆ ಉತ್ತರಪ್ರದೇಶಕ್ಕೆ 2.18 ಲಕ್ಷ ಕೋಟಿ, ಮಧ್ಯಪ್ರದೇಶ, ಬಿಹಾರಕ್ಕೆ 2 ಲಕ್ಷ ಕೋಟಿ ರೂ. ನೀಡಲಾಗಿದೆ. ಇದು ಅನ್ಯಾಯವಲ್ಲವೇ? ಬರ ಬಾತ ಪ್ರದೇಶಗಳಿಗೆ ನಾವು ಕೇಳಿದ್ದು ಬರೀ 18 ಸಾವಿರ ಕೋಟಿ ರೂಪಾಯಿ. ಅದನ್ನೂ ನೀಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳ ಪ್ರಮಾಣವನ್ನು 100ರಿಂದ 150 ದಿನಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ. ನಾಲೈದು ಬಾರಿ ದೆಹಲಿಗೆ ಹೋಗಿ ಸಚಿವರ ಕಚೇರಿ ಬಾಗಿಲು ಕಾದಿದ್ದಾಗಿದೆ. ಯಾವುದೂ ಪ್ರಯೋಜನವಾಗಿಲ್ಲ ಎಂದರು.

Join Whatsapp