ಸಾರಾ ಅಬೂಬಕ್ಕರ್ ಅವರಿಗೆ ಬರಗೂರು ಪ್ರಶಸ್ತಿ

Prasthutha|

ಬೆಂಗಳೂರುಃ ಕರಾವಳಿಯ ಹಿರಿಯ ಕನ್ನಡ ಲೇಖಕಿ ಸಾರಾ ಅಬೂಬಕ್ಕರ್ (85) ಅವರಿಗೆ ನಾಡೋಜ ಬರಗೂರು ಪ್ರತಿಷ್ಠಾನ ಕೊಡಮಾಡುವ ಬರಗೂರು ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

- Advertisement -

ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಮತ್ತು ಚಿನ್ನದ ಪದಕ ಒಳಗೊಂಡಿದೆ.

ಪ್ರಶಸ್ತಿಯನ್ನು ಸಾರಾ ಅಬೂಬಕ್ಕರ್ ಅವರ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ನಿವಾಸದಲ್ಲೇ ಮಾರ್ಚ್ 29ರಂದು ಮಧ್ಯಾಹ್ನ 12 ಗಂಟೆಗೆ ಪ್ರದಾನ ಮಾಡಲಾಗುವುದು ಎಂದು ನಾಡೋಜ ಬರಗೂರು ಪ್ರತಿಷ್ಠಾನ ಪ್ರಕಟಿಸಿದೆ.

- Advertisement -

ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸುಂದರರಾಜ ಅರಸು ಪ್ರಶಸ್ತಿ ಪ್ರದಾನ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರತಿನಿಧಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಮಲೆಯಾಳಂ ಸಾಹಿತಿ ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವದಿಂ ಬರೆಯಬೇಕೆಂಬ ಅಂತರಾಳದ ಒತ್ತಡದಿಂದ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು. ಆನಂತರದಲ್ಲಿ ಸಾ.ರಾ.ಅಬೂಬಕ್ಕರ್ ಅವರು ಬರೆದ ಇತರ ಹಲವಾರು ಕಾದಂಬರಿಗಳು , ಸಣ್ಣ ಕತೆಗಳನ್ನು ಪ್ರಕಟಿಸಿದ್ದಾರೆ.

ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ,ಪಂಜರ, ಕಾಣಿಕೆ, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ , ಸುಮಯ್ಯಾ (ಜನಪದ ಆಧರಿಸಿದ ಕಥೆಗಳು), ಕಮರಿದ ಕನಸು.ತೇಲಾಡುವ ಮೋಡಗಳು., ಹೀಗೂ ಒಂದು ಬದುಕು, ಮನೋಮಿ,ಐಷಾರಾಮದ ಆಳದಲ್ಲಿ ಪ್ರವಾಸಕಥನ ಇವು ಸಾರಾ ಅಬೂಬಕ್ಕರ್ ಅವರ ಇತರ ಪ್ರಮುಖ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಸಂದೇಶ ಪ್ರಶಸ್ತಿ.ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ., ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ. ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಸಾರಾ ಅಬೂಬಕ್ಕರ್ ಪಡೆದುಕೊಂಡಿದ್ದಾರೆ.

ತಮ್ಮಂತೆಯೇ ಅನೇಕ ಮಹಿಳೆಯರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸಾರಾ ಆಶಯ. 1987ರಲ್ಲಿ ಸಾರಾ ಅಬೂಬಕ್ಕರ್ ಮತ್ತು ಅವರ ವಾರಗೆಯ ಲೇಖಕಿಯರಾದ ಲೀಲಾವತಿ ಎಸ್. ರಾವ್, ಚಂದ್ರಕಲಾ ನಂದಾವರ, ಮನೋರಮಾ ಎಂ., ಪದ್ಮಾ ಶೆಣೈ ಸೇರಿ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘವನ್ನು ಸ್ಥಾಪಿಸಿದರು.



Join Whatsapp